ಇಡೀ ದೇಶವೇ ನಿನ್ನೆ ನಡೆದ ವಿಮಾನ ದುರಂತಕ್ಕೆ ಶೋಕ ಮಿಡಿಯುತ್ತಿದೆ. ಗುಜರಾತ್ನ ಅಹಮದಾಬಾದ್ನಿಂದ ಲಂಡನ್ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಪತನಗೊಂಡು 241 ಮಂದಿ ಸಾವನ್ನಪ್ಪಿದ್ದಾರೆ. ಓರ್ವ ಮಾತ್ರ ಬದುಕುಳಿದಿದ್ದು, ಸತ್ತವರ ಒಂದೊಂದು ಕಥೆಯು ಮನ ಮಿಡಿಯುವಂತಿದೆ. ಸದ್ಯ, ಘಟನೆಯಲ್ಲಿ ಮೃತಪಟ್ಟಿರುವ ಗಗನಸಖಿಯೊಬ್ಬರ ಕೊನೆಯ ಕ್ಷಣದ ವಿಡಿಯೋ ವೈರಲ್ ಆಗಿದೆ.
ಏರ್ ಇಂಡಿಯಾ ವಿಮಾನ AI 171 ವಿಮಾನ ಹೊರಡುವ ಕೆಲವೇ ಕ್ಷಣಗಳ ಮೊದಲು, ಮಣಿಪುರದ ತೌಬಲ್ ಜಿಲ್ಲೆಯ ನಾಂಗ್ಥೋಯ್ ಶರ್ಮಾ ಅವರ ಈ ಕೊನೆಯ ಸಂದೇಶವು ವೈರಲ್ ಆಗಿದೆ. ಪ್ರಯಾಣಿಕರು ಹತ್ತುವ ಮುನ್ನ ಆಕೆ ಸೆರೆ ಹಿಡಿದ ಖಾಲಿ ವಿಮಾನದ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಜೀವನವು ನಿಜವಾಗಿಯೂ ಅನಿರೀಕ್ಷಿತವಾಗಿದೆ, ಮತ್ತು ಈ ದುರಂತವು ಸಮಯ ಎಷ್ಟು ಕ್ಷಣಿಕ ಮತ್ತು ಅನಿಶ್ಚಿತವಾಗಿರಬಹುದು ಎಂಬುದನ್ನು ನಮಗೆ ನೆನಪಿಸುತ್ತದೆ ಎಂಬ ನೋವಿನ ಮಾತು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಹಮದಾಬಾದ್ನಲ್ಲಿ ಅಪಘಾತಕ್ಕೀಡಾದ ದುರದೃಷ್ಟಕರ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಣಿಪುರದ ಗಗನಸಖಿ ನಾಂಗ್ಥೋಯ್ ಶರ್ಮಾ ಅವರ ಅಕಾಲಿಕ ನಷ್ಟಕ್ಕೆ ಇಡೀ ಕುಟುಂಬ ಕಣ್ಣೀರು ಇಡುತ್ತಿದೆ.
ನಾಂಗ್ಥೋಯ್ ಶರ್ಮಾ ಅವರು ಕೇವಲ 19 ವರ್ಷದವಳಿದ್ದಾಗ ಏರ್ ಇಂಡಿಯಾದಲ್ಲಿ ಗಗನಸಖಿಯಾಗಿ ಸೇರಿದ್ದರು. ವಿಮಾನ ಅಪಘಾತದಲ್ಲಿ ಮೃತಪಟ್ಟ ಅವರ ಮಣಿಪುರಿ ಕುಟುಂಬದಲ್ಲಿ ದುಃಖದ ಛಾಯೆ ಆವರಿಸಿದೆ. ನಾಂಗ್ಥೋಯ್ ಶರ್ಮಾ ಅವರಿಗೆ ಸದ್ಯ 21 ವರ್ಷ ವಯಸ್ಸಾಗಿತ್ತು.