ಸೂಪರ್ ಸ್ಟಾರ್ ರಜನಿಕಾಂತ್ ಸಿನಿಕರಿಯರ್ನ ಮಾಸ್ಟರ್ ಪೀಸ್ ಸಿನಿಮಾಗಳಲ್ಲೊಂದು ಜೈಲರ್. ಸೋಲಿನ ಸುಳಿಯಲ್ಲಿದ್ದ ತಲೈವರನ್ನು ಗೆಲುವಿನ ಟ್ರ್ಯಾಕ್ ಗೆ ಕಂಬ್ಯಾಕ್ ಆಗುವಂತೆ ಮಾಡಿದ್ದು ಇದೇ ಚಿತ್ರ. ಮುತ್ತುವೇಲ್ ಪಾಂಡಿಯನ್ ಆಗಿ ರಜನಿ ಕಮಾಲ್ ಮಾಡಿದ್ದರು. ಕನ್ನಡದ ಸೂಪರ್ ಸ್ಟಾರ್ ಶಿವಣ್ಣ, ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಹಾಗೂ ಬಾಲಿವುಡ್ ಜಾಕಿ ಶ್ರಾಫ್ ಅತಿಥಿ ಪಾತ್ರದಲ್ಲಿ ಗಮನಸೆಳೆದಿದ್ದರು. ಅದರಲ್ಲಿಯೂ ಶಿವಣ್ಣನ ನರಸಿಂಹನ ಪಾತ್ರಕ್ಕಂತೂ ತಮಿಳುಸಿನಿಪ್ರೇಕ್ಷಕ ಫಿದಾ ಆಗಿದ್ದ. ಶಿವಣ್ಣ ಅಮೋಘ ಅಭಿನಯಕ್ಕೆ ರಜನಿಗಿಂತಲೂ ಆಡಿಯನ್ಸ್ ಶಿವಣ್ಣನಿಗೆ ಚಪ್ಪಾಳೆ ತಟ್ಟಿದ್ದೇ ಹೆಚ್ಚು.
ಸದ್ಯ ಜೈಲರ್-2 ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಕೇರಳದಲ್ಲಿ ಚಿತ್ರೀಕರಣ ನಡೆಯುತ್ತಿದ್ದ ತಲೈವರ್, ರಮ್ಯಾ ಕೃಷ್ಣ ಹಾಗೂ ಯೋಗಿಬಾಬು ಭಾಗಿಯಾಗಿದ್ದಾರೆ. ಶಿವಣ್ಣ ಕೂಡ ಜೈಲರ್-2ನಲ್ಲಿ ಇರಲಿದ್ದಾರೆ. ಮೋಹನ್ ಲಾಲ್, ಜಾಕಿ ಶ್ರಾಫ್ ಇರ್ತಾರೋ ಇರೋಲ್ವೋ ಗೊತ್ತಿಲ್ಲ. ವಿಶೇಷ ಅಂದರೆ ತೆಲುಗಿನ ಸೂಪರ್ ಸ್ಟಾರ್ ಒಬ್ಬರು ಜೈಲರ್ ಸೀಕ್ವೆಲ್ ನಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಇದೆ. ಅವರೇ ನಂದಮೂರಿ ಬಾಲಕೃಷ್ಣ.
45 ಸಿನಿಮಾ ಪ್ರಚಾರದ ವೇಳೆ ಶಿವಣ್ಣನಿಗೆ ಈ ಪ್ರಶ್ನೆ ಕೇಳಲಾಗಿದೆ. ಜೈಲರ್ 2ನಲ್ಲಿ ಬಾಲಯ್ಯ ನಟಿಸುತ್ತಿದ್ದಾರೆ ಎಂದು ಪ್ರಶ್ನಿಸಲಾಗಿತ್ತು. ಇದಕ್ಕೆ ಉತ್ತರಿಸಿರುವ ಶಿವಣ್ಣ, “ಅವರು ಚಿತ್ರದಲ್ಲಿ ನಟಿಸುತ್ತಾರೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ, ಅವರು ನಟಿಸಿದರೆ ಚೆನ್ನಾಗಿರುತ್ತದೆ. ನಾನು ಗೌತಮಿಪುತ್ರ ಶಾತಕರ್ಣಿ ಚಿತ್ರದಲ್ಲಿ ಅವರೊಟ್ಟಿಗೆ ನಟಿಸಿದ್ದೇನೆ. ವೈಯಕ್ತಿಕವಾಗಿ, ನಾವು ತುಂಬಾ ಒಳ್ಳೆಯ ಸ್ನೇಹಿತರು” ಎಂದು ಹೇಳಿದ್ದಾರೆ.
ಜೈಲರ್ ಸಿನಿಮಾದ ಮೊದಲ ಭಾಗದಲ್ಲಿಯೇ ಬಾಲಯ್ಯ ನಟಿಸಬೇಕಿತ್ತಂತೆ. ಆದರೆ ಅವರ ಪಾತ್ರ ಯಾಕೋ ಪರಿಪೂರ್ಣ ಅನಿಸುತ್ತಿಲ್ಲ ಎಂಬ ಕಾರಣಕ್ಕೆ ನಿರ್ದೇಶಕ ನೆಲ್ಸನ್ ಅವರ ಪಾತ್ರವನ್ನು ಕೈಬಿಟ್ಟಿದ್ದರಂತೆ. ಈ ಬಾರಿ ರಜನಿ, ಶಿವಣ್ಣ ಜೊತೆ ಬಾಲಯ್ಯನ ಜುಗಲ್ಬಂಧಿ ಇರಲಿದೆ ಎನ್ನಲಾಗುತ್ತಿದೆ.