ಚಂದನವನದ ಹಿರಿಯ ನಟ ಡಿಂಗ್ರಿ ನಾಗರಾಜ್ ರವರ ಸುಪುತ್ರ ನಟ ರಾಜವರ್ಧನ್ ಈಗ ನಿರ್ಮಾಪಕರಾಗಿ ಹೆಜ್ಜೆ ಇಡುತ್ತಿದ್ದಾರೆ. ನಗರದ ಜಿಟಿ ಮಾಲ್ ನಲ್ಲಿರುವ MMB Legacy ಯಲ್ಲಿ ತಮ್ಮ ನಿರ್ಮಾಣ ಸಂಸ್ಥೆಯಾದ Barn Swallow company ಪ್ರೊಡಕ್ಷನ್ ಹೌಸ್ ಮೂಲಕ ಸಾಲು ಸಾಲಾಗಿ ಚಿತ್ರ ಮಾಡಲು ಸಿದ್ಧರಾಗಿದ್ದು , “ಜಾವಾ” ಎಂಬ ಚಿತ್ರದ ಟೈಟಲ್ ರಿವಿಲ್ ಮಾಡಲಾಯಿತು. ಈ ಚಿತ್ರವನ್ನು ಪತ್ರಕರ್ತ ಹಾಗೂ ಬರಹಗಾರರಾದ ದೇವಾ ಚಕ್ರವರ್ತಿ ನಿರ್ದೇಶನ ಮಾಡ್ತಿದ್ದು, ನಟರಾಗಿ ಮ್ಯಾಸಿವ್ ಹೀರೋ ರಾಜವರ್ಧನ್ ನಾಯಕನಾಗಿ ಅಭಿಸುತ್ತಿದ್ದು , ನಟಿ ರಾಗಿಣಿ ದ್ವಿವೇದಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಈ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳಲು ಚಿತ್ರತಂಡ ಪತ್ರಿಕಾಗೋಷ್ಠಿಯನ್ನು ಆಯೋಜನೆ ಮಾಡಿತ್ತು.
ಈ ಚಿತ್ರದ ನಟ ಹಾಗೂ ನಿರ್ಮಾಪಕ ರಾಜವರ್ಧನ್ ಮಾತನಾಡುತ್ತಾ ನಮ್ಮದು ಚಿತ್ರೋದ್ಯಮದ ಕುಟುಂಬ, ನಮ್ಮ ತಂದೆ ಡಿಂಗ್ರಿ ನಾಗರಾಜ್ 40 ವರ್ಷಗಳಿಂದ ಚಿತ್ರಗಳಲ್ಲಿ ನಟಿಸಿ , ಸೀರಿಯಲ್ , ಸಿನಿಮಾಗಳನ್ನ ನಿರ್ಮಿಸಿ , ನಿರ್ದೇಶಿಸಿ ಪ್ರೇಕ್ಷಕರನ್ನ ರಂಜಿಸುತ್ತ ಮನ ಗೆದ್ದಿದ್ದಾರೆ. ನಾನು ಕೂಡ ಚಿತ್ರರಂಗದಲ್ಲಿ ನಟನಾಗಿ ಬಿಚ್ಚುಗತ್ತಿ , ಪ್ರಣಯಂ , ಹಿರಣ್ಯ , ಗಜರಾಮ ಸೇರಿದಂತೆ ವಿಭಿನ್ನ ಚಿತ್ರಗಳಲ್ಲಿ ಅಭಿನಯಿಸುತ್ತ ಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತಾ ಸಾಗಿದ್ದೇನೆ. ಸುಮಾರು ಎರಡು ವರ್ಷಗಳ ಹಿಂದೆ ಪೂರ್ವ ತಯಾರಿ ಮಾಡಿಕೊಂಡು ನನ್ನದೇ ನಿರ್ಮಾಣ ಸಂಸ್ಥೆಯಾದ Barn Swallow company ಪ್ರೊಡಕ್ಷನ್ ಹೌಸ್ ಮೂಲಕ ಜಾವಾ ಎಂಬ ಚಿತ್ರವನ್ನು ನಿರ್ಮಿಸುವುದರ ಜೊತೆಗೆ ನಾಯಕನಾಗಿ ಕೂಡ ಅಭಿನಯಿಸಿದ್ದೇನೆ. ಇಂದು ವಿಶೇಷವಾಗಿ ನಮ್ಮ ಸಂಸ್ಥೆಯ ಬ್ಯಾನರ್ ಹಾಗೂ ಚಿತ್ರದ ಶೀರ್ಷಿಕೆ ಬಿಡುಗಡೆ ಮಾಡಿದ್ದೇವೆ. ನಮ್ಮ ಚಿತ್ರದ ನಿರ್ದೇಶಕ ದೇವ ಚಕ್ರವರ್ತಿ ನನ್ನ ಆರಂಭದ ದಿನಗಳಿಂದಲೂ ಆತ್ಮೀಯರು , ನನಗೆ ಮಾರ್ಗದರ್ಶನ ಮಾಡುತ್ತಾ ಬಂದಿದ್ದಾರೆ. ಕಥೆ ಆಯ್ಕೆ ವಿಚಾರದಾಗ್ಲಿ , ನನ್ನ ಬೆಳವಣಿಗೆಗಾಗಿ ಬಹಳಷ್ಟು ಸಹಕಾರಿಯಾಗಿ ನಿಂತಿದ್ದಾರೆ. ಈಗ ಅವರೇ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಕಥೆ ಕುತೂಹಲಕಾರಿಯಾಗಿದ್ದು, 80ರ ಕಾಲಘಟ್ಟದಲ್ಲಿ ಚಿತ್ರರಂಗದಲ್ಲಿ ನಡೆದಂತಹ ಘಟನೆ ಚಿತ್ರೋದ್ಯಮದ ಮಂದಿಗೆ ಹೆಚ್ಚು ಈ ವಿಚಾರ ಗೊತ್ತಿಲ್ಲ, ಇಂತಹ ಇಂಟರೆಸ್ಟಿಂಗ್ ಕಥೆಯನ್ನು ಪೂರ್ವ ತಯಾರಿ ಮಾಡಿಕೊಂಡು ಚಿತ್ರವನ್ನು ಆರಂಭಿಸಿದ್ದೇವೆ. ನಮ್ಮ ಸಂಸ್ಥೆಯಲ್ಲಿ ಈಗಾಗಲೇ ನಾಲ್ಕು ಕಥೆಗಳಿದೆ ಬೇರೆ ಬೇರೆ ಕಲಾವಿದರಿಗೂ ಅವಕಾಶ ನೀಡುವ ಆಲೋಚನೆ ಇದೆ. ಈ ನಮ್ಮ ನೂತನ ಸಂಸ್ಥೆಗೆ ನಿಮ್ಮೆಲ್ಲರ ಪ್ರೀತಿ , ಸಹಕಾರ ಪ್ರೋತ್ಸಾಹ ಇರಲಿ ಎಂದು ಕೇಳಿಕೊಂಡರು.
ನಾಯಕಿಯಾಗಿ ಅಭಿನಯಿಸುತ್ತಿರುವ ರಾಗಿಣಿ ದ್ವಿವೇದಿ ಮಾತನಾಡುತ್ತಾ ನಿರ್ದೇಶಕರು ಬಹಳಷ್ಟು ಸಿದ್ಧತೆ ಮಾಡಿಕೊಂಡು ಬಂದು ನನಗೆ ಮೊದಲು ಒಂದು ಕಥೆ ಹೇಳಿದರು, ತದನಂತರ ಈ ಕಥೆಯನ್ನ ಹೇಳಿದ ರೀತಿ ಇಷ್ಟವಾಯಿತು. ಬಹಳ ಚಾಲೆಂಜಿಂಗ್ ಇರುವಂತಹ ಪಾತ್ರ ನನ್ನದಾಗಿದೆ. ಸಿನಿಮಾ ನಟಿಯ ಬದುಕಿನ ಸುತ್ತ ಸಾಗುವ ಕಥೆ ಇದಾಗಿದೆ. ಹಾಗೆಯೇ ನಟ ರಾಜವರ್ಧನ್ ನನ್ನ ಆತ್ಮೀಯ ಗೆಳೆಯ, ಅವರ ನಿರ್ಮಾಣದ ಸಂಸ್ಥೆಯ ಚಿತ್ರದಲ್ಲಿ ಅಭಿನಯಿಸುತ್ತಿರುವುದು ಖುಷಿ ಇದೆ. ನಮ್ಮ ಚಿತ್ರತಂಡಕ್ಕೆ ನಿಮ್ಮೆಲ್ಲರ ಪ್ರೋತ್ಸಾಹ ಸಹಕಾರ ಇರಲಿ , ಹಾಗೆಯೇ ನನ್ನ ಹುಟ್ಟುಹಬ್ಬಕ್ಕೆ ಮತ್ತೊಂದು ವಿಶೇಷ ಅನೌನ್ಸ್ಮೆಂಟ್ ನೀಡುತ್ತೇನೆ ಎಂದು ಹೇಳಿದರು.
ಇನ್ನು ಈ ಚಿತ್ರದ ನಿರ್ದೇಶಕ ದೇವ ಚಕ್ರವರ್ತಿ ಮಾತನಾಡುತ್ತಾ ನಾನು ಒಬ್ಬ ಪತ್ರಕರ್ತನಾಗಿ , ಸಾಹಿತಿ , ಬರಹಗಾರ , ಕಲಾವಿದನಾಗಿ ಚಿತ್ರೋದ್ಯಮದಲ್ಲಿ ನನ್ನನ್ನ ನಾನು ಬಹಳಷ್ಟು ತೊಡಗಿಸಿಕೊಂಡು ಸಾಗಿದದೇನೆ. ಹಾಗೆಯೇ ಒಂದಷ್ಟು ಏರುಪೇರುಗಳ ಜೊತೆ ಚಿತ್ರೋದ್ಯಮದ ಅನುಭವವು ಆಗಿದೆ. ಬಹಳಷ್ಟು ಕಥೆಗಳನ್ನು ಸಿದ್ಧ ಮಾಡಿಕೊಂಡು ,ಒಂದು ಸೂಕ್ತ ಸಮಯಕ್ಕಾಗಿ ಕಾಯುತಿದ್ದೆ. ಈಗ ಅದರ ಫಲವಾಗಿ ಒಂದು ನೈಜ ಘಟನೆಗಳ ಆಧಾರದ ಚಿತ್ರವನ್ನು ನಿರ್ದೇಶನ ಮಾಡಲು ಮುಂದಾಗಿದ್ದೇನೆ. ಈಗ ಜಾವಾ ಅನ್ನೋ ಶೀರ್ಷಿಕೆಯ ಮೂಲಕ ಒಂದು ಸ್ಟ್ರಾಂಗ್ ಕಂಟೆಂಟ್ ಅನ್ನು ಪ್ರೇಕ್ಷಕರ ಮುಂದೆ ತರುತ್ತಿದ್ದೇನೆ. ವೇಗ ಎನ್ನುವಂತೆ ಕಥಾಂದರವು ಅಷ್ಟೇ ಕುತೂಹಲಕಾರಿಯಾಗಿ ಸಾಗಲಿದೆ ಎಂದರು.
ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತವನ್ನು ನೀಡುತ್ತಿದ್ದು , ಕೆ.ಎಂ. ಪ್ರಕಾಶ್ ಸಂಕಲನವಿದ್ದು, ಛಾಯಾಗ್ರಾಹಕರ ಆಯ್ಕೆ ಆಗಬೇಕಿದೆ. ಬಿರುಗಾಳಿಯಿಂದ ತಪ್ಪಿಸಿಕೊಂಡು ಓಡಿ ಬರುತ್ತಿರುವ ಹುಡುಗನೊಬ್ಬನ ಜಾವಾ ಪೋಸ್ಟರ್ ಬಹಳಷ್ಟು ಕುತೂಹಲವನ್ನು ಹುಟ್ಟುಹಾಕಿದ್ದು, ಜುಲೈನಲ್ಲಿ ಚಿತ್ರೀಕರಣವನ್ನು ಆರಂಭಿಸುವ ಯೋಜನೆ ಇದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮಾಹಿತಿಯನ್ನು ತಂಡ ಹಂಚಿಕೊಳ್ಳಲಿದೆ.