ಹುಬ್ಬಳ್ಳಿ; ಕಾಶ್ಮೀರದ ಪಹಲ್ಗಾಮ್ ನಿಂದ ಪ್ರವಾಸಿಗರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲು ವೈಮಾನಿಕ ಕಂಪನಿಗಳು ಏರ್ ಲೈನ್ ಟಿಕೆಟ್ ದರ ಹೆಚ್ಚಳ ಮಾಡದಂತೆ ಸೂಚನೆ ನೀಡಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾಹಿತಿ ನೀಡಿದ್ದಾರೆ.
Helmet Tips: ಹೆಲ್ಮೆಟ್ ಧರಿಸದಿದ್ದರೆ ದಂಡ: ಖರೀದಿಸುವಾಗ ಈ ಸಲಹೆಗಳು ಕಡ್ಡಾಯ!
ಈ ಬಗ್ಗೆ ಮಾಹಿತಿ ನೀಡಿದ ಸಚಿವರು, ಈಗಾಗಲೇ ಕಾಶ್ಮೀರದ ಪ್ರವಾಸಿ ತಾಣಗಳಿಂದ ಪ್ರವಾಸಿಗರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗುತ್ತಿದೆ. ಮೃತರ ಶವಗಳನ್ನು ತರಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಟಿಕೆಟ್ ದರ ಹೆಚ್ಚಿಸದಿರಲು ಸೂಚನೆ:
ಭಯೋತ್ಪಾದನಾ ಕೃತ್ಯ ನಡೆದ ಸ್ಥಳದಿಂದ ಹಾಗೂ ಕಾಶ್ಮೀರದ ಇತರೆ ಪ್ರವಾಸಿ ತಾಣಗಳಿಂದ ಪ್ರವಾಸಿಗರ ರಕ್ಷಣಾ ಕಾರ್ಯ ನಡೆದಿದೆ. ಪ್ರವಾಸಿಗರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲು ಹೆಚ್ಚಿನ ಟಿಕೆಟ್ ದರ ವಿಧಿಸದಿರುವಂತೆ ವೈಮಾನಿಕ ಕಂಪನಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.
ವಿಮಾನಯಾನ ಸಚಿವರೊಂದಿಗೆ ಚರ್ಚೆ:
ಏರ್ ಲೈನ್ ಟಿಕೆಟ್ ದರ ಹೆಚ್ಚಳ ಮಾಡದಂತೆ ನಾಗರೀಕ ವಿಮಾನಯಾನ ಸಚಿವರೊಂದಿಗೂ ಮಾತನಾಡಿದ್ದೇನೆ. ಏರ್ ಲೈನ್ ಟಿಕೆಟ್ ದರದ ಕುರಿತು ಗಮನಹರಿಸಲು ಡಿಜಿಸಿಎಗೂ ಸೂಚನೆ ನೀಡಿದ್ದೇನೆ ಎಂದು ಸಚಿವ ಜೋಶಿ ತಿಳಿಸಿದರು.
ಕನ್ನಡಿಗರ ಸುರಕ್ಷಿತ ಸ್ಥಳಾಂತರಕ್ಕೆ ಕ್ರಮ: ಕಾಶ್ಮೀರದ ಪ್ರವಾಸಿ ತಾಣಗಳಿಂದ ಕನ್ನಡಿಗರು ಸೇರಿದಂತೆ ಪ್ರವಾಸಿಗರ ಸುರಕ್ಷಿತ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗಿದೆ. ಗೃಹ ಸಚಿವ ಅಮಿತ್ ಶಾ ಅವರು ಅಲ್ಲಿನ ಪರಿಸ್ಥಿತಿ ಅವಲೋಕಿಸಿ ಸೂಕ್ತ ನಿರ್ಣಯ ತೆಗೆದುಕೊಳ್ಳುತ್ತಿದ್ದಾರೆ ಎಂದು ಜೋಶಿ ತಿಳಿಸಿದರು.
ಶಾಂತಿ ನೆಲೆಸಲು ಕಟ್ಟು ನಿಟ್ಟಿನ ಕ್ರಮ:
ಜಮ್ಮು-ಕಾಶ್ಮೀರದಲ್ಲಿ 2019ರಿಂದ ಇತ್ತೀಚಿನ ವರ್ಷಗಳಲ್ಲಿ ಶಾಂತಿ ನೆಲೆಸಿದ್ದನ್ನು ಸಹಿಸದೆ ಹೇಡಿಗಳು ಇಂಥ ಹೇಯ ಕೃತ್ಯವೆಸಗಿದ್ದಾರೆ. ಕೇಂದ್ರ ಸರ್ಕಾರ ಇದಕ್ಕೆ ತಕ್ಕ ಉತ್ತರ ಕೊಡಲಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಜಮ್ಮು- ಕಾಶ್ಮೀರದಲ್ಲಿ ಭಯೋತ್ಪಾದನೆ ವಿರುದ್ಧ ಕೇಂದ್ರ ಸರ್ಕಾರ ಕೈಗೊಳ್ಳುತ್ತಿದ್ದ ನಿರ್ಣಯ, ಕಾರ್ಯಗಳು ಯಶಸ್ವಿಗೊಳ್ಳುತ್ತಿರುವುದನ್ನು ಸಹಿಸಲಾಗದೆ ಭಯೋತ್ಪಾದಕರು ಹೀಗೆ ಪ್ರವಾಸಿಗರ ಮೇಲೆ ಹೇಡಿತನದ ಕೃತ್ಯ ಎಸಗಿದ್ದಾರೆ ಎಂದು ತೀವ್ರವಾಗಿ ಖಂಡಿಸಿದ ಸಚಿವ ಜೋಶಿ, ಈ ಕಣಿವೆ ರಾಜ್ಯದಲ್ಲಿ ಉಗ್ರ ಚಟುವಟಿಕೆ ಹತ್ತಿಕ್ಕಲು ಮತ್ತಷ್ಟು ಕಟ್ಟುನಿಟ್ಟಿನ ಕ್ರಮ ಜರುಗಿಸಿ ಶಾಂತಿ ಸ್ಥಾಪನೆಗೆ ತ್ವರಿತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.