ಬೆಂಗಳೂರು: ಕಮಲ್ ಹಾಸನ್ ಕನ್ನಡ ಕಿಡಿ ಈಗ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದ್ದು ಎಂಬ ಉದ್ಘಟನದ ಹೇಳಿಕೆ ಕೊಟ್ಟು ಕನ್ನಡಿಗರ ಕಣ್ಣು ಕೆಂಪಗಾಗುವಂತೆ ಮಾಡಿದ್ದಾರೆ. ಕಮಲ್ ಹಾಸನ್ ತಕ್ಷಣ ಕ್ಷಮೆ ಕೇಳಬೇಕು ಅಂತಾ ಕನ್ನಡಿಗರು ಪಟ್ಟು ಹಿಡಿದಿದ್ದರೆ, ಅತ್ತ ಕಮಲ್ ತಾವು ಕ್ಷಮೆ ಕೇಳಲ್ಲ ಎಂದಿದ್ದಾರೆ.
ಕನ್ನಡಪರ ಸಂಘಟನೆಗಳು ಕಮಲ್ ಹಾಸನ್ ಚಿತ್ರವನ್ನು ಕನ್ನಡದಲ್ಲಿ ಬ್ಯಾನ್ ಮಾಡಬೇಕು ಎಂಬ ಕೂಗು ಕೇಳಿಬಂದಿದೆ. ಈ ಹಿನ್ನೆಲೆ ಇಂದು ಸಿನಿಮಾ ವಿತರಕ ಕಮಲಾಕರ್ ನೇತೃತ್ವದಲ್ಲಿಂದು ಸಭೆ ನಡೆಸಲಾಯಿತು. ಸಭೆಯಲ್ಲಿ ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷರಾದ ಸಾರಾ ಗೋವಿಂದು, ಥಾಮಸ್ ಡಿಸೋಜಾ ಭಾಗಿ, ಪ್ರದರ್ಶಕ ವಲಯದ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ನಿರ್ಮಾಪಕರು ಭಾಗಿಯಾಗಿದ್ದರು.
ಈ ಬಗ್ಗೆ ಮಾತನಾಡಿರುವ ಸಾರಾ ಗೋವಿಂದು, ಕಮಲ್ ಹಾಸನ್ ಇವತ್ತು ಅಥವಾ ನಾಳೆ ಒಳಗೆ ಕಮಲ್ ಹಾಸನ್ ಕ್ಷಮೆ ಕೇಳದೇ ಇದ್ರೆ ಖಂಡನೆ ಮಾಡ್ತೀವಿ. ಬಹಿರಂಗವಾಗಿ ಕ್ಷಮೆ ಕೇಳದೇ ಇದ್ರೆ ಯಾವುದೇ ಕಾರಣಕ್ಕೂ ಸಿನಿಮಾ ರಿಲೀಸ್ ಮಾಡೋಕೆ ಅವಕಾಶ ಮಾಡಿಕೊಡಲ್ಲ ಅಂತ ವಾರ್ನಿಂಗ್ ಕೊಟ್ಟಿದ್ದಾರೆ.
ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು, ಕನ್ನಡ ರಕ್ಷಣಾ ವೇದಿಕೆಯವರು, ಹಲವಾರು ಸಂಘ ಸಂಸ್ಥೆಗಳು ಕಮಲ್ ಹಾಸನ್ ಸಿನಿಮಾ ಬ್ಯಾನ್ ಮಾಡ್ಬೇಕು ಅಂತಾ ಪಟ್ಟು ಹಿಡಿದಿದ್ದಾರೆ. ಕಮಲ್ ಹಾಸನ್ ಮಾಡಿರುವ ತಪ್ಪನ್ನ ಮನವರಿಕೆ ಮಾಡಿಸಿ ಕ್ಷಮೆ ಕೇಳಿಸುವ ಪ್ರಯತ್ನ ಮಾಡ್ತೀವಿ ಅಂತ ಹೇಳಿದ್ದಾರೆ.