ಗದಗ: ಮುದ್ರಣಕಾಶಿ ಗದಗ ಜಿಲ್ಲೆಯಲ್ಲೂ ಸಂವಿಧಾನ ಶಿಲ್ಪಿ ಡಾ ಬಿ.ಆರ್ ಅಂಬೇಡ್ಕರ್ ಅವರ ಜಯಂತಿ ಅದ್ದೂರಿಯಾಗಿ ಆಚರಿಸಲಾಯಿತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ನಗರಸಭೆ ಸಹಯೋಗದಲ್ಲಿ ಅಂಬೇಡ್ಕರ್ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ನಗರಸಭೆ ಆವರಣದ ಅಂಬೇಡ್ಕರ್ ಪುತ್ಥಳಿಗೆ ಸಚಿವ ಎಚ್.ಕೆ ಪಾಟೀಲ್ ಮಾಲಾರ್ಪಣೆ ಮಾಡಿದರು. ನಂತರ ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಮ್ ಭಾವಚಿತ್ರ ರಥಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಮೆರವಣಿಗೆಯಲ್ಲಿ ಸರ್ಕಾರಿ ನೌಕರರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಮಾಜಿ ಸೈನಿಕರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಅನೇಕ ದಲಿತಪರ ಸಂಘಟನೆಗಳು ಸೇರಿದಂತೆ ಅನೇಕ ಸಂಘ ಸಂಸ್ಥೆಗಳ ಕಾರ್ಯಕರ್ತರು, ಸಾರ್ವಜನಿಕರು ಭಾಗವಹಿಸಿದ್ದರು. ನಗರಸಭೆ ಆವರಣದಿಂದ ಅಂಬೇಡ್ಕರ್ ಭವನದವರೆಗೆ ಭವ್ಯ ಮೆರವಣಿಗೆ ನಡೆಯಿತು.
ಇದೇ ವೇಳೆ ಮಾತನಾಡಿದ ಸಚಿವ ಎಚ್.ಕೆ ಪಾಟೀಲ್, ಈ ಬಾರಿ ಅಂಬೇಡ್ಕರ್ ಜಯಂತಿಯನ್ನು ಅರ್ಥಪೂರ್ಣ, ವಿಶೇಷವಾಗಿ ಆಚರಣೆ ಮಾಡಲಾಯಿತು. ಅಂಬೇಡ್ಕರ್ ಸಂವಿಧಾನದಂತೆ ದೇಶದ ಜನ ಸಮಾಧಾನದಿಂದ ಇರಬೇಕು. ಭ್ರಾತೃತ್ವ ಭಾವನೆಯಿಂದ ಇರಬೇಕು. ಸಮ ಬಾಳು, ಸಮಪಾಲು ನಮ್ಮದಾಗಬೇಕು. ಶೋಷಣೆ ಮುಕ್ತವಾದ ಸಮಾಜ ನಿರ್ಮಾಣ ಮಾಡುವುದಕ್ಕೆ ನಾವೆಲ್ಲಾ ಹೋರಾಟ ಮಾಡಬೇಕು. ಶೋಷಣೆ ವಿರುದ್ಧ ಕರ್ತವ್ಯ ಪ್ರಜ್ಞೆಯುಳ್ಳ ನಾಗರಿಕ ಎಚ್ಚೆತ್ತುಕೊಳ್ಳಬೇಕು ಎಂಬುದನ್ನು ತೋರಿಸಿಕೊಟ್ಟಿದೆ. ಅಂಬೇಡ್ಕರ್ ಸಂವಿಧಾನ. ಪ್ರಜಾಪ್ರಭುತ್ವದಲ್ಲಿ ಯಾರೇ ಎಷ್ಟೇ ದೊಡ್ಡವನಿರಲಿ, ಅವನು ಸಂವಿಧಾನದಂತೆನೇ ನಡೆಯಬೇಕು. ಅವನು, ಸಿಎಂ, ರಾಜ್ಯಪಾಲ, ರಾಷ್ಟ್ರಾಧ್ಯಕ್ಷ, ಪ್ರಧಾನಿ ಇರಲಿ. ಯಾವ ಕಾರಣಕ್ಕೂ ಸಂವಿಧಾನ ತಿರುಚುವ ಕೆಲಸ ಮಾಡುವ ಅವಕಾಶವಿಲ್ಲ. ರಾಜ್ಯಪಾಲರ ಕರ್ತವ್ಯ ಚ್ಯುತಿ ಆದಾಗ ಸುಪ್ರೀಂ ಕೋರ್ಟ್ ಎಚ್ಚರಿಕೆ ಛಾಟಿ ಬೀಸಿದೆ. ಅದು ಅಂಬೇಡ್ಕರ್ ಅವರ ಸಂವಿಧಾನದ ಶಕ್ತಿ ಎಂಬುದನ್ನು ನಾವೆಲ್ಲಾ ಅರ್ಥ ಮಾಡಿಕೊಳ್ಳಬೇಕು. ಅಂಬೇಡ್ಕರ್ ಜಯಂತಿ ನಮ್ಮೆಲ್ಲರಲ್ಲಿ ಕರ್ತವ್ಯ ಪ್ರಜ್ಞೆಯನ್ನು ಮೂಡಿಸಲಿ, ಸಾಮಾಜಿಕ ನ್ಯಾಯಕ್ಕಾಗಿ ಕಟಿಬದ್ಧರಾಗೋಣ, ಹೋರಾಟದ ಮೂಲಕ ನ್ಯಾಯ ಪಡೆದುಕೊಳ್ಳಲು, ಬಡವರಿಗೆ ನ್ಯಾಯ ದೊರಕಿಸಲು ಶ್ರದ್ಧೆಯಿಂದ ಕೆಲಸ ಮಾಡೋಣ ಎಂದರು.