ಬೆಂಗಳೂರು: ಭಾರತದಲ್ಲಿ ಯುವಕರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂಬ ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇದೀಗ ಮತ್ತೆ ನಾನು ಪ್ರತಿದಿನ ಬೆಳಗ್ಗೆ 6:20 ಕ್ಕೆ ಆಫೀಸ್ಗೆ ಹೋಗಿ ರಾತ್ರಿ 8:30 ಗಂಟೆ ವರೆಗೂ ಕೆಲಸ ಮಾಡುತ್ತಿದ್ದೆ ಎಂದು ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ತಿಳಿಸಿದ್ದಾರೆ.
ವಾರದಲ್ಲಿ 70 ಗಂಟೆ ಕೆಲಸ ಮಾಡಬೇಕೆಂಬ ತಮ್ಮ ಹೇಳಿಕೆ ವಿವಾದಕ್ಕೆ ಗುರಿಯಾಗಿರುವ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಈಗ ಯಾರು ಕೂಡ ಇನ್ನೊಬ್ಬ ವ್ಯಕ್ತಿಯ ಮೇಲೆ ದೀರ್ಘ ಕೆಲಸದ ಸಮಯವನ್ನು ಹೇರಬಾರದು. ಇವು ಚರ್ಚೆಯ ವಿಷಯ ಅಲ್ಲ. ಆತ್ಮಾವಲೋಕನಕ್ಕೆ ಸಂಬಂಧಿಸಿದ ವಿಷಯಗಳು ಎಂದು ಹೇಳಿದ್ದಾರೆ.
ನಾನು ಬೆಳಗ್ಗೆ 6:20 ಕ್ಕೆ ಕಚೇರಿಗೆ ಹೋಗಿ ರಾತ್ರಿ 8:30 ಕ್ಕೆ ಹೊರಗೆ ಬರುತ್ತಿದ್ದೆ. ಅದು ಸತ್ಯ, ನಾನು ಅದನ್ನು ಮಾಡಿದ್ದೇನೆ. ನಾನು 40 ವರ್ಷ ವಯಸ್ಸಿನವನಿದ್ದಾಗ ಇಷ್ಟು ಸಮಯ ಕೆಲಸ ಮಾಡಿದ್ದೇನೆ. ಇದು ಚರ್ಚೆಗೆ ಒಳಪಡಿಸುವ ವಿಷಯ ಅಲ್ಲ. ನಿಮಗೆ ನೀವೇ ತೀರ್ಮಾನ ಮಾಡಬಹುದು. ನೀವು ಬಯಸಿದ್ದನ್ನು ಮಾಡಬಹುದು. ನೀವು ಅದನ್ನು ಮಾಡಬೇಕು, ನೀವು ಅದನ್ನು ಮಾಡಬಾರದು ಎಂದು ಯಾರೂ ಹೇಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಜಾಗತಿಕವಾಗಿ ದೇಶವು ತನ್ನ ಸಂಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳಬೇಕಾದರೆ ಭಾರತದ ಯುವಸಮುದಾಯವು ಕಠಿಣ ಪರಿಶ್ರಮ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದು 78 ವರ್ಷದ ನಾರಾಯಣ ಮೂರ್ತಿ ಅವರು ಹೇಳಿದ್ದರು. ನಮ್ಮ ಯುವಕರು, ‘ಇದು ನನ್ನ ದೇಶ. ನಾನು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಲು ಬಯಸುತ್ತೇನೆ’ ಎಂದು ಹೇಳಬೇಕು ಎಂದಿದ್ದರು. ಅವರ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು.
ನಾರಾಯಣ ಮೂರ್ತಿ ಅವರ ಹೇಳಿಕೆಯು ಸೋಷಿಯಲ್ ಮೀಡಿಯಾದಲ್ಲಿ ವಿವಾದ ಹುಟ್ಟುಹಾಕಿತು. ಉದ್ಯಮಿಯೊಬ್ಬರ ಇಂತಹ ಹೇಳಿಕೆಯು ಉದ್ಯೋಗಿಗಳ ಶೋಷಣೆಗೆ ಕಾರಣವಾಗುತ್ತದೆ. ಕೆಲಸ-ಜೀವನದ ಸಮತೋಲನದ ಅಗತ್ಯವನ್ನು ಅವರು ಅರಿತು ಮಾತನಾಡಬೇಕು ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದರು.