ಬೆಂಗಳೂರು: ಬಿಬಿಎಂಪಿಯ ಅಧಿಕಾರಿ-ನೌಕರರಿಗೆ ಕ್ರೀಡಾ ಕೂಟಗಳನ್ನು ಆಯೋಜಿಸುವುದರಿಂದ ಉತ್ತಮ ಬಾಂಧವ್ಯ ಬೆಳೆಯಲಿದೆ ಎಂದು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ರವರು ತಿಳಿಸಿದರು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ “ನಾಡಪ್ರಭು ಕೆಂಪೇಗೌಡ ದಿನಾಚರಣೆ” ಅಂಗವಾಗಿ ಇಂದು ಜಯನಗರದ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ ಬಿಬಿಎಂಪಿಯ ಅಧಿಕಾರಿ/ನೌಕರರಿಗೆ 2025 ನೇ ಜೂನ್ 13 ರಿಂದ 19 ರವರೆಗೆ ಆಯೋಜಿಸಿರುವ ಕ್ರೀಡಾಕೂಟಗಳಿಗೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.
ನಾಡಪ್ರಭು ಕೆಂಪೇಗೌಡ ದಿನಾಚರಣೆಯ ಅಂಗವಾಗಿ ಬಿಬಿಎಂಪಿ ಅಧಿಕಾರಿ/ನೌಕರರುಗಳಿಗೆ ಪ್ರತಿ ವರ್ಷ ಕ್ರೀಡಾಕೂಟ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಇದು ಒಳ್ಳೆಯ ಕಾರ್ಯಕ್ರಮವಾಗಿದ್ದು, ಕ್ರೀಡೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಯಾಗುವುದರ ಜೊತೆಗೆ ಜೊತೆಗೆ ಅಧಿಕಾರಿ-ನೌಕರರಲ್ಲಿ ಬಾಂಧವ್ಯ, ಹುಮ್ಮಸ್ಸು ಮೂಡಲಿದೆ ಎಂದು ಹೇಳಿದರು.
ಕೇವಲ ಕ್ರೀಡೆಯಲ್ಲಿ ಆಸಕ್ತಿಯುಳ್ಳವರು ಮಾತ್ರ ಪಾಲ್ಗೊಳ್ಳದೆ ಕ್ರೀಡಾ ಕೂಟದ ವೇಳೆ ಎಲ್ಲಾ ಅಧಿಕಾರಿ/ನೌಕರರು ಪಾಲ್ಗೊಳ್ಳಬೇಕು. ಅದಕ್ಕಾಗಿ ಉತ್ತಮ ಯೋಜನೆಗಳನ್ನು ರೂಪಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು. ಕ್ರೀಡಾ ಕೂಟದಲ್ಲಿ ಪಾಲ್ಗೊಳ್ಳುವ ಅಧಿಕಾರಿಗಳಿಗೆ ಹೆಚ್ಚು ಉತ್ತೇಜನ ನೀಡಬೇಕು. ಅದರ ಜೊತೆಗೆ ಅವರ ಮಕ್ಕಳನ್ನು ಕೂಡಾ ಇದರಲ್ಲಿ ಪಾಲ್ಗೊಳ್ಳುವಂತೆ ಮಾಡಲು ಯೋಜನೆಗಳನ್ನು ರೂಪಿಸಲು ಅಗತ್ಯ ಕ್ರಮ ಕೈಗೊಳ್ಳಲು ತಿಳಿಸಿದರು.
ಶಿಕ್ಷಣ ವಿಭಾಗದ ವಿಶೇಷ ಆಯುಕ್ತರಾದ ಸುರಳ್ಕರ್ ವಿಕಾಸ್ ಕಿಶೋರ್ ರವರು ಮಾತನಾಡಿ, ಅಧಿಕಾರಿ-ನೌಕರರಿಗೆ ಪ್ರತಿ ವರ್ಷ ಆಯೋಜಿಸುವ ಕ್ರೀಡಾಕೂಟಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.
ಪಾಲಿಕೆಯ ಶಿಕ್ಷಣ ಹಾಗೂ ಕಲ್ಯಾಣ ವಿಭಾಗದಿಂದ ಕ್ರೀಡೆ ಸೇರಿದಂತೆ ಇನ್ನಿತರೆ ವಿಷಯಗಳಲ್ಲಿ ಆಸಕ್ತಿ ಇರುವವರಿಗಾಗಿ ವಿಶೇಷ ಯೋಜನೆಗಳನ್ನು ರೂಪಿಸಲಾಗಿದೆ. ಶಿಕ್ಷಣ ವಿಭಾಗದ ಮೂಲಕ ಶಾಲಾ ಮಕ್ಕಳಲ್ಲಿ ಕ್ರೀಡೆ, ನೃತ್ಯ ಸೇರಿದಂತೆ ಇನ್ನಿತರೆ ಚಟುವಟಿಗೆಳಲ್ಲಿ ಪರಿಣಿತಿ ಪಡೆಯುವ ಸಲುವಾಗಿ ತರಬೇತಿ ನೀಡುವ ಸಂಘ-ಸಂಸ್ಥೆಗಳ ಜೊತೆ ಮಾತನಾಡಿ ತರಬೇತಿ ನೀಡುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.
ಕಲ್ಯಾಣ ಕಾರ್ಯಕ್ರಮಗಳ ಅಡಿಯೂ ಅನೇಕ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ತರಬೇತಿ ಪಡೆದಂತಹವರಿಗೆ ಆದಾಯ ಬರುವ ನಿಟ್ಟಿನಲ್ಲಿ ಸಹಾಯ ಧನ ನೀಡುವ ಕೆಲಸ ಕೂಡಾ ಮಾಡಲಾಗುತ್ತಿದೆ ಎಂದರು. ಆಡಳಿತ ವಿಭಾಗದ ವಿಶೇಷ ಆಯುಕ್ತರಾದ ನವೀನ್ ಕುಮಾರ್ ರಾಜು ರವರು ಮಾತನಾಡಿ, ಕ್ರಿಡಾ ಕೂಟದಲ್ಲಿ ಪಾಲ್ಗೊಂಡು ವಿಜೇತರಾದ ಅಧಿಕಾರಿ-ನೌಕರರಿಗೆ ಕೆಂಪೇಗೌಡ ದಿನಾಚರಣೆಯ ದಿನದಂದು ಪ್ರಶಸ್ತಿ ನೀಡಿ ಗೌರವಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಈ ವೇಳೆ ದಕ್ಷಿಣ ವಲಯ ಆಯುಕ್ತರಾದ ದಿಗ್ವಿಜಯ್ ಬೋಡ್ಕೆ, ಸಹಾಯಕ ಆಯುಕ್ತರಾದ ದಿಲೀಪ್, ಉಪ ನಿರ್ದೇಶಕರಾದ ಲೋಕೇಶ್, ಹಿರಿಯ ಸಹಾಯಕ ನಿರ್ದೇಶಕರಾದ ಮುನಿಶಾಮಪ್ಪ, ಬಿಬಿಎಂಪಿ ಅಧಿಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಅಮೃತ್ ರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.