ಮೈಸೂರು: ನವನಗರ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ ನಿಂದ ಮಹಿಳೆಗೆ ವಂಚನೆ ಪ್ರಕರಣ ಸಂಬಂಧ ಬ್ಯಾಂಕ್ನ ಅಧ್ಯಕ್ಷ, ಜನರಲ್ ಮ್ಯಾನೇಜರ್ ಹಾಗೂ ಮ್ಯಾನೇಜರ್ ವಿರುದ್ಧ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಕೋ.ಆಪರೇಟಿವ್ ಬ್ಯಾಂಕ್ ನಿಂದ ಅಕ್ರಮ ಹಣ ವರ್ಗಾವಣೆ: ಮಹಿಳೆಗೆ 1.41 ಕೋಟಿ ವಂಚನೆ!
ಪ್ರಕರಣದ ಹಿನ್ನೆಲೆ
ಬ್ಯಾಂಕಿನ ಸಿಸಿಎಲ್ ಖಾತೆ ಹಾಗೂ ಉಳಿತಾಯ ಖಾತೆಯಲ್ಲಿದ್ದ 1 ಕೋಟಿ 41 ಲಕ್ಷ ರೂ. ಹಣ ಬ್ಯಾಂಕಿನ ಎರಡು ಅನ್ಯ ಖಾತೆಗೆ ವರ್ಗಾವಣೆ ಮಾಡಲಾಗಿದೆ. ತಮ್ಮಅನುಮತಿ ಇಲ್ಲದೆ, ಬ್ಯಾಂಕಿಗೆ ಅಡಮಾನ ಸಾಲಕ್ಕಾಗಿ ನೀಡಿದ್ದ ಚೆಕ್ ಗಳನ್ನು ಬಳಸಿ ಹಣ ವರ್ಗಾವಣೆ ಮಾಡಲಾಗಿದೆ ಎಂದು ಸುನಿತಾ ಎಂಬುವರು ದೂರು ನೀಡಿದ್ದರು. ಬ್ಯಾಂಕಿನ ಅಧ್ಯಕ್ಷ ಕೆ.ಎನ್. ಬಸಂತ್, ಜನರಲ್ ಮ್ಯಾನೇಜರ್ ಸುರೇಶ್,ಮ್ಯಾನೇಜರ್ ಶಿವಕುಮಾರ್ ಸೇರಿಕೊಂಡು ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದು, ಬ್ಯಾಂಕಿನ ಹಿತದೃಷ್ಟಿಯಿಂದ ಹಣ ಬಳಸಿದ್ದೇವೆಂದು 4 ವರ್ಷಗಳಿಂದ ಸಬೂಬು ಹೇಳುತ್ತಾ ಬಂದಿದ್ದಾರೆ. ಈ ಪ್ರಕರಣ ಬೆಳಕಿಗೆ ಬಂದ ನಂತರ ಮ್ಯಾನೇಜರ್ ಶಿವಕುಮಾರ್ ಸೇವೆಯಿಂದ ಅಮಾನತು ಮಾಡಲಾಗಿದೆ. ಅಲ್ಲದೇ ಅಧ್ಯಕ್ಷ ಕೆ.ಎನ್. ಬಸಂತ್ ಬಳಸಿಕೊಂಡ ಹಣಕ್ಕೆ ಬಡ್ಡಿ ಸಹಿತ ವಾಪಸ್ ಕೊಡಿಸುವುದಾಗಿ ಭರವಸೆ ನೀಡಿದ್ದು, ಈವರೆಗೆ 25 ಲಕ್ಷ ರೂ. ಮಾತ್ರ ಸುನಿತಾ ಅವರ ಖಾತೆಗೆ ಜಮಾ ಮಾಡಿದ್ದಾರೆ. ಆದರೆ ಇನ್ನೂ 1 ಕೋಟಿ 16 ಲಕ್ಷ ರೂ. ಕೊಡದೆ ಸತಾಯಿಸುತ್ತಿದ್ದ ಬ್ಯಾಂಕಿನ ಅಧ್ಯಕ್ಷ ಕೆ.ಎನ್.ಬಸಂತ್ ಹಾಗೂ ಜನರಲ್ ಮ್ಯಾನೇಜರ್ ಸುರೇಶ್ ವಿರುದ್ಧ ಸುನೀತಾ ದೂರು ದಾಖಲಿಸಿದ್ದರು.