ಕನ್ನಡಿಗರ ಹೋರಾಟಕ್ಕೆ ಫಲ ಸಿಕ್ಕಿದೆ. ಗಾಯಕ ಸೋನು ನಿಗಮ್ ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಲಾಗಿದೆ. ಇನ್ಮುಂದೆ ಕನ್ನಡ ಸಿನಿಮಾಗಳಿಗೆ ಹಾಡುಗಳನ್ನು ಹಾಡಂಗಿಲ್ಲ. ಬೆಂಗಳೂರಿನಲ್ಲಿ ಮ್ಯೂಸಿಕಲ್ ನೈಟ್ ಮಾಡುವ ಆಗಿಲ್ಲ. ಒಂದು ವೇಳೆ ಸೋನು ನಿಗಮ್ ಅವರಿಂದ ಹಾಡು ಹಾಡಿಸಿದರೆ ಆ ಸಿನಿಮಾ ಬಿಡುಗಡೆ ಮಾಡಲು ಅವಕಾಶ ನೀಡುವುದಿಲ್ಲ. ಮ್ಯೂಸಿಕಲ್ ನೈಟ್ ಕಾರ್ಯಕ್ರಮಗಳನ್ನು ನಡೆಸುವುದಕ್ಕೆ ಬಿಡುವುದಿಲ್ಲ.
ಇಂದು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಸಭೆಯಲ್ಲಿ ಸೋನು ನಿಗಮ್ ಬ್ಯಾನ್ ವಿಚಾರವಾಗಿ ಸಭೆ ನಡೆಸಲಾಗಿತ್ತು. ಸಭೆ ಬಳಿಕ ವಾಣಿಜ್ಯ ಚಲನಚಿತ್ರಮಂಡಳಿ ಅಧಿಕೃತ ನಿರ್ಧಾರ ಪ್ರಕಟಿಸಿದ್ದು, ಇನ್ಮುಂದೆ ಕರ್ನಾಟಕದ ಕಾರ್ಯಕ್ರಮಗಳು, ಹಾಗೂ ಕನ್ನಡದ ಚಿತ್ರಕ್ಕೆ ಸೋನುರನ್ನು ಕೈ ಬಿಡುವ ತೀರ್ಮಾನಕ್ಕೆ ಬರಲಾಗಿದೆ.
ಫಿಲ್ಮ್ ಚೇಂಬರ್ ನಿರ್ಧಾರ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿರುವ ಸೋನು ನಿಗಮ್ಗೆ ತಾತ್ಕಾಲಿಕ ನಿರ್ಬಂಧ ಏರಿದೆ. ಸೋನು ನಿಗಮ್ ಕನ್ನಡಿಗರ ಬಳಿ ಕ್ಷಮಾಪಣೆ ಕೇಳಬೇಕು. ಅಲ್ಲಿಯವರೆಗೂ ಕನ್ನಡ ಚಲನಚಿತ್ರರಂಗದಿಂದ ಸೋನು ನಿಗಮ್ ಅವರನ್ನ ದೂರ ಇಡೋದಕ್ಕೆ ಫಿಲ್ಮ್ ಚೇಂಬರ್ ನಿರ್ಧಾರ ಮಾಡಿದೆ.
ಸಭೆಯಲ್ಲಿ ಭಾಗಿಯಾದ ಮಾರ್ಟಿನ್ ನಿರ್ಮಾಪಕ ಉದಯ್ ಮೆಹ್ತಾ ತಮ್ಮ ಸಿನಿಮಾಗಳಿಂದ ಸೋನು ನಿಗಮ್ ಬ್ಯಾನ್ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಕನ್ನಡಕ್ಕೆ ಅಪಮಾನ ಮಾಡಿದೋನು ನಮಗೆ ಬೇಡ. ಯಾರ ನಿರ್ಧಾರ ಏನಿದ್ರು, ನನ್ನ ನಿರ್ಧಾರ ಒಂದೇ. ನನಗೆ ಸೋನು ನಿಗಮ್ ಬೇಡ. ನನ್ ಸಿನಿಮಾಗಳಲ್ಲಿ ಇನ್ಮುಂದೆ ಸೋನು ನಿಗಮ್ ಹಾಡಿಸಲ್ಲ. ಇದು ನಮ್ ಭಾಷೆಗೆ ಆಗಿರೋ ಅಪಮಾನ. ನಾನು ಸ್ವಾಭಿಮಾನಿ ಕನ್ನಡಿಗ.. ಸ್ವಾಭಿಮಾನ ಇಲ್ಲದವ್ರು ಬೇಕಿದ್ರೆ ಕರೆದು ಹಾಡಿಸ್ಲಿ. ಹಾಡಿಸಿದವ್ರಿಗೆ ಅದಿಲ್ಲ ಅಂತಾ ಅರ್ಥ. ಸೋನು ವಾಯ್ಸೇ ದೊಡ್ದು ಅನ್ನೋರು. ಕರೆದು ಹಾಡಿಸ್ಕೊಳ್ಳಿ ಎಂದಿದ್ದಾರೆ.
ಬ್ಯಾನ್ಗೆ ಕಾರಣವೇನು?
ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಕನ್ನಡ ಹಾಡು ಹಾಡುವಂತೆ ಸೋನು ನಿಗಮ್ಗೆ ಕೇಳಲಾಯ್ತು. ಆಗ ಅವರು ಕನ್ನಡ, ಕನ್ನಡ ಎಂದಿದ್ದಕ್ಕೆ ಪಹಲ್ಗಾಮ್ ದಾಳಿ ನಡೆದಿದೆ ಎಂದು ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದರು.