ಕೊಡಗು :-ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಬಿಟ್ಟು ಬಿಡದೆ ಮಳೆ ಸುರಿದಿದ್ದು ಎಲ್ಲೆಡೆ ನದಿ ತೊರೆಗಳು ತುಂಬಿ ಪ್ರವಾಹದ ರೂಪ ತಳೆದು ಹರಿಯುತ್ತಿವೆ. ಮಡಿಕೇರಿ ತಾಲ್ಲೂಕಿನ ನಾಪೋಕ್ಲು ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ನಾಪೋಕ್ಲು ಚೆರಿಯಪರಂಬು ರಸ್ತೆ ಮೇಲೆ ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು ರಸ್ತೆ ಸಂಪರ್ಕ ಬಂದ್ ಆಗಿದೆ.
ಆದರೆ ನಿನ್ನೆಯಷ್ಟೇ ಮದುವೆಯಾಗಿದ್ದ ನವ ವಧುವರರನ್ನು ಕರೆದೊಯ್ಯಲು ಬೇರೆ ಮಾರ್ಗವೇ ಇಲ್ಲದೆ ಉಕ್ಕಿ ಹರಿಯುತ್ತಿದ್ದ ಕಾವೇರಿ ನದಿ ಪ್ರವಾಹದಲ್ಲಿ ತೆಪ್ಪದಲ್ಲಿ ಇಬ್ಬರನ್ನು ನಿಲ್ಲಿಸಿಕೊಂಡು ಕರೆದೊಯ್ಯಲಾಗಿದೆ. ಚೆರಿಯಪರಂಬು ಗ್ರಾಮದವರೆಗೆ ಬಸ್ಸಿನಲ್ಲಿ ಬಂದ ಬಂಧು ಬಾಂಧವರೆಲ್ಲಾ ಅಲ್ಲಿಂದ ಬಸ್ಸಿನಲ್ಲಿ ಮುಂದೆ ಹೋಗಲಾರದೆ ಬಸ್ಸಿನಲ್ಲಿ ಇಳಿದು ನಂತರ ತೆಪ್ಪದ ಮೂಲಕ ತೆರಳಿದ್ದಾರೆ.
ಎರಡು ದಿನಗಳ ಹಿಂದೆ ಚೆರಿಯಪರುಂಬಿನ ಫಿರೋಜ್ ಎಂಬಾತನೊಂದಿಗೆ ರಂಸೀನಾ ಎಂಬ ಯುವತಿಯ ವಿವಾಹವಾಗಿತ್ತು. ಇಂದು ಚೆರಿಯಪರಂಬುವಿನಿಂದ ಮದುಮಗಳನ್ನು ತವರು ಮನೆಗೆ ಕರೆದೊಯ್ಯುವ ಸಂದರ್ಭ ಕಾವೇರಿ ನದಿ ಉಕ್ಕಿ ಹರಿದಿರುವುದರಿಂದ ಅನಿವಾರ್ಯವಾಗಿ ತೆಪ್ಪದ ಮೇಲೆ ವಧುವರರನ್ನು ಕರೆದೊಯ್ಯಲಾಗಿದೆ. ರಭಸವಾಗಿ ಹರಿಯುತ್ತಿದ್ದ ಅಪಾಯದ ಪ್ರವಾಹದ ನೀರಿನಲ್ಲೇ ಕರೆದೊಯ್ದಿದ್ದಾರೆ. ಮೂರು ದಿನದ ಹಿಂದೆ ಇಬ್ಬರ ವಿವಾಹ ನಡೆದಿದ್ದು, ಇಂದು ತವರು ಮನೆಗೆ ಕರೆದೊಯ್ಯುವಾಗ ಇಂತಹ ಪರಿಸ್ಥಿತಿಯನ್ನು ಎದುರಿಸಬೇಕಾಯಿತು.