ಭಾನುವಾರ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ ಭರ್ಜರಿಯಾಗಿ ಗೆದ್ದು ಬೀಗಿದೆ. ಈ ಗೆಲುವಿಗೆ ಮುಖ್ಯ ರುವಾರಿ ಪಡಿಕ್ಕಲ್ ಹಾಗೂ ಕೊಹ್ಲಿ ಎಂದರೆ ತಪ್ಪಾಗೋದಿಲ್ಲ. ಆದರೆ ಎಲ್ಲವೂ ಸರಿ ಕೊಹ್ಲಿ ಕೊಂಚ ಸೆಲೆಬ್ರೇಷನ್ ಮಿತಿ ಮೀರಿದ್ದು ಯಾಕೆ? ಜಗಳ ಆದರೂ ಶ್ರೇಯಸ್ ಆಡಿದ ಮಾತುಗಳು ಅಭಿಮಾನಿಗಳ ಮನಮುಟ್ಟಿದೆ ಹಾಗೂ ಶ್ರೇಯಸ್ ಅವರ ಗುಣಕ್ಕೆ ಫಿದಾ ಆಗಿದ್ದಾರೆ.
20 ವರ್ಷದಿಂದ ಇಲ್ಲಿದ್ದೀನಿ, ನಿನ್ನ ಕೋಚ್ ಕೂಡ ಗೊತ್ತು ಹೋಗೋ: ಮಿತಿ ಮೀರಿತು ಕಿರಿಕ್ ಕೊಹ್ಲಿ ವರ್ತನೆ!
ಹೌದು ಗೆಲುವಿನ ಬೆನ್ನಲ್ಲೇ ವಿರಾಟ್ ಕೊಹ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಗುರಿಯಾಗಿಸಿ ಸಂಭ್ರಮಿಸಿದ್ದರು. ಅತಿರೇಕಕ್ಕೆ ಕಾರಣವಾಗಿದ್ದ ಈ ಸಂಭ್ರಮಾಚರಣೆಯಿಂದ ಅಯ್ಯರ್ ಕೂಡ ಕೋಪಗೊಂಡಿದ್ದರು. ಇದಾಗ್ಯೂ ಪಂದ್ಯದ ಬಳಿಕ ಪಂಜಾಬ್ ಕಿಂಗ್ಸ್ ತಂಡದ ನಾಯಕ ಸಣ್ಣತನ ಮೆರೆದಿಲ್ಲ ಎಂಬುದು ವಿಶೇಷ.
ಈ ಸೋಲಿನ ಬಳಿಕ ಮಾತನಾಡಿದ ಶ್ರೇಯಸ್ ಅಯ್ಯರ್, ನಮ್ಮ ತಂಡದ ಹೆಚ್ಚಿನ ಬ್ಯಾಟ್ಸ್ಮನ್ಗಳು ಮೊದಲ ಎಸೆತದಿಂದಲೇ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡುತ್ತಿದ್ದಾರೆ. ಆದರೆ ನಾವು ಮೊದಲು ಬ್ಯಾಟ್ ಮಾಡುವಾಗ ವಿಕೆಟ್ ಅನ್ನು ನಿರ್ಣಯಿಸಲು ಕಷ್ಟಪಡುತ್ತಿದ್ದೇವೆ. ಹೀಗಾಗಿಯೇ ನಾವು ಪಡೆಯುತ್ತಿರುವ ಆರಂಭವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಉತ್ತಮ ಆರಂಭ ಪಡೆದರೂ ಆ ಬಳಿಕ ಸತತ ವಿಕೆಟ್ ಕಳೆದುಕೊಳ್ಳುತ್ತಿರುವುದರಿಂದ ಬೃಹತ್ ಮೊತ್ತಗಳಿಸಲು ಕಷ್ಟಪಡುತ್ತಿದ್ದೇವೆ. ಇದಾಗ್ಯೂ ಈ ಪಂದ್ಯದಲ್ಲೂ ಸಕಾರಾತ್ಮಕ ಅಂಶ ಎಂದರೆರೆ, ನಾವು ಉತ್ತಮ ಆರಂಭ ಪಡೆದಿದ್ದೇವೆ. ಬೌಲರ್ಗಳು ಕೂಡ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ ಎಂದರು.
ನಾವು ವಿಕೆಟ್ಗೆ ಹೊಂದಿಕೊಳ್ಳುವ ಬಗ್ಗೆ ಮಾತನಾಡುತ್ತಲೇ ಇರುತ್ತೇವೆ. ಚೆಂಡು ಹಳೆಯದಾದ ನಂತರ ಅದು ವಿಕೆಟ್ನಿಂದ (ಪಿಚ್) ದೂರ ಹೋಗುವುದಿಲ್ಲ. ಅವರಿಬ್ಬರೂ (ಓಪನರ್ಗಳು) ಉತ್ತಮ ಸ್ಟ್ರೋಕ್ಮೇಕರ್ಗಳು. ನೀವು ಅವರಿಗೆ ನಿಧಾನವಾಗಿ ಆಡಲು ಹೇಳಿದರೆ ಅದನ್ನು ಅರ್ಥಮಾಡಿಕೊಳ್ಳುವುದು ಅವರಿಗೆ ಕಷ್ಟ. ಹೀಗಾಗಿಯೇ ಮಧ್ಯಮ ಕ್ರಮಾಂಕದ ಬ್ಯಾಟರ್ಗಳು ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು ಎಂದರು.
ಪಂದ್ಯದ ಬಳಿಕ ನಮಗೆ ಆರು ದಿನಗಳ ರಜೆ ಇದೆ. ನಾವು ಮತ್ತೆ ತರಬೇತಿಗೆ ಮರಳುವುದು ಮುಖ್ಯ, ನಾವು ರಿಫ್ರೆಶ್ ಮಾಡಿಕೊಳ್ಳುವುಸು ಸಹ ಇಲ್ಲಿ ಮುಖ್ಯವಾಗುತ್ತದೆ. ಮುಂದಿನ ಪಂದ್ಯಕ್ಕೂ ಮೊದಲು ನಾವು ಸಾಧ್ಯವಾದಷ್ಟು ಉತ್ತಮ ಸ್ಥಿತಿಯಲ್ಲಿದ್ದೇವೆ ಎಂದು ಖಚಿತಪಡಿಸಿಕೊಳ್ಳಬೇಕು. ಹೀಗಾಗಿ ಬಿಡುವಿನ ಸಮಯದಲ್ಲಿ ನಾವು ಮುಂದಿನ ಪಂದ್ಯಕ್ಕಾಗಿ ಪ್ಲ್ಯಾನ್ ರೂಪಿಸುತ್ತೇವೆ ಎಂದು ಅಯ್ಯರ್ ಹೇಳಿದ್ದಾರೆ.
ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವಿಗೆ ವಿರಾಟ್ ಕೊಹ್ಲಿ ಕಾರಣ. ಅವರು ಉತ್ತಮ ಇನಿಂಗ್ಸ್ ಆಡಿದರು. ವಿರಾಟ್ ಕೊಹ್ಲಿ ಮತ್ತು ಅವರ ತಂಡದವರಿಗೆ ಅಭಿನಂದಿಸುತ್ತೇನೆ. ಅವರು ಚೆನ್ನಾಗಿ ಆಡಿದರು ಎಂದು ಶ್ರೇಯಸ್ ಅಯ್ಯರ್ ಮೆಚ್ಚುಗೆಗಳನ್ನು ವ್ಯಕ್ತಪಡಿಸಿದರು.