ವಿಜಯಪುರ:– ಕಳೆದ ತಿಂಗಳು ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದಲ್ಲಿನ ಕೆನೆರಾ ಬ್ಯಾಂಕ್ ಕಳ್ಳತನವಾಗಿತ್ತು. 53 ಕೆಜಿ ಚಿನ್ನ ನಗದನ್ನು ಸಿನಿಮೀಯ ರೀತಿಯಲ್ಲಿ ಕಳ್ಳರು ಕದ್ದುಕೊಂಡು ಪರಾರಿಯಾಗಿದ್ದರು. ಕದೀಮರ ಪತ್ತೆಯ ಕಾರ್ಯ ಪೊಲೀಸರಿಗೆ ಕಬ್ಬಿಣದ ಕಡಲೆಯಾಗಿತ್ತು. ಒಂದು ತಿಂಗಳ ಕಾಲ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಿದ ಪೊಲೀಸರು ಕದೀಮರ ಕೈಗೆ ಕೋಳ ಹಾಕಿದ್ದಾರೆ.
ಇಲ್ಲಿನ ಜಿಲ್ಲಾ ಪೊಲೀಸರು ಅತೀ ದೊಡ್ಡ ಕಳ್ಳತನ ಪ್ರಕರಣ ಭೇದಿಸಿದ್ದಾರೆ. ಬ್ಯಾಂಕ್ ಹಿರಿಯ ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ 58 ಕೆಜಿ 975.94 ಗ್ರಾಂ ಚಿನ್ನಾಭರಣಗಳು ಹಾಗೂ 5.20 ಲಕ್ಷ ನಗದು ಕಳ್ಳತನವಾಗಿತ್ತು. ಈ ಕುರಿತು ಬ್ಯಾಂಕ್ ಮ್ಯಾನೇಜರ್ ಮನಗೂಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಬ್ಯಾಂಕ್ ಕಿಟಕಿ ಸರಳು ಮುರಿದಿದ್ದು ಕಪ್ಪು ಗೊಂಬೆಗೆ ಪೂಜೆ ಮಾಡಿ ವಾಮಾಚಾರ ಮಾಡಿದ್ದು ತನಿಖೆಯ ಹಾದಿ ತಪ್ಪಿಸಲು ಎಂಬುವುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲೇ ಗೊತ್ತಾಗಿತ್ತು.
ಜಿಲ್ಲೆಯಲ್ಲೇ ದೊಡ್ಡ ಕಳ್ಳತನ ಪ್ರಕರಣವಾಗಿರುವ ಕಾರಣ ಎಸ್ಪಿ ಲಕ್ಷ್ಮಣ ನಿಂಬರಗಿ ಕದೀಮರ ಪತ್ತೆಗೆ ಹಿರಿಯ ಆಧಿಕಾರಿಗಳ ನೇತೃತ್ವದಲ್ಲಿ 8 ವಿಶೇಷ ತಂಡಗಳನ್ನು ರಚನೆ ಮಾಡಿದ್ದರು. ವಿಶೇಷ ತಂಡಗಳು ವಿವಿಧ ರಾಜ್ಯಗಳ ಜಿಲ್ಲೆಗಳಲ್ಲಿ ಕದೀಮರ ಪತ್ತೆಗೆ ಜಾಲ ಬೀಸಿ ತನಿಖೆ ನಡೆಸಿದ್ದರು. ಕಳ್ಳತನ ಪ್ರಕರಣ ನಡೆದು ಒಂದು ತಿಂಗಳಾಗುತ್ತಾ ಬಂದಿದ್ದ ವೇಳೆಯೇ ತನಿಖೆಯಲ್ಲಿ ಕದೀಮರ ಕುರಿತು ಕೆಲ ಮಾಹಿತಿಗಳು ಪೊಲೀಸರಿಗೆ ಸಿಕ್ಕಿದ್ದವು. ಘಟನೆ ನಡೆದಿ ದಿನ ಹುಬ್ಬಳ್ಳಿ ಪಾಸಿಂಗ್ ಹೊಂದಿದ್ದ ಕಾರೊಂದು ಬಾಗಲಕೋಟೆ ಜಿಲ್ಲೆಯ ಗದ್ದನಕೇರಿ ಕ್ರಾಸ್ ಬಳಿ ವಿಜಯಪುರದಿಂದ ಹುಬ್ಬಳ್ಳಿಯತ್ತ ರಾತ್ರಿ ಪ್ರಯಾಣ ಮಾಡಿದ್ದು ಕಂಡು ಬಂದಿತ್ತು. ಈ ಕಾರ್ ನಂಬರ್ ಆಧಾರದ ಮೇಲೆ ತನಿಖೆ ಮಾಡಿದಾಗ ಈ ಕಾರ್ ಮನಗೂಳಿ ಪಟ್ಟಣದ ಕೆನೆರಾ ಬ್ಯಾಂಕ್ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದ ಹಾಗೂ ಸದ್ಯ ಕೊಲ್ಹಾರ ತಾಲೂಕಿನ ರೋಣಿಹಾಳ ಗ್ರಾಮದಲ್ಲಿರುವ ಕೆನೆರಾ ಬ್ಯಾಂಕ್ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಹುಬ್ಬಳ್ಳಿಯ ಕೋಠಾರಿ ನಗರದ ವಿಜಯಕುಮಾರ ಮಿರಿಯಾಲ ಎಂಬುವರದ್ದು ಎಂದು ತಿಳಿದು ಬಂದಿತ್ತು.
ಕೂಡಲೇ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮನಗೂಳಿಯ ಕೆನೆರಾ ಬ್ಯಾಂಕ್ ಕಳ್ಳತನದ ಕಹಾನಿ ಖಾಕಿ ಪಡೆಯ ಮುಂದೆ ಬಹಿರಂಗವಾಗಿತ್ತು.