ದಕ್ಷಿಣ ಕನ್ನಡ ಜಿಲ್ಲೆ/ಬೆಂಗಳೂರು:-ಹೆಲ್ಪ್ಲೈನ್ ಹೆಸರಿನಲ್ಲಿ ವಂಚನೆ ಮಾಡಿರುವ ಆರೋಪದಲ್ಲಿ ಬೆಂಗಳೂರಿನ ಸಂಧ್ಯಾ ಪವಿತ್ರ ನಾಗರಾಜ್ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಾಮರಾಜನಗರ ಹಿಂದುಳಿದ ಜಿಲ್ಲೆಯಿಂದ ಅಭಿವೃದ್ಧಿಯತ್ತ ಸಾಗಿದೆ: ಸಚಿವ ಕೆ. ವೆಂಕಟೇಶ್
ಬೆಂಗಳೂರಿನ ಸಂಧ್ಯಾ ಪವಿತ್ರ ನಾಗರಾಜ್ ಎಂಬಾಕೆ ನೊಂದವರಿಗೆ ಸಹಾಯ ಮಾಡುವುದಾಗಿ ಹೇಳಿ ಹಣ ಪಡೆದು ವಂಚನೆ ಮಾಡಿರುವುದಾಗಿ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳ್ತಂಗಡಿ ತಾಲೂಕಿನ ಮಡಂತ್ಯಾರ್, ಮಾಲಾಡಿ ನಿವಾಸಿ ಕೆ.ರಾಜೇಶ್ ಎಂಬುವರು ನೀಡಿದ ದೂರಿನ ಅನ್ವಯ ಇದೀಗ ಪ್ರಕರಣ ದಾಖಲಾಗಿದೆ.
ರಾಜೇಶ್, ಬೆಳ್ತಂಗಡಿ ತಾಲೂಕಿನ ಮಡಂತ್ಯಾರ್ನ ಮಾಲಾಡಿ ನಿವಾಸಿ. ವೃತ್ತಿಯಲ್ಲಿ ಗಾಯಕರಾಗಿರುವ ರಾಜೇಶ್, Arvind vivek ಎಂಬ ಹೆಸರಿನಲ್ಲಿ ಫೇಸ್ಬುಕ್ ಪೇಜ್ನಲ್ಲಿ ಲೈವ್ ಸಂಗೀತ ಕಾರ್ಯಕ್ರಮ ನೀಡುತ್ತಿದ್ದರು. 2024 ರಲ್ಲಿ ಫೇಸ್ಬುಕ್ ಮೂಲಕ ಸಂಧ್ಯಾ ಪವಿತ್ರ ನಾಗರಾಜ್ ಪರಿಚಯವಾಗಿದೆ. ಈ ವೇಳೆ ಹೋರಾಟಗಾರ್ತಿ ಎಂದು ನಂಬಿಸಿದ್ದ ಸಂಧ್ಯಾ, Helpline ಹೆಸರಿನಲ್ಲಿ ನೊಂದವರಿಗೆ, ವಂಚನೆಗೊಳಪಟ್ಟವರಿಗೆ ಸಹಾಯ ಮಾಡುತ್ತಿರುವುದಾಗಿ ತಿಳಿಸಿದ್ದರು.
ರಾಜ್ಯದಲ್ಲಿ ಅಮಾಯಕರ ಮೇಲೆ ದಾಖಲಾಗಿದ್ದ ಅನೇಕ ಪ್ರಕರಣ ಬಗೆಹರಿಸಿಕೊಟ್ಟಿರುವುದಾಗಿ ಸಂಧ್ಯಾ ಹೇಳಿಕೊಂಡಿದ್ದರು. ಈ ವೇಳೆ ಬಂಟ್ವಾಳ ನಗರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ಬಗ್ಗೆ ರಾಜೇಶ್ ತಿಳಿಸಿದ್ದರು. ಈ ಪ್ರಕರಣವನ್ನು ಹೈಕೋರ್ಟ್ನಲ್ಲಿ ಬಗೆಹರಿಸುವುದಾಗಿ ಆಕೆ ನಂಬಿಸಿದ್ದರು. ಈ ಬಗ್ಗೆ ದಾಖಲಾತಿ ಪಡೆಯಲು 2025ರ ಜನವರಿಯಲ್ಲಿ ಬೆಂಗಳೂರಿನ ಜೆ.ಪಿನಗರದ ಮನೆಗೆ ಸಂಧ್ಯಾ ಕರೆಸಿದ್ದರು.
ಬಳಿಕ ಪ್ರಕರಣ ಬಗೆಹರಿಸಲು ಸ್ವಲ್ಪ ಖರ್ಚು ಇದೆ ಎಂದಿದ್ದರು.
ದೂರುದಾರ ರಾಜೇಶ್ರಿಂದ ಹಂತ ಹಂತವಾಗಿ 3.20 ಲಕ್ಷ ರೂ. ಹಣ ಪಡೆದಿದ್ದರು. ಬಳಿಕವೂ ಸಮಸ್ಯೆ ಬಗೆಹರಿಯದ ಕಾರಣ ಈ ಬಗ್ಗೆ ರಾಜೇಶ್ ಪ್ರಶ್ನಿಸಿದ್ದರು. ಆಗ ಸಂಧ್ಯಾ ಇನ್ನೂ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಸಂಶಯಗೊಂಡು ವಿಚಾರಿಸಿದಾಗ ಮೋಸ ಹೋಗಿರುವುದು ಬೆಳಕಿಗೆ ಬಂದಿದೆ.