ಕುರುಗೋಡು:- ತಾಯಿ ತನ್ನ ಮೂವರು ಮಕ್ಕಳೊಂದಿಗೆ ಕೃಷಿ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುರುಗೋಡು ತಾಲೂಕಿನ ದಮ್ಮೂರು ಗ್ರಾಮದಲ್ಲಿ ನಡೆದಿದೆ.
ಕೌಟುಂಬಿಕ ಕಲಹದಿಂದ ಬೇಸತ್ತಿದ್ದ ಈ ತಾಯಿ ತನ್ನ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಮೃತಪಟ್ಟವರನ್ನು ಸಿದ್ದವ್ವ (29), ಮಕ್ಕಳಾದ ಅಭಿಜ್ಞಾ (7) ಅವನಿ (5) ಮತ್ತು ಆರಾಧ್ಯ (3) ಎಂದು ಗುರುತಿಸಲಾಗಿದೆ.
ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆ ಹೊಸೂರ್ ಚಂಪಾ ಗ್ರಾಮದ ಈ ಕುರಿಗಾಹಿ ಕುಟುಂಬ ಕುರಿಗಳೊಂದಿಗೆ ಕುರುಗೋಡು ತಾಲೂಕಿನ ದಮ್ಮೂರು ಗ್ರಾಮದಲ್ಲಿ ಹಲವು ದಿನಗಳಿಂದ ಬೀಡುಬಿಟ್ಟಿತ್ತು. ಮಂಗಳವಾರ ಬೆಳಿಗ್ಗೆ 11ಗಂಟೆಯಿAದ ತಾಯಿ ಮತ್ತು ಮೂವರು ಮಕ್ಕಳು ಕುರಿಗಳನ್ನು ಬಿಟ್ಟು ಕಾಣೆಯಾಗಿದ್ದರು. ಬುಧವಾರ ಬೆಳಗ್ಗೆ ಕೃಷಿಹೊಂಡದ ಬಳಿ ಹೋಗಿ ನೋಡಿದಾಗ ಮೃತದೇಹಗಳು ಪತ್ತೆಯಾಗಿವೆ. ಬೆಳಗಾವಿ ಜಿಲ್ಲೆಯ ಹೊಸೂರ್ ಗ್ರಾಮದ ಸಿದ್ದವ್ವ ಅವರನ್ನು ಅದೇ ಗ್ರಾಮದ ಸಂಜಯ್ ಎಂಬುವವರಿಗೆ ಕೊಟ್ಟು 10 ವರ್ಷಗಳ ಹಿಂದೆ ಮದುವೆ ಮಾಡಲಾಗಿತ್ತು. ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ನವೀನ್ ಕುಮಾರ್, ಸಿಪಿಐ ವಿಶ್ವನಾಥ ಹಿರೇಗೌಡರ್ ಮತ್ತು ಪಿಎಸ್ಐ ಸುಪ್ರಿತ್ ಘಟನಾಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿದರು.
ಗಂಡನ ಕಿರುಕುಳವೇ ಆತ್ಮಹತ್ಯೆಗೆ ಕಾರಣ ಎಂದು ಮೃತಳ ತಾಯಿ ರೇಣುಕಾ ದೂರು ನೀಡಿದ್ದು, ಸಂಜಯ್ (32)ನನ್ನು ಕುರುಗೋಡು ಪೊಲೀಸರು ವಶಕ್ಕೆ ಪಡೆದಿದ್ದಾರೆ.