ಗುಜರಾತಿನ ಅಹಮದಾಬಾದಿನಲ್ಲಿ ಇಂದು ನಡೆಯುವ ಹೈವೋಲ್ಟೇಜ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ.
ಈ ರಾಶಿಯವರು ಈ ವಾರದ ಒಳಗಡೆ ಮದುವೆಯ ಸುದ್ದಿ ಕೇಳುವರು: ಮಂಗಳವಾರದ ರಾಶಿ ಭವಿಷ್ಯ 03 ಜೂನ್ 2025!
ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿ ಚೊಚ್ಚಲ ಬಾರಿಗೆ ಪ್ರಶಸ್ತಿ ಎತ್ತಿ ಹಿಡಿಯುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ವಿರಾಟ್ ಕೊಹ್ಲಿಯ ಸುಮಾರು ಎರಡು ದಶಕಗಳ ಸುಧೀರ್ಘ ಕಾಯುವಿಕೆಗೆ ಮುಕ್ತಿ ಸಿಗಲಿ ಎಂಬುದು ಕೋಟ್ಯಂತರ ಅಭಿಮಾನಿಗಳ ನಿರೀಕ್ಷೆ, ಕನಸು ಹಾಗೂ ಹಾರೈಕೆಯಾಗಿದೆ.
ನರೇಂದ್ರಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಸಾವಿರಾರು ಆರ್ ಸಿಬಿ ಅಭಿಮಾನಿಗಳು ನಂ.18 ಜೆರ್ಸಿ ಧರಿಸುವುದರೊಂದಿಗೆ ಕೊಹ್ಲಿಯನ್ನು ಬೆಂಬಲಿಸಲು ನಿರ್ಧರಿಸಿದ್ದಾರೆ. ಇತ್ತೀಚೆಗಷ್ಟೇ ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿ ಪಡೆದಿರುವ ಕೊಹ್ಲಿಗೆ ಈ ಮೂಲಕ ಅಭಿನಂದನೆ ಸಲ್ಲಿಸಲಾಗುತ್ತಿದೆ. RCB ಕ್ವಾಲಿಫೈಯರ್ 1 ರಲ್ಲಿ ಪಂಜಾಬ್ನ್ನು ಎಂಟು ವಿಕೆಟ್ಗಳಿಂದ ಸೋಲಿಸಿ ಫೈನಲ್ ಗೆ ಲಗ್ಗೆ ಇಡುವುದರೊಂದಿಗೆ ಈ ಬಾರಿ ಗೆಲ್ಲುವ ನೆಚ್ಚಿನ ತಂಡವಾಗಿ ಹೊರಹೊಮ್ಮಿದೆ.
ಕೊಹ್ಲಿಯು ಪ್ರತಿ ವರ್ಷದಂತೆ ಈ ವರ್ಷವೂ 614 ರನ್ ಗಳಿಸಿದ್ದಾರೆ. ಆದರೆ ಈ ಬಾರಿ ತಂಡ ಇವರನ್ನೇ ನೆಚ್ಚಿಕೊಂಡಿಲ್ಲ. ಸಮತೂಕದ ಬ್ಯಾಟಿಂಗ್ ಹಾಗೂ ಬೌಲಿಂಗ್ ಪಡೆಯನ್ನು ಹೊಂದಿದೆ. ಈ ಬಾರಿ ಕೊಹ್ಲಿ ಬ್ಯಾಟಿಂಗ್ ಮಾತ್ರ ಗಮನ ಹರಿಸಲಿಲ್ಲ. ಆರ್ ಸಿಬಿಯನ್ನು ಒಂದು ಉತ್ತಮ ತಂಡವಾಗಿ ಕಟ್ಟುವಲ್ಲಿ ಶ್ರಮಿಸಿದ್ದಾರೆ. ಫಿಲ್ ಸಾಲ್ಟ್ ಭಾರತದ ನೆಲಕ್ಕೆ ಹೊಂದಿಕೊಳ್ಳುವ ಮೂಲಕ ಆರ್ ಸಿಬಿ ಪಡೆಯ ಪ್ರಮುಖ ಬ್ಯಾಟರ್ ಆಗಿದ್ದರೆ, ಮಯಾಂಕ್ ಅಗರ್ ವಾಲ್, ನಾಯಕ ರಜತ್ ಪಾಟಿದಾರ್ ಮತ್ತು ಜಿತೇಶ್ ಶರ್ಮಾ, ನಂಬಿಕೆಯುಳ್ಳ ಬ್ಯಾಟ್ಸ್ ಮನ್ ಆಗಿ ಅಭಿಮಾನಿಗಳ ಮನಗೆದ್ದಿದ್ದಾರೆ.
ಬ್ಯಾಟಿಂಗ್ ನಲ್ಲಿ ಕೊಹ್ಲಿಯಂತೆ ಜೋಶ್ ಹ್ಯಾಜಲ್ ವುಡ್ ಬೌಲಿಂಗ್ ನಲ್ಲಿ 21 ವಿಕೆಟ್ ಕಬಳಿಸುವ ಮೂಲಕ ಪರಾಕ್ರಮ ಮೆರೆದಿದ್ದಾರೆ. ಅಲ್ಲದೇ ಅತಿ ಹೆಚ್ಚು ವಿಕೆಟ್ ಪಡೆದ ನಾಲ್ಕನೇ ಬೌಲರ್ ಆಗಿದ್ದಾರೆ. ಇವರು ಆಡಿರುವ ಫೈನಲ್ ನಲ್ಲಿ ಯಾವುದೇ ಪಂದ್ಯವೂ ಸೋತಿಲ್ಲ ಎಂಬುದು ಆರ್ ಸಿಬಿ ಅಭಿಮಾನಿಗಳ ನಿರೀಕ್ಷೆಯನ್ನು ಹೆಚ್ಚಿಸಿದೆ.
ಕೋಚ್ ರಿಕಿ ಪಾಟಿಂಗ್ ಹಾಗೂ ಶ್ರೇಯಸ್ ಅಯ್ಯರ್ ನಾಯಕರಾಗಿರುವ ಪಂಜಾಬ್ ಕಿಂಗ್ಸ್ 10 ತಂಡಗಳ ಪಾಯಿಂಟ್ ಟೇಬಲ್ಸ್ ನಲ್ಲಿ ಎರಡನೇ ತಂಡವಾಗಿ ಹೊರಹೊಮ್ಮಿದೆ. ಶ್ರೇಯಸ್ ಅಯ್ಯರ್ 603 ರನ್ ಗಳಿಸುವುದರೊಂದಿಗೆ ಅವರ ತಂಡವನ್ನು ಫೈನಲ್ ಗೆ ತಂದಿದ್ದಾರೆ.
ಕಳೆದ ಬಾರಿ ಅವರೇ ನಾಯಕರಾಗಿದ್ದ ಕೆಕೆಆರ್ ಟ್ರೋಫಿ ಗೆದ್ದಿತ್ತು .18 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಮೂರು ಬೇರೆ ಬೇರೆ ತಂಡಗಳ ನಾಯಕರಾಗಿದ್ದು, ಫೈನಲ್ ಗೆ ತಂದ ಹೆಸರು ಶ್ರೇಯಸ್ ಅವರಿಗೆ ಮಾತ್ರ ಇದೆ. ದೆಹಲಿ ನಾಯಕರಾಗಿದ್ದಾಗಲೂ ಆ ತಂಡ ಫೈನಲ್ ಪ್ರವೇಶಿಸಿತ್ತು. ಈ ಬಾರಿ ಪಂಜಾಬ್ ಕಿಂಗ್ಸ್ ತಂಡವನ್ನು ಫೈನಲ್ ಗೆ ತರುವ ಮೂಲಕ ಚೊಚ್ಚಲ ಬಾರಿಗೆ ಪ್ರಶಸ್ತಿ ಗೆಲ್ಲುವ ತವಕದಲ್ಲಿದ್ದಾರೆ.