ಧಾರವಾಡ:- ಪೇಪರ್ ಬಂಡಲ್ ಗಳನ್ನ ನೋಟುಗಳಂತೆ ಬ್ಯಾಗನಲ್ಲಿ ಕಟ್ಟಿ ತಂದು ವಂಚಕರು ಮೋಸ ಮಾಡಿರುವ ಘಟನೆ ಧಾರವಾಡ ನಗರದ ಉಪ ನೊಂದಣಾಧಿಕಾರಿ ಕಚೇರಿಯಲ್ಲಿ ಜರುಗಿದೆ. ಜಮೀನು ವ್ಯವಹಾರಕ್ಕೆ ಸಂಬಂಧಿಸಿದಂತೆ ಕೊಡಬೇಕಿದ್ದ ಹಣದ ಕಂತೆಯನ್ನು ಮೊದಲು ತೋರಿಸಿ, ಆ ಬಳಿಕ ಪೇಪರ್ಗಳಿರುವ ಬಂಡಲ್ನ್ನೇ ಹಣ ಅಂತ ಕೊಟ್ಟು ಮಾಜಿ ಯೋಧ ಸೇರಿದಂತೆ ಐವರಿಗೆ ವಂಚಿಸಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೆಟ್ರೋ ಪ್ರಯಾಣಿಕರೇ ಇಲ್ಲಿ ಕೇಳಿ: ನಾಳೆ ಇಲ್ಲಿ ರೈಲು ಸಂಚಾರದಲ್ಲಿ ವ್ಯತ್ಯಯ!
ಧಾರವಾಡ ತಾಲೂಕಿನ ಶಿವಳ್ಳಿಯ ಸುವರ್ಣಾ ಮುದ್ದಿ ಎಂಬುವವರಿಂದ 6 ಎಕರೆ ಜಮೀನು ಖರೀದಿಗೆ ಮುಂದಾಗಿ, 2023ರಲ್ಲಿ ಇದಕ್ಕೆ ಸಂಬಂಧಿಸಿದಂತೆ ಖರೀದಿ ಒಪ್ಪಂದ ಕೂಡ ಮಾಡಿಕೊಂಡು 24 ಲಕ್ಷ ರೂಪಾಯಿ ಕೊಟ್ಟಿದ್ದರು. ಆದರೆ, ಜಮೀನು ದರ ಹೆಚ್ಚಾಗಿದ್ದರಿಂದ ಸುವರ್ಣಾ ಮುದ್ದಿ ಜಮೀನು ಮಾರಲು ಹಿಂದೇಟು ಹಾಕಿದ್ದು, ಖರೀದಿ ಒಪ್ಪಂದ ರದ್ದು ಮಾಡಿಕೊಳ್ಳೋಣ ಎಂದಿದ್ದರು..
ಹೀಗಾಗಿ, ಐದು ಲಕ್ಷ ರೂಪಾಯಿ ಸಹ ಮರಳಿ ಕೊಟ್ಟು, ಉಳಿದ 19 ಲಕ್ಷ ರೂಪಾಯಿ ಒಪ್ಪಂದ ರದ್ದತಿಗೆ ಸಹಿಯಾದ ಬಳಿಕ ಕೊಡುವ ಮಾತಾಗಿತ್ತು. ಅದರಂತೆ ಇವತ್ತು ಸುವರ್ಣಾ ಮುದ್ದಿ, ಮಗಳು ದಾನೇಶ್ವರಿ ಧಾರವಾಡ ಉಪನೋಂದಣಿ ಕಚೇರಿಗೆ ಬಂದಿದ್ದರು. ಈ ವೇಳೆ ಇವರಿಗೆ ಹಣ ತೋರಿಸಿ, ಸಹಿ ಮಾಡಿದ ಮೇಲೆ ಹಣದ ಬಂಡಲ್ ಕೊಡುವುದಾಗಿ ಹೇಳಿದ್ದಾರೆ.
ಅದರಂತೆ ಸಹಿ ಮಾಡಿ ಹೊರಗೆ ಬಂದಾಗ, ಹಣದ ಬಂಡಲ್ ಸಹ ಕೊಟ್ಟಿದ್ದಾರೆ. ಆದರೆ ಕಾರಿನಲ್ಲಿ ಬಂದು ಹಣದ ಬಂಡಲ್ ತೆಗೆದು ನೋಡಿದಾಗ ಶಾಕ್ ಆಗಿದೆ. ಏಕೆಂದರೆ 1 ಲಕ್ಷ 20 ಸಾವಿರ ಹಣ ಮಾತ್ರ ಕರೆನ್ಸಿ ಇದ್ದರೇ ಉಳಿದೆಲ್ಲವೂ ಹಾಳೆಗಳನ್ನು ನೋಟಿನಂತೆ ಕಟ್ ಮಾಡಿ ಬಂಡಲ್ ನೀಡಿ ಮೋಸ ಮಾಡಿದ್ದಾರೆ ಎಂಬುವುದು ಸುರೇಶ ತಡಕೋಡ ಮತ್ತು ತಂಡದ ಆರೋಪವಾಗಿದೆ.
ಸದ್ಯ ಹಣದ ಬಂಡಲ್ ಎಂದು ನಂಬಿ ಮೋಸ ಹೋಗಿರುವ ಈ ಮೂವರೂ ಈಗ ಧಾರವಾಡ ಉಪನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಕಾರಿನಲ್ಲಿರುವ ಪೇಪರ್ ಹಾಳೆಯ ಬಂಡಲ್ಗಳನ್ನು ಪರಿಶೀಲನೆ ಸಹ ಮಾಡಿದ್ದಾರೆ