ಬೆಂಗಳೂರು: ರಾಜ್ಯದ ಗ್ರಾಮೀಣ ಹಾಗೂ ನಗರದ ಮಕ್ಕಳಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನದ ಪರಿಚಯ, ವಿಜ್ಞಾನ ಶಿಕ್ಷಣವನ್ನು ಬೆಳೆಸಲು ಉತ್ತೇಜಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್, ಸೌರಮಂಡಲ ವೀಕ್ಷಣೆಗೆ ರಾಜ್ಯದ ಎರಡು ಕಡೆ ನಕ್ಷತ್ರಮಂದಿರ ನಿರ್ಮಾಣಕ್ಕೆ ಮುಂದಾಗಿದೆ.
ದೊಡ್ಡಬಳ್ಳಾಪುರದ ಆನಿ ಬೆಸಂಟ್ ಪಾರ್ಕ್ ನಲ್ಲಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶಾಲೆ ಹಾಗೂ ತುಮಕೂರಿನ ಸಿದ್ಧಾರ್ಥ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಕ್ಷತ್ರ ಮಂದಿರ ಆರಂಭವಾಗಲಿವೆ ಎಂದು ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಅಧ್ಯಕ್ಷ ಹುಲಿಕಲ್ ನಟರಾಜ್ ಘೋಷಣೆ ಮಾಡಿದ್ದಾರೆ.
ಈ ಸಂಬಂಧ ಸುದ್ಧಿಗೋಷ್ಠಿ ನಡೆಸಿದ ಹುಲಿಕಲ್ ನಟರಾಜ್, 2.5ಕೋಟಿಗಳಿಂದ 3 ಕೋಟಿ ರೂ. ವೆಚ್ಚದಲ್ಲಿ ನಕ್ಷತ್ರ ಮಂದಿರ ನಿರ್ಮಾಣ ಮಾಡಲಾಗಿದೆ. ಡೋಮ್ ನಿರ್ಮಾಣದಿಂದ ಹಿಡಿದು ಡಿಜಿಟಲ್ ಪ್ರಾಜೆಕ್ಷನ್ ತಂತ್ರಜ್ಞಾನ, ಧ್ವನಿ ವೈಜ್ಞಾನಿಕ ವ್ಯವಸ್ಥೆ, ವಿಜ್ಞಾನ ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ.ಕರ್ನಾಟಕದಲ್ಲಿ ವಿಜ್ಞಾನ ಶಿಕ್ಷಣವನ್ನು ಬೆಳೆಸಲು ಎರಡು ಮಹತ್ವದ ಯೋಜನೆಗಳನ್ನು ಹರ್ಷದಿಂದ ಘೋಷಣೆ ಮಾಡಿದ್ದೇವೆ ಎಂದು ಹುಲಿಕಲ್ ನಟರಾಜ್ ತಿಳಿಸಿದ್ದಾರೆ.
ಈ ನಕ್ಷತ್ರಮಂಡಿರ ಪ್ರಾರಂಭವಾದ ನಂತರ ಪ್ರತಿದಿನ 500 ಮಕ್ಕಳು ಸೌರಮಂಡಲದ ಅನುಭವ ಪಡೆಯಲಿದ್ದಾರೆ. ಇದರಲ್ಲಿ ಸರ್ಕಾರಿ ಶಾಲಾ ಮಕ್ಕಳಿಂದ ಹಿಡಿದು, ಹಳ್ಳಿಯ ಮಕ್ಕಳು ಹಾಗೂ ವಿಜ್ಞಾನ ಪ್ರವಾಸದಲ್ಲಿರುವ ಮಕ್ಕಳು ಭಾಗಿಯಾಗಲಿದ್ದಾರೆ. ಪ್ರಥಮ ಹಂತದಲ್ಲಿ ಸುಮಾರು 1.5 ಲಕ್ಷ ಮಕ್ಕಳಿಗೆ ವಿಜ್ಞಾನವನ್ನು ಈ ಮೂಲಕ ತಲುಪಿಸಬಹುದಾಗಿದೆ.
ಇಷ್ಟು ದಿನ ಬೆಂಗಳೂರಿನ ನೆಹರೂ ತಾರಾಲಯದಲ್ಲಿ ಮಾತ್ರ ಸೌರಮಂಡಲದ ಅನುಭವ ಪಡೆಯಲು ಅವಕಾಶವಿತ್ತು. ಇದೀಗ ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ವಿಜ್ಞಾನದ ಜಾಗೃತಿ ಮೂಡಿಸುವುದು ಇದರ ಇದ್ದೇಶವಾಗಿದೆ. ಇದು ಒಂದು ದಿನದ ಕಾರ್ಯಕ್ರಮವಲ್ಲ. ಮುಂದಿನ 20-30 ವರ್ಷಗಳ ಕಾಲ ಈ ನಕ್ಷತ್ರಮಂದಿರದ ಮೂಲಕ ವಿಜ್ಞಾನ ಅಧ್ಯಯನ, ಶಿಕ್ಷಕರ ತರಬೇತಿ, ರಾತ್ರಿಯ ಗಗನ ವೀಕ್ಷಣಾ ಶಿಬಿರಗಳು ಹಾಗೂ ಅಂಧಶ್ರದ್ದೆ ವಿರೋಧಿ ಚಿತ್ರಗಳ ಪ್ರದರ್ಶನ ನಡೆಯಲಿದೆ. ಈ ನಕ್ಷತ್ರಮಂದಿರಗಳು ಕರ್ನಾಟಕದ ಶೈಕ್ಷಣಿಕ ಭೂದೃಶ್ಯದಲ್ಲಿ ಶಾಶ್ವತವಾದ ವಿಜ್ಞಾನ ಜಾಗೃತಿಯ ಕೇಂದ್ರಗಳಾಗಿ ಕಾರ್ಯನಿರ್ವಹಿಸಲಿವೆ ಎಂದು ವಿವರ ನೀಡಿದರು.