ಬೆಂಗಳೂರು: ರಾಜ್ಯದ ಅಬಕಾರಿ ಇಲಾಖೆಯಲ್ಲಿ ಹಗರಣ, ಗೋಲ್ಮಾಲ್ ನಡೆಯೋದು ಹೊಸದೇನಲ್ಲ. ಆದರೆ, ವಿಳಾಸವೇ ಇಲ್ಲದ ಜಾಗದ ಹೆಸರಲ್ಲಿ CL-7 ಬಾರ್ ಲೈಸೆನ್ಸ್ ನೀಡಲಾಗಿದೆ ಎಂದು ಆರೋಪಿಸಿ ಹಿರಿಯ ವಕೀಲ ಹರಿಪ್ರಸಾದ್ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ಬೆಂಗಳೂರು ಪೂರ್ವ ತಾಲೂಕು ಬಿದರಹಳ್ಳಿ ಹೋಬಳಿಯ ರಾಂಪುರ ಗ್ರಾಮದಲ್ಲಿ ಅಕ್ರಮವಾಗಿ ಇ.ಸಿ ಪ್ರಕಾಶ್ ಎಂಬುವರ ಹೆಸರಿನಲ್ಲಿ CL-7 ಬಾರ್ ಲೈಸೆನ್ಸ್ ನೀಡಲಾಗಿದೆ ಎಂದು ಹರಿಪ್ರಸಾದ್ ಆರೋಪಿಸಿದ್ದಾರೆ.
ಈ ಹಗರಣದಲ್ಲಿ ಕೆ.ಆರ್ ಪುರಂ ವಲಯ-9ರ ಅಬಕಾರಿ ನಿರೀಕ್ಷಕ ಕೆ.ಎನ್ ಭರತ್, ಬೆಂಗಳೂರು ಉಪವಿಭಾಗ-03ರ ಅಬಕಾರಿ ಉಪ ಅಧೀಕ್ಷಕ ತುಕಾರಾಂ ನಾಯಕ್, ಬೆಂಗಳೂರು ನಗರ ಜಿಲ್ಲೆ ಅಬಕಾರಿ ಉಪ ಆಯುಕ್ತರು, ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ವಿರುದ್ಧವೂ ಲೋಕಾಯುಕ್ತಕ್ಕೆ ವಕೀಲ ಹರಿಪ್ರಸಾದ್ ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ.
ಲೋಕಾಯುಕ್ತಕ್ಕೆ ಕೊಟ್ಟ ದೂರಿನಲ್ಲೇನಿದೆ ?
ಕೆ.ಆರ್ ಪುರಂ ಅಬಕಾರಿ ವಲಯ-2 ವ್ಯಾಪ್ತಿಗೆ ಬರುವ ಬೆಂಗಳೂರು ಪೂರ್ವ ತಾಲೂಕು ಬಿದರಹಳ್ಳಿ ಹೋಬಳಿಯ ರಾಂಪುರ ಗ್ರಾಮದಲ್ಲಿ ಬೋಗಸ್ ದಾಖಲೆ ನೀಡಿ CL-7 ಬಾರ್ ಲೈಸೆನ್ಸ್ ಅಕ್ರಮವಾಗಿ ನೀಡಲಾಗಿದೆ ಎಂದು ದೂರು ನೀಡಲಾಗಿದೆ.
ರಾಂಪುರ ಗ್ರಾಮದ ಸನಂ.21/1ರಲ್ಲಿ 2024-25 ಸಾಲಿನಲ್ಲಿ ಪುಟ್ಟಲಿಂಗಯ್ಯ ಎಂಬ ವ್ಯಕ್ತಿಯ ಹೆಸರಿನಲ್ಲಿ ನವೀಕರಣಗೊಂಡು ಅಸ್ತಿತ್ವದಲ್ಲಿರುವ ಅಭಿಲಾಶ್ ಬಾರ್ ಅಂಡ್ ರೆಸ್ಟೋರೆಂಟ್ ಹೆಸರಿನ CL-9 ಲೈಸೆನ್ಸ್ ಹೊಂದಿರುವ ಕಟ್ಟಡ ಹಾಗೂ ಅದೇ ವಿಳಾಸ ತೋರಿಸಿ ಕಟ್ಟಡವೇ ಇಲ್ಲದ ಜಾಗಕ್ಕೆ ಇ.ಸಿ ಪ್ರಕಾಶ್ ಎಂಬ ವ್ಯಕ್ತಿಯ ಹೆಸರಿನಲ್ಲಿCL-9 ಬಾರ್ ಲೈಸೆನ್ಸ್ ಮಂಜೂರು ಮಾಡಲಾಗಿದೆಯಂತೆ.
CL-9 ಲೈಸೆನ್ಸ್ ಹೊಂದಿರುವ ಅಭಿಲಾಶ್ ಬಾರ್ ಅಂಡ್ ರೆಸ್ಟೋರೆಂಟ್ ಗೆ ಮದ್ಯಸೇವನೆಗೆ ಅವಕಾಶ ಇದೆ. ಅಭಿಲಾಶಾ ಬಾರ್ ನ ಕಂಪಾರ್ಟ್ ಮೆಂಟ್ ಗಳನ್ನೇ ದೀಪಾ ಕಂಫರ್ಟ್ ಗೆ ಸೇರಿವೆ ಎಂದು ಬೋಗಸ್ ದಾಖಲೆ ಸೃಷ್ಟಿಸಿ CL-7 ಲೈಸೆನ್ಸ್ ನೀಡಲಾಗಿದೆ ಎಂದು ಲೋಕಾಯುಕ್ತಕ್ಕೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ದೊಡ್ಡ ಹಗರಣದಲ್ಲಿ ಕೆ.ಆರ್ ಪುರಂ ವಲಯ-9ರ ಅಬಕಾರಿ ನಿರೀಕ್ಷಕ ಕೆ.ಎನ್ ಭರತ್, ಬೆಂಗಳೂರು ಉಪವಿಭಾಗ-03ರ ಅಬಕಾರಿ ಉಪ ಅಧೀಕ್ಷಕ ತುಕಾರಾಂ ನಾಯಕ್, ಬೆಂಗಳೂರು ನಗರ ಜಿಲ್ಲೆ ಅಬಕಾರಿ ಉಪ ಆಯುಕ್ತರು, ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ಕೂಡ ಶಾಮೀಲಾಗಿದ್ದಾರೆ ಎಂದು ವಕೀಲ ಹರಿಪ್ರಸಾದ್ ಆರೋಪಿಸಿದ್ದಾರೆ.
ಈ ಹಿಂದೆ ಬಾರ್ ಲೈಸೆನ್ಸ್ ಅಕ್ರಮವಾಗಿ ನೀಡಿರುವುದರ ವಿರುದ್ಧ ಅಬಕಾರಿ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಹೀಗಾಗಿ ಲೋಕಾಯುಕ್ತಕ್ಕೆ ದಾಖಲೆ ಸಮೇತ ದೂರು ನೀಡಿದ್ದೇನೆ. ಲೋಕಾಯುಕ್ತರು ಈ ಹಗರಣದ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಹರಿಪ್ರಸಾದ್ ಆಗ್ರಹಿಸಿದ್ದಾರೆ.