ಬೆಂಗಳೂರು:- ಸ್ವಂತ ಮನೆ ಎಂಬುದು ಪ್ರತಿಯೊಬ್ಬರ ಕನಸು. ಆದರೆ ಆ ಕನಸನ್ನೆ ಬಂಡವಾಳ ಮಾಡಿಕೊಂಡ ಖಾಸಗಿ ಕಂಪನಿಯೊಂದರ ವಂಚನೆ ಇದೀಗ ಬಯಲಾಗಿದೆ. ಬಿಲ್ಡಿಂಗ್ ಗೇರ್ ಎಂಬಾ ಖಾಸಗಿ ಕಂಪನಿ ವಿರುದ್ಧ ಈ ಗಂಭೀರ ಆರೋಪ ಕೇಳಿ ಬಂದಿದ್ದು, ಮನೆ ಕಟ್ಟಿಕೊಡುವುದಾಗಿ ಸಾರ್ವಜನಿಕರಿಗೆ ವಂಚನೆ ಮಾಡಲಾಗಿದೆ. ಕಡಿಮೆ ಬೆಲೆಯಲ್ಲಿ ಮನೆ ಕಟ್ಟಿಕೊಡುವುದಾಗಿ ಈ ಕಂಪನಿ ಜಾಹೀರಾತು ನೀಡಿತ್ತು. ಜಾಹಿರಾತು ನಂಬಿ ಹೋದ ಸಾರ್ವಜನಿಕರು ಇದೀಗ ಕಂಪನಿಯ ಮೋಸದ ಜಾಲಕ್ಕೆ ಬಲಿಯಾಗಿದ್ದಾರೆ. ಸುಮಾರು 25_ಜನ ಸಾರ್ವಜನಿಕರು ವಂಚನೆಗೆ ಒಳಗಾಗಿದ್ದಾರೆ.
ಕಾಲಿ ನಿವೇಶನದಲ್ಲಿ ಒಂದು ಚದರ ಅಡಿಗೆ 1750 ರೂ ಗಳಂತೆ ಮನೆ ಕಟ್ಟಿಕೊಡುವುದಾಗಿ ಜಾಹಿರಾತು ನೀಡಲಾಗಿತ್ತು. ಇದನ್ನು ನಂಬಿ ಗಿರೀಶ್ ಎಂಬುವವರು ಐದು ಲಕ್ಷ ನೀಡಿದ್ದಾರೆ. ಆದರೆ ಕಂಪನಿಯ ಮಾಲೀಕರಾದ ಮೋಹಿತ್ ಕುಮಾರ್ ರಿಂದ ಗಿರೀಶ್ ಸೇರಿ ಹಲವರಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಸದ್ಯ ಈ ಕುರಿತು ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಆಫೀಸ್ ಗೆ ಬೀಗ ಜಡಿದು ಮಾಲೀಕ ಎಸ್ಕೇಪ್ ಆಗಿದ್ದಾನೆ.