ಬೆಂಗಳೂರು:- ಚೊಚ್ಚಲ IPL ಟ್ರೋಫಿ ಮುಡಿಗೇರಿಸಿಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಂಭ್ರಮಾಚರಣೆಗೆ ಬಂದಿದ್ದ 10 ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಉಂಟಾದ ಕಾಲ್ತುಳಿತದಿಂದ ಸಾವನ್ನಪ್ಪಿದ್ದಾರೆ. ಮೃತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
RCB ಸಂಭ್ರಮಾಚರಣೆ ಆಘಾತ: 11 ಮಂದಿ ಸಾವು.. ಛೇ, ಛೇ ಇಂಥಾ ಸೆಲಬ್ರೇಷನ್ ಬೇಕಿತ್ತಾ!?
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಪರಿಷತ್ ಶಾಸಕ ಟಿಎ ಶರವಣ ಅವರು ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕಿದ್ದಾರೆ. ಆರ್ ಸಿ ಬಿ ಗೆಲುವಿನ ಪ್ರಚಂಡ ವಿಜಯೋತ್ಸವ. ಪ್ರಚಂಡ ಮರಣೋತ್ಸವವಾಗಿ ಬದಲಾಗಿದ್ದು, ಹತ್ತಕ್ಕೂ ಹೆಚ್ಚು ಮಂದಿ ಅಭಿಮಾನಿಗಳು, ಮುಗ್ಧರು, ಕಾಲ್ತುಳಿತಕ್ಕೆ ಜೀವತೆತ್ತಿರುವ ಘೋರ ದುರಂತ ವಾಗಿದೆ. ಈ ದುರಂತದ ಹೊಣೆಯನ್ನು ಇದನ್ನು ತಪ್ಪಿಸುವಲ್ಲಿ ವಿಫಲವಾದ ಸರಕಾರ ಮತ್ತು ಕಾರ್ಯಕ್ರಮದ ಆಯೋಜಕರು ಹೊರಬೇಕಾಗಿದೆ ಎಂದು ವಿಧಾನಪರಿಷತ್ ಹಿರಿಯ ಸದಸ್ಯ ಜೆಡಿಎಸ್ ನಾಯಕ ಟಿ. ಎ.ಶರವಣ ನೊಂದು ಹೇಳಿದ್ದಾರೆ.
ಈ ಘಟನೆಯಿಂದ ಮನಸ್ಸು ಭಾರವಾಗಿದೆ. ಅಮಾಯಕ ಯುವಕರು, ಭವಿಷ್ಯದಲ್ಲಿ ಬೇಕಾದಷ್ಟು ಜವಾಬ್ದಾರಿ ಹೊರಬೇಕಾದ ತರುಣರು ದಾರುಣವಾಗಿ ಪ್ರಾಣ ಬಿಟ್ಟಿದ್ದಾರೆ. ಇದಕ್ಕೆ ಹೊಣೆ ಯಾರು? ಎಂದು ಶರವಣ ಸರಕಾರಕ್ಕೆ ಛೀಮಾರಿ ಹಾಕಿದ್ದಾರೆ. ವಿಧಾನಸೌಧ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣ ಕಾಲ್ತುಳಿತ ಘಟನೆಗಳನ್ನು ನೀಡಿದರೆ ಅವ್ಯವಸ್ಥೆಯ ಆಗರವಾಗಿದೆ. ಪೂರ್ವ ಸಿದ್ಧತೆ ಇಲ್ಲದೆ, ಪೊಲೀಸ್ ಬಂದೋ ಬಸ್ತ್ ಇಲ್ಲದೆ ಈ ಕಾರ್ಯಕ್ರಮ ನಡೆಸಲಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂಥ ಭೀಕರ ಕಾಲ್ತುಳಿತ ಘಟನೆ ನಡೆದರೂ ಪೊಲೀಸ್ ಮತ್ತು ಖಾಸಗಿ ಭದ್ರತಾ ಸಿಬ್ಬಂದಿ ಇಲ್ಲದಿರುವುದಕ್ಕೆ ಯಾರು ಕಾರಣ? ಈ ಕಾರ್ಯಕ್ರಮದ ಅಯೋಜಕರು ಯಾರು? ಇವತ್ತೇ ಈ ಕಾರ್ಯಕ್ರಮ ನಡೆಸಲೇ ಬೇಕಾದ ತುರ್ತು ಏನಿತ್ತು? ಸರಕಾರ ಈ ಕಾರ್ಯಕ್ರಮಕ್ಕೆ ಹೇಗೆ ಅನುಮತಿ ನೀಡಿತು? ಅನುಮತಿ ಕೊಟ್ಟ ಮೇಲೆ ಪೊಲೀಸ್ ಬಂದೋ ಬಸ್ತ್ ಯಾಕಿರಲಿಲ್ಲ ? ಇದರಲ್ಲಿ ಪೊಲೀಸ್ ವಿಫಲರಾಗಿದ್ದಾರೆ ಯೇ? ಎಂದು ಶರವಣ ಪ್ರಶ್ನೆಗಳ ಸುರಿಮಳೆ ನಡೆಸಿದ್ದಾರೆ.
ಕಾರ್ಯಕ್ರಮದ ಆಯೋಜಕರು ಇರಬಹದು, ಅಥವಾ ಅಗತ್ಯ ಪೂರ್ವ ಸಿದ್ಧತಾ ಅಥವಾ ಭದ್ರತಾ ಕ್ರಮ ಕೈಗೊಳ್ಳದ ಪೋಲೀಸರೆ ಇರಬಹದು . ತಕ್ಷಣ ಅವರನ್ನು ಬಂಧಿಸಬೇಕು. ಆಯೋಜಕರ ಆಸ್ತಿಪಾಸ್ತಿ ಮುಟ್ಟುಗೋಲು ಹಾಕಿ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದ್ದಾರೆ. ಈ ಘಟನೆಯಲ್ಲಿ ಹಲವು ವೈಫಲ್ಯಗಳು ಇರುವುದರಿಂದ ತಕ್ಷಣವೇ ಇದರ ಬಗ್ಗೆ ನ್ಯಾಯಾಂಗ ತನಿಖೆ ನಡೆಯಲಿ ಎಂದು ಟಿಎ ಶರವಣ ಒತ್ತಾಯಿಸಿದ್ದಾರೆ.