ಮಂಡ್ಯ :- ಇತ್ತಿಚೆಗೆ ಮಂಗಳೂರಿನಲ್ಲಿ ಮುಸ್ಲಿಂ ಯುವಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ರಾಜ್ಯ ಸರ್ಕಾರ, ಕಾಂಗ್ರೆಸ್ ಪುಢಾರಿಗಳ ಕುಮ್ಮಕ್ಕಿನಿಂದ ಹಿಂದೂ ಕಾರ್ಯಕರ್ತರ ಬಂಧನವಾಗಿದೆ
ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದರು.
ಸರ್ಕಾರಿ ನೌಕರರು ಇತಿಮಿತಿಯಲ್ಲಿ ಇರಬೇಕು: ಸಚಿವ ಮಧು ಬಂಗಾರಪ್ಪ ಎಚ್ಚರಿಕೆ!
ಮದ್ದೂರು ಬಿಜೆಪಿ ಮಂಡಲ ಕಛೇರಿಗೆ ಶನಿವಾರ ಭೇಟಿ ನೀಡಿದ ಅವರು ಮನ್ ಮುಲ್ ನಿರ್ದೇಶಕ ಹಾಗೂ ಬಿಜೆಪಿ ಮುಖಂಡ ಎಸ್.ಪಿ.ಸ್ವಾಮಿ ಮತ್ತು ಬಿಜೆಪಿ ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಮಂಗಳೂರಿನಲ್ಲಿ ನಡೆಯುತ್ತಿರುವ ಕೋಮುಗಲಭೆಯ ವಿಷಯದಲ್ಲಿ ಕಾಂಗ್ರೆಸ್ ಪಕ್ಷವೇ ಅದನ್ನು ಹತ್ತಿಕ್ಕುವ ಬದಲು ಬೆಂಕಿ ಹಚ್ಚುವ ಕೆಲಸವನ್ನು ಮಾಡುವ ಮೂಲಕ ಅದನ್ನು ಹೆಚ್ಚೆಚ್ಚು ಮಾಡಲು ಪಿತೂರಿ ಮಾಡುತ್ತಿದೆ ಹಾಗೂ ರಾಜ್ಯದ ಹಲವೆಡೆ ಕೋಮುಗಲಭೆಗಳಿಗೆ ಪ್ರಚೋದನೆ ನೀಡಿ ಕುಮ್ಮಕ್ಕು ನೀಡುತ್ತಿದ್ದಾರೆ ಅದು ದಕ್ಷಿಣ ಕನ್ನಡ ಜಿಲ್ಲೆಯ ಜನತೆಗೆ ಚೆನ್ನಾಗಿ ಗೊತ್ತಿದೆ ಎಂದು ಆರೋಪಿಸಿದರು.
ಮಂಗಳೂರಿನಲ್ಲಿ ಮುಸ್ಲಿಂ ಹತ್ಯೆ ಆಗಿದೆ, ಇವರ ಇಂಟಲಿಜೆನ್ಸ್ ಎಲ್ಲಿ ಹೋಗಿತ್ತು. ಸುಹಾಸ್ ಶೆಟ್ಟಿ ಹತ್ಯೆಯಾದ ಸಂದರ್ಭದಲ್ಲಿ ಯಾವ ರೀತಿ ಮಹಿಳೆಯರು ತೊಡಗಿಸಿಕೊಂಡಿದ್ದರು ಎಂದು ಗೊತ್ತಿದೆ. ಹತ್ಯೆ ಮಾಡುವುದಕ್ಕೆ ಹೊರ ದೇಶದಿಂದ ಹಣ ಕೊಟ್ಟಿರುವ ಬಗ್ಗೆ ಚರ್ಚೆಯಾಗುತ್ತಿದೆ. ರಾಜ್ಯ ಸರ್ಕಾರ ಅಲ್ಪ ಸಂಖ್ಯಾತರ ಓಲೈಕೆ ಮಾಡುತ್ತಿದೆ. ಇದಕ್ಕೆ ಮುಂದೆ ಭಾರಿ ಬೆಲೆ ತೆರಬೇಕಿದೆ ಎಂದು ವಿಜಯೇಂದ್ರ ಗುಡುಗಿದರು.
ಪೊಲೀಸರಿಂದ ಅತಿರೇಕದ ವರ್ತನೆ ನಡೆಯುತ್ತಿದೆ. ಸರ್ಕಾರದಿಂದ ಕುಮ್ಮಕ್ಕು ನೀಡಲಾಗುತ್ತಿದೆ. ಕೋಮು ನಿಗ್ರಹ ದಳ ಸ್ಥಾಪನೆ ಮಾಡಿದ್ದಾರೆ. ಇದು ಹಿಂದೂ ಹಾಗೂ ಬಿಜೆಪಿ ಕಾರ್ಯಕರ್ತರ ಟಾರ್ಗೆಟ್ ಆಗುತ್ತಿದೆ ಇದೇ ರೀತಿ ಪರಿಸ್ಥಿತಿ ಮಿತಿಮೀರಿದರೆ ಅದಕ್ಕೆ ಗೃಹ ಸಚಿವರು, ಸಿಎಂ ಕಾರಣರಾಗುತ್ತಾರೆ ಎಂದು ಎಚ್ಚರಿಸಿದರು.
ರಾಜ್ಯ ಸರ್ಕಾರದ ಬೆಲೆ ಏರಿಕೆಯಿಂದಾಗಿ ಜನತೆ ಬೇಸತ್ತು ಹೋಗಿದ್ದಾರೆ ಈ ಮೂಲಕ ರಾಜ್ಯ ಸರ್ಕಾರವು ಬಡವರ, ರೈತರ, ದೀನ ದಲಿತರ ವಿರೋಧಿ ಸರ್ಕಾರವೆಂದು ಸಾಬೀತಾಗಿದೆ. ಇದರಿಂದಾಗಿ ಎಲ್ಲಾ ವರ್ಗದ ಜನರಿಗೆ ಅನ್ಯಾಯವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತುವುದನ್ನೇ ಕೆಲಸ ಮಾಡಿಕೊಂಡಿದೆ. ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷವು ಅಧಿಕಾರಕ್ಕೆ ಬರಲಿದೆ. ಮಂಡ್ಯ ಜಿಲ್ಲೆಯಲ್ಲಿ 2 ರಿಂದ 3 ಸ್ಥಾನಗಳಿಸಿ ಬಿಜೆಪಿ – ಜೆಡಿಎಸ್ ಮೈತ್ರಿ ಮುಂದುವರೆಯಲಿದೆ ಎಂದರು.
ಇದೇ ವೇಳೆ ಮಂಡ್ಯದಲ್ಲಿ ಸಂಚಾರಿ ಪೊಲೀಸರ ಎಡವಟ್ಟಿನಿಂದ ಸಾವನ್ನಪ್ಪಿದ ರಿತೀಕ್ಷಾ ಪೋಷಕರಿಗೆ ಸಾಂತ್ವನ ಹೇಳಿ ಪರಿಹಾರ ಧನ ನೀಡಿದರು.
ರಿತೀಕ್ಷಾ ಸುರಕ್ಷಾ ಎಂಬ ಹೆಸರಿನಲ್ಲಿ 10 ಸಾವಿರ ಹೆಲ್ಮೆಟ್ ಗಳನ್ನು ವಿತರಿಸುವುದಾಗಿ ಇದೇ ವೇಳೆ ಬಿಜೆಪಿ ಮುಖಂಡ ಸಚ್ಚಿದಾನಂದ ಘೋಷಿಸಿದರು.
ಇದೇ ವೇಳೆ ಮನ್ ಮುಲ್ ನಿರ್ದೇಶಕ ಹಾಗೂ ಬಿಜೆಪಿ ಮುಖಂಡ ಎಸ್.ಪಿ.ಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಡಾ. ಇಂದ್ರೇಶ್, ಮುಖಂಡರಾದ ಇಂಡುವಾಳು ಸಚ್ಚಿದಾನಂದ, ಸಿದ್ದರಾಮಯ್ಯ, ಮಹದೇವು, ಡಾಬಾ ಕಿಟ್ಟಿ, ಮಹೇಂದ್ರ, ಮ.ನ.ಪ್ರಸನ್ನಕುಮಾರ್, ಶ್ವೇತಾ, ಗುರುಮಲ್ಲೇಶ್, ಸೇರಿದಂತೆ ಹಲವರು ಇದ್ದರು.
ವರದಿ : ಗಿರೀಶ್ ರಾಜ್ ಮಂಡ್ಯ