ಕೋಲಾರ:- ಸಾಲಸೋಲ ಮಾಡಿ ಬೆಳೆದ ಮಾವಿನ ಹಣ್ಣಿಗೆ ಬೆಂಬಲ ಬೆಲೆ ಇಲ್ಲದ ಹಿನ್ನೆಲೆಯಲ್ಲಿ ಮಾವು ಬೆಳೆಗಾರರು ಕಂಗಾಲಾಗಿದ್ದಾರೆ. ಅಲ್ಲದೇ ಬೆಂಬಲ ಬೆಲೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ಮಾರುಕಟ್ಟೆಯಲ್ಲಿ ಮಾವಿನ ಹಣ್ಣಿನ ಬೆಲೆ ತೀವ್ರವಾಗಿ ಕುಸಿದಿದೆ. ಈ ಹಿನ್ನೆಲೆಯಲ್ಲಿ ವರ್ಷಕ್ಕೊಂದೆ ಬೆಳೆಯನ್ನು ನಂಬಿಕೊಂಡು ಬದುಕುತ್ತಿರುವ ಸಾವಿರಾರು ಮಂದಿ ಮಾವು ಬೆಳೆಗಾರರು ಸರ್ಕಾರ ನೆರವಿಗೆ ಧಾವಿಸಬೇಕು ಎಂದು ಹೋರಾಟ ಮಾಡುತ್ತಿದ್ದಾರೆ.
ಮಾವು ಬೆಳೆಗಾರರ ಸಂಘ ಕಳೆದ 15 ದಿನಗಳಿಂದ ನಡೆಸುತ್ತಿರುವ ಹೋರಾಟಕ್ಕೆ ಸರ್ಕಾರಗಳಿಂದ ಸೂಕ್ತ ಪ್ರತಿಕ್ರಿಯೆ ಸಿಗದ ಹಿನ್ನೆಲೆಯಲ್ಲಿ ಮಾವು ಬೆಳೆಗಾರರು ಮುಂದಿನ ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ. ಒಂದೆಡೆ ಹೋರಾಟಕ್ಕೆ ಸಿದ್ದವಾಗುತ್ತಿದ್ದರೇ, ಮತ್ತೊಂದೆಡೆ ತೋಟದಲ್ಲಿರುವ ಮಾವಿನ ಹಣ್ಣುಗಳು ಕಟಾವಿಗೆ ಬಂದಿವೆ. ಮಳೆಯೂ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಸರಿಯಾದ ಸಮಯಕ್ಕೆ ಮಾವು ಕಟಾವು ಮಾಡಲಾಗದೆ ತೋಟದಲ್ಲಿರುವ ಮಾವಿನ ಬೆಳೆಗೆ ಮಚ್ಚೆ ರೋಗ ಸೇರಿದಂತೆ ವಿವಿಧ ರೋಗಗಳು ಆವರಿಸುವ ಸಾಧ್ಯತೆ ಇದೆ.
ಮಾವು ಬೆಳೆಗಾರರಿಗೆ ಅತ್ತ ಸರ್ಕಾರದ ನಿರ್ಧಾರಕ್ಕಾಗಿ ಕಾಯುವ ಪರಿಸ್ಥಿತಿಯೂ ಇಲ್ಲ, ಇತ್ತ ಸರ್ಕಾರದ ನಿರ್ಧಾರಕ್ಕಾಗಿ ಕಾದು ಕುಳಿತರೇ ತೋಟದಲ್ಲಿರುವ ಮಾವು ಗಾಳಿ-ಮಳೆಯಿಂದ ರೋಗಕ್ಕೆ ತುತ್ತಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ತಲುಪುತ್ತಿದೆ. ಹೀಗಾಗಿ ಕೂಡಲೇ ಸರ್ಕಾರ ಮಾವು ಬೆಳೆಗಾರರಿಗೆ ಬೆಂಬಲ ಬೆಲೆ ಘೋಷಣೆ ಮಾಡಬೇಕು. ಇಲ್ಲವಾದಲ್ಲಿ ಮಾವು ಬೆಳೆಗಾರರು ಉಗ್ರವಾಗಿ ಹೋರಾಟ ನಡೆಸಲು ಮುಂದಾಗಿದ್ದಾರೆ” ಎಂದು ಮಾವು ಬೆಳೆಗಾರರೊಬ್ಬರು ಹೇಳಿದ್ದಾರೆ.