ಬಾಗಲಕೋಟೆ ; ಖಾಸಗಿ ವ್ಯಕ್ತಿಯೋರ್ವ ಜಮೀನಿನಲ್ಲಿ ನಿರ್ಮಿಸಿದ್ದ ರಸ್ತೆ ಅಗೆದಿದ್ದು, ಗ್ರಾಮದ ಇತರರ ಜಮೀನುಗಳಿಗೆ ಹೋಗಲು ದಾರಿಯೇ ಇಲ್ಲದಂತಾಗಿದೆ. ಇದರಿಂದಾಗಿ ಆಕ್ರೋಶಗೊಂಡಿರುವ ಗ್ರಾಮಸ್ಥರು ಇಂದು ಬಾಗಲಕೋಟೆ ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆ ಹಾಕಿ, ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.
ಏನಿದು ಘಟನೆ..?
ಬಾಗಲಕೋಟೆಯ ಜಿಲ್ಲೆಯ ಮುಧೋಳ ತಾಲೂಕಿನ ಬಿದರಿ ಗ್ರಾಮದ ರೈತರಿಗೆ ತಮ್ಮ ಜಮೀನಿಗೆ ಹೋಗಲು ರಸ್ತೆಯೇ ಇಲ್ಲದಂತಾಗಿದೆ. ಅನೇಕ ವರ್ಷಗಳ ಹಿಂದೇಯ ಜಮೀನಿನಲ್ಲಿ ರಸ್ತೆ ನಿರ್ಮಿಸಲಾಗಿದ್ದು, ಅದೇ ರಸ್ತೆಯಲ್ಲಿ ಇತರರು ಸಂಚರಿಸುತ್ತಾ ಇದ್ದಾರೆ. ಕಳೆದ 2-3 ವರ್ಷಗಳ ಹಿಂದೆ ಸುಮಾರು 1 ಕೋಟಿ ರೂ. ಅಧಿಕ ವೆಚ್ಚದಲ್ಲಿ ಡಾಂಬರೀಕರಣ ಕಾಮಕಾರಿ ನಡೆದಿದೆ. ಆದರೆ ಇದೀಗ ಜಮೀನು ಖರೀದಿಸಿರುವ ಶಿವಲಿಂಗ ಪರಮಾನಂದ ಲಿಂಗನೂರ ಎಂಬಾತ, ಇದ್ದಕ್ಕಿದ್ದಂತೆ ಡಾಂಬರು ರಸ್ತೆಯನ್ನು ಅಗೆದಿದ್ದು, ಮುಂದಿನ ಜಮೀನುಗಳಿಗೆ ಹೋಗುವ ರಸ್ತೆ ಸಂಪರ್ಕ ಸಂಪೂರ್ಣ ಕಟ್ ಆಗಿದೆ.
ಸುಮಾರು 2 ಕಿಲೋ ಮೀಟರ್ ರಸ್ತೆಯನ್ನು ಅಗೆದಿದ್ದು, 400 ಎಕರೆ ಜಮೀನುಗಳಿಗೆ ಸಂಪರ್ಕಿಸುವ ರಸ್ತೆ ಕಟ್ ಆಗಿದ್ದು, ಅಕ್ಕಪಕ್ಕದ ರೈತ ಕುಟುಂಬಗಳು ಪರಿಸ್ಥಿತಿ ಅತಂತ್ರವಾಗಿದೆ. ಹೀಗಾಗಿ ತಮಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ, 40-50 ಕುಟುಂಬಗಳು ಒಟ್ಟಿಗೆ ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆ ಹಾಕಿದ್ದು, ತಮ್ಮ ಸಮಸ್ಯೆ ಬಗೆಹರಿಸುವಂತೆ ಪಟ್ಟು ಹಿಡಿದಿದ್ದರು. ಬಳಿಕ ಅಧಿಕಾರಿಗಳು ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ ನಡೆಸಿದರು.