ಸ್ಯಾಂಡಲ್ವುಡ್ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಿರುವ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಪಾಠ ಹೇಳಿ ಕೊಡುವ ಗುರುವಾಗಿ ಕಾಣಿಸಿಕೊಳ್ಳುತ್ತಿರುವ ‘A for ಆನಂದ್’ ಚಿತ್ರದ ಮುಹೂರ್ತ ಇಂದು ಅದ್ಧೂರಿಯಾಗಿ ನೆರವೇರಿದೆ. ಶುಭ ಶುಕ್ರವಾರವಾದ ಇಂದು ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಮುಹೂರ್ತ ನಡೆದಿದೆ. ನಿರ್ಮಾಪಕಿ ಗೀತಾ ಶಿವರಾಜ್ ಕುಮಾರ್ ಕ್ಲ್ಯಾಪ್ ಮಾಡಿದರು. ಮಗುವಿನಿಂದ ಕ್ಯಾಮೆರಾಗೆ ಚಾಲನೆ ನೀಡಿಸಿದರು. ಈ ಸಂದರ್ಭದಲ್ಲಿ ಇಡೀ ಚಿತ್ರತಂಡ ಹಾಜರಿತ್ತು.
ಮುಹೂರ್ತದ ಬಳಿಕ ಸುದ್ದಿಗೋಷ್ಠಿ ಏರ್ಪಡಿಸಲಾಗಿತ್ತು. ಈ ಸುದ್ದಿಗೋಷ್ಠಿಯ ಪ್ರಮುಖ ಆಕರ್ಷಣೆ ಮಕ್ಕಳು. ‘A for ಆನಂದ್’ ಮಕ್ಕಳ ಸಿನಿಮಾವಾಗಿರುವುದರಿಂದ ವಿಶೇಷವಾಗಿ ಸುದ್ದಿಗೋಷ್ಠಿ ನಡೆಸಲಾಯಿತು. ವೇದಿಕೆ ಅತಿಥಿಗಳನ್ನು ಮಕ್ಕಳು ಸ್ವಾಗತಿಸಿದರು. ಇದೇ ವೇಳೆ ಹಾಡು ಹೇಳಿ ನೆರೆದಿದ್ದವರನ್ನು ಮಕ್ಕಳು ರಂಜಿಸಿದರು.
ಬಳಿಕ ಮಾತನಾಡಿದ ಶಿವಣ್ಣ, ಶ್ರೀನಿ ಜೊತೆ ಎರಡನೇ ಸಿನಿಮಾ. ಅವರು ನನಗೆ ಹದಿನೈದು ವರ್ಷದಿಂದ ಸ್ನೇಹಿತರು. ಶಿವ ಸಿನಿಮಾಗಾಗಿ ಫೋಟೋಶೂಟ್ ಮಾಡಿದ್ದರು. ಅಂದಿನಿಂದ ಪರಿಚಯ. ಅಂದಿನಿಂದ ಒಂದು ಕಥೆ ಇದೆ ಎಂದು ಹೇಳುತ್ತಿದ್ದರು. ತುಂಬಾ ಬಾರಿ ಮೀಟ್ ಮಾಡಿದಾಗ ಏನೋ ಮಿಸ್ ಆಗುತಿತ್ತು. ಈ ಸಿನಿಮಾಗೆ ಅಟಾಚ್ ಮೆಂಟ್ ಮುಖ್ಯ. ಮಕ್ಕಳನ್ನು ಯಾವ ರೀತಿ ಓದಿಸಬೇಕು, ಅವರನ್ನು ದಾರಿಗೆ ತರಬೇಕು ಅನ್ನೋದೇ ‘A for ಆನಂದ್’ ಕಥೆ ತಿರುಳು. ಸ್ಕ್ರೀನ್ ಪ್ಲೇಯನ್ನು ಶ್ರೀನಿ ತುಂಬಾ ಚೆನ್ನಾಗಿ ಮಾಡಿದ್ದಾರೆ. ಅಕ್ಟೋಬರ್ ತಿಂಗಳಾತ್ಯಂಕ್ಕೆ ಶೂಟಿಂಗ್ ಹೊರಡುತ್ತೇವೆ. ಈ ಚಿತ್ರದಲ್ಲಿ ಆರು ಹಾಡುಗಳು ಬರುತ್ತವೆ. ನನ್ನ ಚಿತ್ರದಲ್ಲಿ ತುಂಬಾ ದಿನಗಳ ಬಳಿಕ ಇಷ್ಟು ಹಾಡು ಇರುತ್ತಿವೆ. ಆನಂದ್ ನಮ್ಮ ತಾಯಿ ಹೆಸರಿಟ್ಟಿದ್ದು, ಈ ಆನಂದ್ ಮಕ್ಕಳ ಮುಖದಲ್ಲಿ ಆನಂದ ತರುತ್ತಾನೆ ಎಂದರು.
ನಿರ್ಮಾಪಕಿ ಗೀತಾ ಶಿವರಾಜ್ಕುಮಾರ್, ತುಂಬಾ ದಿನದಿಂದ ಮಕ್ಕಳ ಸಿನಿಮಾ ಮಾಡಬೇಕು ಎಂಬ ಆಸೆ ಇತ್ತು. ಮಕ್ಕಳಿಗೆ ಶಿಕ್ಷಣ ಮುಖ್ಯ. ಆದರೆ ಇಂದು ಅವರಿಗೆ ಸಾಕಷ್ಟು ಒತ್ತಡ ಹೇರಲಾಗುತ್ತಿದೆ. ಒತ್ತಡ ಇಲ್ಲದೇ ಮಕ್ಕಳಿಗೆ ಯಾವ ರೀತಿ ಪಾಠ ಹೇಳಿಕೊಡಬಹುದು ಅನ್ನೋದನ್ನು ಈ ಸಿನಿಮಾ ಮೂಲಕ ಹೇಳುತ್ತೇವೆ. ಈ ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ನಿರ್ದೇಶನ ಮಾಡುತ್ತಾರೆ. ಎ ಫಾರ್ ಆನಂದ್ ಚಿತ್ರದ ಟೈಟಲ್ ತುಂಬಾ ಇಷ್ಟವಾಯ್ತು. ಈ ಚಿತ್ರದಿಂದ ತಂದೆ ತಾಯಿ ಮಕ್ಕಳ ಹೇಗೆ ಓದಿಸಬೇಕು ಅಂತಾ ತಿಳಿದುಕೊಳ್ಳುತ್ತಾರೆ. ಜೊತೆಗೆ ಈ ಸಿನಿಮಾದಿಂದ ಜನ ಥಿಯೇಟರ್ಗೆ ಬರುವ ರೀತಿ ಆಗುತ್ತದೆ ಎಂಬ ನಂಬಿಕೆ ಇದೆ ಎಂದರು.
ನಿರ್ದೇಶಕ ಶ್ರೀನಿ ಮಾತನಾಡಿ, ಘೋಸ್ಟ್ ಆಕ್ಷನ್ ಥ್ರಿಲ್ಲರ್ ಸಿನಿಮಾ, ಇದು ಕಂಪ್ಲೀಟ್ ಡಿಫರೆಂಟ್ ಜಾನರ್ ಚಿತ್ರ. ‘A for ಆನಂದ್’ ಫ್ಯಾಮಿಲಿ ಎಂಟರ್ ಟೈನರ್ ಜೊತೆಗೆ ಮಕ್ಕಳಿಗೂ ಕನೆಕ್ಟ್ ಆಗುವ ಸಿನಿಮಾ. ಇದು ಚಾಲೆಂಜ್ ಕೆಲಸವೇ. ಅಕ್ಟೋಬರ್ ಸಮಯದಲ್ಲಿ ಶಿವಮೊಗ್ಗದ ಸಾಗರ ಆ ಕಡೆ ಚಿತ್ರೀಕರಿಸಲು ಯೋಜನೆ ಹಾಕಿಕೊಂಡಿದ್ದೇವೆ ಎಂದು ತಿಳಿಸಿದರು.
ಈ ಹಿಂದೆ ಶಿವರಾಜ್ ಕುಮಾರ್ ಅವರಿಗಾಗಿ ‘ಘೋಸ್ಟ್’ ಹೆಸರಿನ ಭರ್ಜರಿ ಆಕ್ಷನ್ ಥ್ರಿಲ್ಲರ್ ಸಿನಿಮಾ ನಿರ್ದೇಶನ ಮಾಡಿದ್ದ ಶ್ರೀನಿ, ಈಗ ಶಿವಣ್ಣನ ಹೊಸ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ‘ಎ ಫಾರ್ ಆನಂದ್’ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಒಬ್ಬ ಶಿಕ್ಷಕನ ಪಾತ್ರ ನಿರ್ವಹಿಸಲಿದ್ದಾರೆ.
́ಎ ಫಾರ್ ಆನಂದ್’ ಸಿನಿಮಾವನ್ನು ಶಿವಣ್ಣನವರ ಹೋಮ್ ಬ್ಯಾನರ್ ಆಗಿರುವ ಗೀತಾ ಪಿಕ್ಚರ್ಸ್ ವತಿಯಿಂದಲೇ ನಿರ್ಮಾಣ ಮಾಡಲಾಗುತ್ತಿದೆ. ವೇದ, ಭೈರತಿ ರಣಗಲ್ ಅನ್ನು ಇದೇ ನಿರ್ಮಾಣ ಸಂಸ್ಥೆಯಿಂದ ನಿರ್ಮಾಣ ಮಾಡಲಾಗಿತ್ತು, ಗೀತಾ ಪಿಕ್ಚರ್ಸ್ಗೆ ಇದು ಮೂರನೇ ಸಿನಿಮಾ. ಶಿವರಾಜ್ ಕುಮಾರ್ ಹಾಗೂ ಶ್ರೀನಿ ಕಾಂಬಿನೇಷನ್ನ ‘ಘೋಸ್ಟ್’ ಸಿನಿಮಾಕ್ಕೆ ಕೆಲಸ ಮಾಡಿದ್ದ ಚಿತ್ರ ಹಾಗೂ ತಾಂತ್ರಿಕ ತಂಡವೇ ‘ಎ ಫಾರ್ ಆನಂದ್’ ಸಿನಿಮಾಕ್ಕೂ ಕೆಲಸ ಮಾಡಲಿದೆ. ಮಹೇನ್ ಸಿಂಹ ಕ್ಯಾಮೆರಾ, ದೀಪು ಎಸ್ ಕುಮಾರ್ ಸಂಕಲನ, ಪ್ರಸನ್ನ ವಿಎಂ ಸಂಭಾಷಣೆ ಬರೆದಿದ್ದಾರೆ. ವಾಸುಕಿ ವೈಭವ್ ಸಂಗೀತ ಒದಗಿಸಲಿದ್ದಾರೆ. ಎ ಫಾರ್ ಆನಂದ್ ಪಕ್ಕ ಫ್ಯಾಮಿಲಿ ಎಂಟರ್ ಟೈನರ್ ಜೊತೆಗೆ ಎಮೋಷನಲ್ ಸಿನಿಮಾ. ಪ್ರೇಕ್ಷಕರನ್ನಿ ಥಿಯೇಟರ್ಗೆ ಕರೆತರುವ ಒಂದೊಳ್ಳೆ ಚಿತ್ರವಾಗಲಿದೆ ಅನ್ನೋದು ತಂಡದ ಅಭಿಪ್ರಾಯ.