ಭಾರತೀಯ ಚಿತ್ರರಂಗ ಕಂಡ ವಿಭಿನ್ನ-ವಿಶೇಷ ನಿರ್ದೇಶಕರಲ್ಲಿ ಒಬ್ಬರು ರಿಯಲ್ ಸ್ಟಾರ್ ಉಪೇಂದ್ರ. ಬುದ್ದಿವಂತನ ನಿರ್ದೇಶಿಸಿದ ಚಿತ್ರಗಳೆಲ್ಲವೂ ಮಾಸ್ಟರ್ ಪೀಸ್. ಉಪ್ಪಿ ನಿರ್ದೇಶನವನ್ನು ಸ್ವತಃ ಸೂಪರ್ ಸ್ಟಾರ್ ರಜನಿಕಾಂತ್ ಮೆಚ್ಚಿ ಹೊಗಳಿದ್ದಾರೆ. ಅಷ್ಟೇ ಯಾಕೆ ಡೈರೆಕ್ಟರ್ ಡೈರೆಕ್ಟರ್ಸ್ ಅಂತಾ ಕರೆಸಿಕೊಳ್ಳುವ ಉಪೇಂದ್ರ ಇದೇ ತಲೈವಾ ಬಗ್ಗೆ ಸಖತ್ ಮಾತುಗಳನ್ನು ಆಡಿದ್ದಾರೆ.
ಯುಐ ಸಿನಿಮಾ ಬಳಿಕ ಉಪ್ಪಿ ಅರ್ಜುನ್ ಜನ್ಯ ನಿರ್ದೇಶನದಲ್ಲಿ ನಟಿಸಿದ್ದಾರೆ. 45 ಚಿತ್ರದಲ್ಲಿ ಶಿವಣ್ಣ, ಉಪ್ಪಿ ಹಾಗೂ ರಾಜ್ ಬಿ ಶೆಟ್ಟಿ ಒಟ್ಟಿಗೆ ತೆರೆಹಂಚಿಕೊಂಡಿದ್ದು, ಈ ಚಿತ್ರದ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದೆ. ಆಗಸ್ಟ್ 15ಕ್ಕೆ ಚಿತ್ರ ತೆರೆಗೆ ಬರ್ತಿದ್ದು, ಪ್ಯಾನ್ ಇಂಡಿಯಾ ಸಿನಿಮಾವಾಗಿರುವುದರಿಂದ ಇಡೀ ತಂಡ ಮುಂಬೈ, ಹೈದ್ರಾಬಾದ್ ಹೀಗೆ ಎಲ್ಲ ರಾಜ್ಯಗಳಲ್ಲಿಯೂ ಪ್ರ ಮೋಷನ್ ನಡೆಸುತ್ತಿದೆ. ನಿನ್ನೆ ಬೆಂಗಳೂರಿನಿಂದ ಫ್ಲೈಟ್ ಹತ್ತಿ ಮುಂಬೈಗೆ ಲ್ಯಾಂಡ್ ಆಗಿದ್ದ ಚಿತ್ರತಂಡ ಅಲ್ಲಿಂದ ಹೈದರಾಬಾದ್ ನಲ್ಲಿ ಪ್ರಚಾರ ನಡೆಸಿದೆ. ಈ ವೇಳೆ ಉಪ್ಪಿಗೆ ಕೂಲಿ ಚಿತ್ರದ ಬಗ್ಗೆ ಪ್ರಶ್ನೆ ಕೇಳಲಾಗಿದೆ.
ಲೋಕೇಶ್ ಕನಗರಾಜ್ ನಿರ್ದೇಶನದ ರಜನಿ ನಟನೆಯ ಕೂಲಿ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಕಾಲೀಶ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಉಪೇಂದ್ರ, ಲೋಕೇಶ್ ಬಂದು ಕಥೆ ಹೇಳಿದರು. ನಾನು ಚಿತ್ರದಲ್ಲಿ ನಟಿಸಿದ್ದಾರೆ. ರಜನಿ ಸರ್ ಜೊತೆ ನಟಿಸಿರುವುದು ಅದ್ಭುತ ಅನುಭವ. ಅವರು ದ್ರೋಣಾಚಾರ್ಯ ನಾನು ಏಕಲವ್ಯ. ನನಗೆ ಈ ಚಿತ್ರ ಸಿಕ್ಕಿರುವುದು ಆಶೀರ್ವಾದ. ಆಮೀರ್ ಖಾನ್ ಹಾಗೂ ನಾಗಾರ್ಜುನ ಕೂಡ ಚಿತ್ರದಲ್ಲಿ ನಟಿಸಿದ್ದಾರೆ. ಒಂದೊಳ್ಳೆ ಕಾಂಬಿನೇಷನ್ ಇದೆ ಎಂದಿದ್ದಾರೆ.
ಕೂಲಿ ಸಿನಿಮಾದಲ್ಲಿ ಬಹುತಾರಾಗಣ ಇದೆ. ರಜನಿಕಾಂತ್ ಜೊತೆ ಅನೇಕ ಘಟಾನುಘಟಿ ಕಲಾವಿದರು ಅಭಿನಯಿಸುತ್ತಿದ್ದಾರೆ. ಅಕ್ಕಿನೇನಿ ನಾಗಾರ್ಜುನ, ಶ್ರುತಿ ಹಾಸನ್, ಸತ್ಯರಾಜ್ ಮುಂತಾದವರು ಪಾತ್ರವರ್ಗಕ್ಕೆ ಸೇರ್ಪಡೆ ಆಗಿದ್ದಾರೆ. ಅದ್ದೂರಿ ಬಜೆಟ್ನಲ್ಲಿ ಈ ಸಿನಿಮಾ ನಿರ್ಮಾಣ ಆಗುತ್ತಿದೆ.