ವಿಜಯಪುರ:- ಜಿಲ್ಲೆಯಲ್ಲಿ ತಡರಾತ್ರೀ ಸುರಿದ ಧಾರಾಕಾರ ಮಳೆಗೆ ಹಲವು ಮನೆಗಳಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿ ಮಾಡಿದೆ. ಪರಿಣಾಮ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು.
ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ದೇವಣಗಾಂವ ಗ್ರಾಮದಲ್ಲಿ ಘಟನೆ ಜರುಗಿದೆ. ಸರಿಯಾದ ಚರಂಡಿ ವ್ಯವಸ್ತೆ ಇಲ್ಲದ ಕಾರಣ ಮಳೆ ನೀರು ಮನೆಯೊಳಗೆ ನುಗ್ಗಿದೆ. ಮಳೆ ನೀರು ನುಗ್ಗಿದ ಪರಿಣಾಮ ರಾತ್ರಿಯಿಡಿ ಕುಟುಂಬಸ್ಥರು ಜಾಗರಣೆ ಮಾಡಿದ್ದಾರೆ. ಜಟ್ಟೆಪ್ಪ ಕುರುಬತಳ್ಳಿ, ರೇಣುಕಾ, ಮಲ್ಲಮ್ಮ ಎಂಬುವರ ಮನೆಯೊಳಗೆ ನೀರು ನುಗ್ಗಿದ ಪರಿಣಾಮ, ಮನೆಯಲ್ಲಿನ ದವಸ ಧಾನ್ಯ, ಬಟ್ಟೆ ಬರೆ ಸಂಪೂರ್ಣ ಜಲಾವೃತವಾಗಿದೆ.
ಹಲವು ಬಾರಿ ಚರಂಡಿ ವ್ಯವಸ್ಥೆ ಸರಿ ಪಡಿಸುವಂತೆ ಮನವಿ ಮಾಡಿದರೂ ಗ್ರಾಮ ಪಂಚಾಯತಿ ಅಧಿಕಾರಿಗಳು, ಸಿಬ್ಬಂದಿ ಕ್ಯಾರೇ ಎಂದಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಸ್ಥಳಕ್ಕೆ ತಡರಾತ್ರೀ ಆಲಮೇಲ ಠಾಣೆಯ ಪಿ ಎಸ್ ಐ ಅರವಿಂದ ಅಂಗಡಿ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ರಾತ್ರೀಯೇ ಜೆಸಿಬಿ ಮೂಲಕ ನೀರು ಬೇರೆಡೆ ಸ್ಥಳಾಂತರ ಮಾಡಲು ಪೊಲೀಸರು ಹಾಗೂ ಸ್ಥಳೀಯರು ಹರಸಾಹಸ ಮಾಡಿದ್ದಾರೆ.
ಅಲ್ಲದೇ ಘಟನೆಯಿಂದ ಅಪಾರ ಹಾನಿಯಾಗಿದ್ದು, ಸೂಕ್ತ ಪರಿಹಾರಕ್ಕೆ ಕುಟುಂಬಸ್ಥರು ಒತ್ತಾಯ ಮಾಡಿದ್ದಾರೆ. ಆಲಮೇಲ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.