ಬೆಂಗಳೂರು:- ಚೈತ್ರಮಾಸದ ಶುದ್ಧ ಪೂರ್ಣಿಮೆಯಂದು ನಡೆಯುವ ಐತಿಹಾಸಿಕ ಬೆಂಗಳೂರು ಕರಗ ಸಂಭ್ರಮ, ಸಡಗರದಿಂದ ನೆರವೇರಿದೆ. ಅದ್ಧೂರಿ ಕರಗ ಮಹೋತ್ಸವಕ್ಕೆ ಲಕ್ಷಾಂತರ ಭಕ್ತಗಣ ಸಾಕ್ಷಿಯಾಯ್ತು.
ಬಿಜೆಪಿಗೆ ನಮ್ಮ ಸರ್ಕಾರವನ್ನು ಪ್ರಶ್ನಿಸುವ ನೈತಿಕತೆ ಇಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ
ಬರೋಬ್ಬರಿ 800 ವರ್ಷಗಳ ಇತಿಹಾಸ ಹೊಂದಿರುವ ಕರಗ ನೋಡುಗರ ಕಣ್ಮನ ಸೆಳೆದಿದೆ. ಆದಿಶಕ್ತಿ ಸ್ವರೂಪಿಣಿ ದ್ರೌಪದಮ್ಮ-ಧರ್ಮರಾಯಸ್ವಾಮಿ ಕರಗ ಶಕ್ತ್ಯೋತ್ಸವ. ಚೈತ್ರ ಹುಣ್ಣಿಮೆಯ ಬೆಳಕು. ಮಲ್ಲಿಗೆ ಹೂವಿನ ಕಂಪು. ಬಣ್ಣ ಬಣ್ಣದ ಹೂವುಗಳಿಂದ ಧರ್ಮರಾಯಸ್ವಾಮಿ ರಥ ಝಗಮಗಿಸಿದೆ. ರಥದ ಮೇಲೆ ಕಲಶ. ಉತ್ಸವಕರ್ತರು ಹಾಗೂ ವೀರಕುಮಾರರು, ಪೂಜಾರಿಗಳೊಂದಿಗೆ ಮೆರವಣಿಗೆ ಸಾಗಿದೆ. ಛತ್ರಿ, ಚಾಮರ, ಧ್ವಜದ ಜತೆಗೆ ನಾದಸ್ವರ ಗಮನ ಸೆಳೆದಿದೆ.
ಪರಂಪರೆಯ ಹೆಗ್ಗುರುತು ಸಾರುವ ಬೆಂಗಳೂರು ಕರಗ ಶಕ್ತೋತ್ಸವ ಶನಿವಾರ ಮಧ್ಯರಾತ್ರಿ ಶ್ರದ್ಧಾಭಕ್ತಿಯಿಂದ ನೆರವೇರಿತು.
ಮಧ್ಯರಾತ್ರಿ ಸುಮಾರು 12.30 ರಿಂದ 1ರ ಸುಮಾರಿಗೆ ಹೊರಟ ಕರಗ ಮೆರವಣಿಗೆಯ ದರ್ಶನ ಪಡೆದು ಲಕ್ಷಾಂತರ ಭಕ್ತರು ಪುನೀತರಾದರು. ಅರ್ಚಕರಾದ ಎ.ಜ್ಞಾನೇಂದ್ರ ಅವರು 15ನೇ ಬಾರಿಗೆ ಕರಗ ಹೊತ್ತು ಹೆಜ್ಜೆ ಹಾಕಿದರು. ಮೆರವಣಿಗೆಯುದ್ದಕ್ಕೂ ವೀರಕುಮಾರರು ಸಾಗಿದರು.
ಉತ್ಸವದ ಹಿನ್ನೆಲೆಯಲ್ಲಿ ಮುಂಜಾನೆಯಿಂದಲೇ ಧರ್ಮರಾಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ, ಅಭಿಷೇಕ, ಮಹಾಮಂಗಳಾರತಿ ನಡೆಯಿತು. ಅರ್ಚಕ ಜ್ಞಾನೇಂದ್ರ ಅವರು ಅರಿಶಿನ ಬಣ್ಣದ ಸೀರೆ, ಬಳೆ ತೊಟ್ಟು ಕಬ್ಬನ್ ಪಾರ್ಕ್ನ ಕರಗದ ಕುಂಟೆಯಲ್ಲಿ ದ್ರೌಪದಿ ದೇವಿಗೆ ಗಂಗೆ ಪೂಜೆ ಸಲ್ಲಿಸಿದರು. ಅಲ್ಲಿಂದ ಹಸಿಕರಗವನ್ನು ಮಂಟಪಕ್ಕೆ ಹೊತ್ತು ತಂದು ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿದರು
ಮುಂಜಾನೆಯಿಂದಲೇ ಬಣ್ಣ ಬಣ್ಣದ ವಸ್ತುಗಳಿಂದ 40 ಅಡಿಯ ತೇರನ್ನು ಸಿಂಗರಿಸುವ ಕಾರ್ಯ ನಡೆಯಿತು. ತೇರಿನ ಮೇಲೆ, ಕಲಶದ ಕೆಳಗೆ ಅರ್ಜುನ-ದ್ರೌಪದಿಯರ ಮೂರ್ತಿಗಳೊಂದಿಗೆ ವೀರ ಹನುಮಂತನ ಮೂರ್ತಿಯನ್ನೂ ವಿಶೇಷವಾಗಿ ಅಲಂಕರಿಸಲಾಗಿತ್ತು. ಉತ್ಸವ ಕರ್ತರು ಮತ್ತು ವೀರಕುಮಾರರು ಪೂಜಾರಿಗಳೊಂದಿಗೆ ಸಾಗುವ ಮೆರವಣಿಗೆಯಲ್ಲಿ ಛತ್ರಿ, ಚಾಮರ, ಧ್ವಜದ ಜತೆಗೆ ನಾದಸ್ವರ ಮೊಳಗಿತು. ವೀರಕುಮಾರರು ಹೊಂಗೆ ಹೂವಿನ ಗೊಂಚಲು ಕಿತ್ತುತಂದು ದೇವಸ್ಥಾನದಲ್ಲಿ ಮಂಟಪವನ್ನು ನಿರ್ಮಿಸಿದರು. ಬಳಿಕ ಅರ್ಜುನ-ದ್ರೌಪದಿಯರ ವಿವಾಹ ಮಹೋತ್ಸವ ಕಾರ್ಯ ನೆರವೇರಿತು.
ಸರ್ವ ಧರ್ಮಗಳ ಸಂಕೇತವಾದ ಕರಗ ಬೆಂಗಳೂರಿನ ಕಾಟನ್ಪೇಟೆಯ ಹಜರತ್ ತವಾಕಲ್ ಮಸ್ತಾನ್ ದರ್ಗಾದಲ್ಲೂ ಪ್ರದಕ್ಷಿಣೆ ಹಾಕಿತು. ದರ್ಗಾದ ಅಂಗಳದಲ್ಲಿ 3 ಸುತ್ತು ಪ್ರದಕ್ಷಿಣೆ ಮಾಡಿ ದೃಷ್ಟಿ ತೆಗೆದು, ದರ್ಗಾದಲ್ಲೇ ಪೂಜೆ ನೆರವೇರಿಸಲಾಯಿತು. ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಕರಗ ಮಹೋತ್ಸವದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.