ಉತ್ತರ ಪ್ರದೇಶ: ಆಹಾರಕ್ರಮ ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನವಾಗಿರುತ್ತದೆ. ಒಬ್ಬೊಬ್ಬರು ಒಂದೊಂದು ರೀತಿಯ ಆಹಾರಕ್ರಮವನ್ನು ಅನುಸರಿಸುತ್ತಾರೆ. ಕೆಲವೊಬ್ಬರು ಸಸ್ಯಾಹಾರಿಗಳು, ಇನ್ನು ಕೆಲವೊಬ್ಬರು ಮಾಂಸಾಹಾರಿಗಳು. ಮತ್ತೆ ಕೆಲವರು ಮೊಟ್ಟೆಯನ್ನು ಮಾತ್ರ ಸೇವಿಸುತ್ತಾರೆ. ನಿರ್ಧಿಷ್ಟ ಆಹಾರವನ್ನು ಇಷ್ಟಪಡುವವರು ಅಂಥಾ ಫುಡ್ನ್ನು ಮಾತ್ರ ಆರ್ಡರ್ ಮಾಡುತ್ತಾರೆ. ಆದ್ರೆ ಆನ್ಲೈನ್ನಲ್ಲಿ ವೆಜ್ ಬಿರಿಯಾನಿ ಆರ್ಡರ್ ಮಾಡಿದ್ದಕ್ಕೆ ನಾನ್ ವೆಜ್ ಬಿರಿಯಾನಿ ಬಂದಿರುವ ಘಟನೆ ಉತ್ತರ ಪ್ರದೇಶ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ.
ಗ್ರೇಟರ್ ನೋಯ್ಡಾ ವೆಸ್ಟ್ನ ಸೆಕ್ಟರ್ 1ರ ಅರಿಹಂತ್ ಆರ್ಡೆನ್ ನಿವಾಸಿ ಛಾಯಾ ಶರ್ಮಾ ಎಂಬವರು ಆನ್ಲೈನ್ನಲ್ಲಿ ವೆಜ್ ಬಿರಿಯಾನಿಯನ್ನು ಆರ್ಡರ್ ಮಾಡಿದ್ದರು. ಆದರೆ ಅವರ ಆರ್ಡರ್ನಲ್ಲಿ ನಾನ್ ವೆಜ್ ಬಿರಿಯಾನಿ ಬಂದಿದ್ದು, ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ಯುವತಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡು ತನಗಾಗಿರುವ ಅನುಭವವನ್ನು ತಿಳಿಸಿದ್ದಾರೆ.
ನಾನು ಶುದ್ಧ ಸಸ್ಯಾಹಾರಿ ಹಾಗೂ ಇದು ನವರಾತ್ರಿಯ ಸಮಯವಾಗಿದ್ದರಿಂದ ನಾನು ವೆಜ್ ಬಿರಿಯಾನಿ ಆರ್ಡರ್ ಮಾಡಿದೆ. ಆರ್ಡರ್ ಬಂದ ತಕ್ಷಣ ನಾನು ಸ್ವಲ್ಪ ಬಿರಿಯಾನಿಯನ್ನು ತಿಂದೆ. ಬಳಿಕ ತಿನ್ನುವಾಗ ರುಚಿಯಲ್ಲಿ ಏನೋ ಬದಲಾದ ಹಾಗೇ ಅನಿಸಿತು. ಬಿರಿಯಾನಿಯ ಒಳಗೆ ಕೋಳಿ ಮಾಂಸ ಹಾಗೂ ಕೆಲವು ತುಂಡುಗಳಿರುವುದು ಕಾಣಿಸಿದ್ದು, ತಕ್ಷಣವೇ ನಾನು ಹೊರಗೆಸೆದೆ. ಇಲ್ಲಿಯವರೆಗೆ ನಾನು ಮಾಂಸಾಹಾರ ಸೇವಿಸಿಲ್ಲ. ಇದು ನಿಜವಾಗಿಯೂ ನನಗೆ ಕೆಟ್ಟ ಅನುಭವವೆಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಈ ಕುರಿತು ಸೆಂಟ್ರಲ್ ನೋಯ್ಡಾ ಪೊಲೀಸ್ ಉಪ ಆಯುಕ್ತ ಶಕ್ತಿ ಅವಸ್ಥಿ ಮಾತನಾಡಿ, ಯುವತಿ ಆರ್ಡರ್ನಲ್ಲಿ ನಾನ್ ವೆಜ್ ಬಿರಿಯಾನಿ ಬಂದಿರುವುದನ್ನು ನೋಡಿದ ಬಳಿಕ ತಕ್ಷಣ ರೆಸ್ಟೋರೆಂಟ್ಗೆ ಕರೆ ಮಾಡಲು ಪ್ರಯತ್ನಿಸಿದ್ದು, ಆದರೆ ಯಾರೂ ಉತ್ತರಿಸಿಲ್ಲ. ರೆಸ್ಟೋರೆಂಟ್ ಮುಚ್ಚಿರಬೇಕೆಂದು ತಿಳಿದು ಸುಮ್ಮನಾಗುತ್ತಾರೆ. ಬಳಿಕ ಅವರು ವಿಡಿಯೋ ಹಂಚಿಕೊಂಡಿದ್ದು, ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಯುವತಿ ರೆಸ್ಟೋರೆಂಟ್ ಮಾಲೀಕನ ವಿರುದ್ಧ ದೂರು ದಾಖಲಿಸಿದ್ದು, ಇಕೋವಿಲೇಜ್-1ರ ನಿವಾಸಿ ರಾಹುಲ್ ರಾಜವಂಶಿ ಎಂಬಾತನನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ರೆಸ್ಟೋರೆಂಟ್ ಮಾಲೀಕನ ವಿರುದ್ಧ ಬಿಎನ್ಎಸ್ ಸೆಕ್ಷನ್ 271 ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಜೊತೆಗೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಅಧಿಕಾರಿಗಳು ರೆಸ್ಟೋರೆಂಟ್ಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಮಾದರಿಗಳನ್ನು ಸಂಗ್ರಹಿಸಿದ್ದಾರೆ.