ಬೆಂಗಳೂರು: ಬೋವಿ ಅಭಿವೃದ್ಧಿ ನಿಗಮ ಅವ್ಯವಹಾರ ಪ್ರಕರಣದಲ್ಲಿ ತನಿಖೆ ಎದುರಿಸುತ್ತಿದ್ದ ಜೀವಾ ಎನ್ನುವ ವಕೀಲೆಯ ಆತ್ಮಹತ್ಯೆ ಘಟನೆ ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡತೊಡಗಿದೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ 90 ದಿನಗಳ ಕಾಲ ತನಿಖೆ ನಡೆಸಿದ್ದ ವಿಶೇಷ ತನಿಖಾ ತಂಡ (SIT) 2,300 ಪುಟಗಳ ಅಂತಿಮ ವರದಿಯನ್ನು ಹೈಕೋರ್ಟ್ಗೆ ಸಲ್ಲಿಸಿದೆ.
ಕೋರ್ಟ್ಗೆ ಸಲ್ಲಿಸಿದ ಅಂತಿಮ ವರದಿಯಲ್ಲಿ ಮೃತ ಜೀವಾ ಡೆತ್ ನೋಟ್ನಲ್ಲಿದ್ದ ಬಹುತೇಕ ಆರೋಪಗಳು ಸಾಬೀತಾಗಿದೆ. ಅಲ್ಲದೇ ಡಿವೈಎಸ್ಪಿ ಕನಕಲಕ್ಷ್ಮಿ ಅವರು ಕಿರುಕುಳ ನೀಡಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ ಇದೆಲ್ಲರ ದಾಖಲೆಗಳನ್ನು ಕೋರ್ಟ್ಗೆ ಸಲ್ಲಿಸಲಾಗಿದೆ. ಅಲ್ಲದೇ ವಿಧಿವಿಜ್ಞಾನ ಪ್ರಯೋಗಾಲಯ ವರದಿಗಳು, ಮರಣೋತ್ತರ ಪರೀಕ್ಷಾ ವರದಿ, ಡೆತ್ನೋಟ್ ಫಾರೆನ್ಸಿಕ್ ರಿಪೋರ್ಟ್ಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಜೀವಾ ವಿಚಾರಣೆ ವೇಳೆ ಚಿತ್ರೀಕರಿಸಲಾಗಿದ್ದ ಕೆಲವು ವಿಡಿಯೋ ಡಿಲೀಟ್ ಆಗಿದ್ದವು. ಜೀವಾರನ್ನು ವಿವಸ್ತ್ರಗೊಳಿಸಿರುವುದು, ಇತರೆ ಕೆಲ ವಿಡಿಯೋಗಳು ಇರಲಿಲ್ಲ. ಎಫ್ಎಸ್ಎಲ್ ಮೂಲಕ ಮರು ಸಂಗ್ರಹಿಸಿದಾಗ ಆ ವಿಡಿಯೋಗಳು ಪತ್ತೆಯಾದವು. ಡೆತ್ನೋಟ್ನಲ್ಲಿ ಜೀವಾ ಮಾಡಿದ್ದ ಬಹುತೇಕ ಆರೋಪಗಳು ಸಾಬೀತಾಗಿದೆ.
ಜೀವಾ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸಲು ಮೂವರು ಐಪಿಎಸ್ ಅಧಿಕಾರಿಗಳನ್ನೊಳಗೊಂಡ ಎಸ್ಐಟಿ ತಂಡವನ್ನ ರಚಿಸಲಾಗಿತ್ತು. ಇದರಲ್ಲಿ ಸಿಸಿಬಿ ಡಿಸಿಪಿ ಹಕಾಯ್ ಅಕ್ಷಯ್ ಮಚೀಂದ್ರ, ಎಸ್ಪಿ ನಿಶಾ ಜೇಮ್ಸ್, ಸಿಬಿಐ ಎಸ್ಪಿ ವಿನಾಯಕ್ ವರ್ಮ ಅವರನ್ನೊಳಗೊಂಡ ಎಸ್ಐಟಿ ತಂಡ 90 ದಿನಗಳ ಕಾಲ ಸುದೀರ್ಘ ತನಿಖೆ ನಡೆಸಿತ್ತು. ಸದ್ಯ ತನಿಖೆ ಪೂರ್ಣಗೊಳಿಸಿರುವ ತಂಡ ಹೈಕೋರ್ಟ್ಗೆ ಅಂತಿಮ ವರದಿ ಸಲ್ಲಿಸಿದೆ.