ಬೆಂಗಳೂರು:- ವಿಶ್ವವಿಖ್ಯಾತ ಐತಿಹಾಸಿಕ ಕರಗ ಶಕ್ತ್ಯ ಉತ್ಸವ ಹಾಗೂ ಧರ್ಮರಾಯ ಸ್ವಾಮಿ ಮಹಾರಥೋತ್ಸವಕ್ಕೆ ಶನಿವಾರ ತಡರಾತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ.
IPL 2025: ಇಂದು RCB Vs RR ಬಿಗ್ ಫೈಟ್: ಗ್ರೀನ್ ಜರ್ಸಿಯಲ್ಲಿ ಕಣಕ್ಕಿಳಿಯಲಿದೆ ಬೆಂಗಳೂರು; ಪಂದ್ಯ ಆರಂಭ ಯಾವಾಗ?
ಐತಿಹಾಸಿಕ ಬೆಂಗಳೂರು ಕರಗ ಶಕ್ತೋತ್ಸವ ಧರ್ಮರಾಯಸ್ವಾಮಿ ದೇವಸ್ಥಾನದಿಂದ ಹೊರಡುವ ಮೂಲಕ ಚಾಲನೆ ದೊರೆಯಿತು. ಅರ್ಚಕ ವಿ. ಜ್ಞಾನೇಂದ್ರ ಅವರು 15ನೇ ಬಾರಿಗೆ ಕರಗವನ್ನು ಹೊತ್ತಿದ್ದಾರೆ. ಚೈತ್ರಮಾಸದ ಚೈತ್ರ ಪೌರ್ಣಿಮೆಯ ಚಂದ್ರನ ಬೆಳಕಿನಲ್ಲಿ ಕರಗ ಉತ್ಸವ ನಡೆಯಿತು.
ಕರಗದ ಅಕ್ಕ-ಪಕ್ಕದಲ್ಲಿ ವೀರಕುಮಾರರು ಖತ್ತಿ ಹಿಡಿದು ಸಾಗಿದರು. ಉತ್ಸವ ಸಾಗುವ ದಾರಿ ಉದ್ದಕ್ಕೂ ಭಕ್ತರು ಗೋವಿಂದ, ಗೋವಿಂದ ಎಂದು ಭಗವಂತನ ನಾಮಸ್ಮರಣೆ ಮಾಡುತ್ತಾ ಭಕ್ತರು ಕರಗಕ್ಕೆ ಮಲ್ಲಿಗೆ ಹೂವು ಅರ್ಪಿಸಿದ್ದಾರೆ. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕರಗ ದರ್ಶನ ಪಡೆದರು.
ತಿಗಳರಪೇಟೆಯ ಧರ್ಮರಾಯಸ್ವಾಮಿ ದೇಗುಲದಿಂದ ಆರಂಭವಾಗುವ ಕರಗ, ದೇವಸ್ಥಾನದ ಹೊರಭಾಗದಲ್ಲಿರುವ ಗಣಪತಿ, ಮುತ್ಯಾಲಮ್ಮ ದೇವಿಗೆ ಪೂಜೆ ಸಲ್ಲಿಸಿ, ಬಳಿಕ ಹಲಸೂರುಪೇಟೆಯ ಆಂಜನೇಯಸ್ವಾಮಿ, ಶ್ರೀರಾಮ ದೇವಾಲಯಕ್ಕೆ ತೆರಳುತ್ತದೆ. ಇಲ್ಲಿಂದ, ಪ್ರಸನ್ನ ಗಂಗಾಧರೇಶ್ವರಸ್ವಾಮಿ ದೇವಸ್ಥಾನ ತೆರಳಿ, ನಂತರ, ನಗರ್ತಪೇಟೆಯ ವೇಣುಗೋಪಾಲ ಕೃಷ್ಣಸ್ವಾಮಿ ದೇವಾಲಯವನ್ನು ತಲುಪಿ, ನಗರೇಶ್ವರಸ್ವಾಮಿ ದೇವಾಲಯ, ಸಿದ್ದಣ್ಣಗಲ್ಲಿ ಭೈರೇದೇವರ ದೇಗುಲ ಕಬ್ಬನ್ಪೇಟೆ 14ನೇ ಕ್ರಾಸ್ನಲ್ಲಿರುವ ಶ್ರೀರಾಮ ಸೇವಾ ಮಂದಿರವನ್ನು ತಲಪುತ್ತದೆ.
ಬಳಿಕ, 15ನೇ ಗಲ್ಲಿ ಮತ್ತು ಆಂಜನೇಯಸ್ವಾಮಿ ದೇವಸ್ಥಾನದ ಮೂಲಕ, ಮಕ್ಕಳ ಬಸವಣ್ಣ ಗುಡಿ, ಗಾಣಿಗರಪೇಟೆಯ ಚೆನ್ನರಾಯಸ್ವಾಮಿ ದೇಗುಲ, ಚಾಮುಂಡೇಶ್ವರಿ ದೇವಸ್ಥಾನ, ಅವಿನ್ಯೂ ರಸ್ತೆಯ ಈಶ್ವರ ದೇಗುಲ, ದೊಡ್ಡಪೇಟೆಯ ಕೋಟೆ ಆಂಜನೇಯಸ್ವಾಮಿ ದೇವಾಲಯ, ಕೆ.ಆರ್.ಮಾರುಕಟ್ಟೆಯ ಉದ್ಭವ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಗುತ್ತದೆ.
ಬಳಿಕ, ಪೊಲೀಸ್ ರಸ್ತೆಯ ಮೂಲಕ ಮುರಹರಿಸ್ವಾಮಿ ಮಠ, ಬೀರೇದೇವರ ಗುಡಿ, ಅರಳೇಪೇಟೆ ಮುಖ್ಯರಸ್ತೆ ಮಾರ್ಗವಾಗಿ ಅರಳೇಪೇಟೆಯ ಲಕ್ಷ್ಮೀನಾರಾಯಣಸ್ವಾಮಿ ದೇವಾಲಯ, ಬಳೇಪೇಟೆಯ ಬಳೇಗರಡಿ ಬಳಿ ಮಸ್ತಾನ್ ಸಾಹೇಬರ ದರ್ಗಾದಲ್ಲಿ ಪೂಜೆ ಸಲ್ಲಿಸಲಾಗುತ್ತದೆ. ನಂತರ ನಿಮಿಷಾಂಬ ದೇವಾಲಯ, ಗಾಂಧಿನಗರದ ಅಣ್ಣಮ್ಮ ದೇವಾಲಯ, ನಂತರ, ಕಿಲಾರಿ ರಸ್ತೆಯಲ್ಲಿರುವ ಚಿಕ್ಕ ಧರ್ಮರಾಯಸ್ವಾಮಿ ದೇವಾಲಯ ತಲಪುತ್ತದೆ.
ಇಲ್ಲಿಂದ, ಯಲಹಂಕ ಗೇಟ್ ಬಳಿಯ ಆಂಜನೇಯಸ್ವಾಮಿ ದೇವಸ್ಥಾನ, ಅವೆನ್ಯೂ ರಸ್ತೆ ಮಾರ್ಗವಾಗಿ ತುಪ್ಪದಾಂಜನೇಯ ಸ್ವಾಮಿ ಗುಡಿ, ರಂಗನಾಥಸ್ವಾಮಿ, ಚೌಡೇಶ್ವರಿ ಗುಡಿ, ಸಿ.ಟಿ.ರಸ್ತೆಯ ಮೂಲಕ ಕುಂಬಾರಪೇಟೆ ಮುಖ್ಯರಸ್ತೆಯನ್ನು ಪ್ರವೇಶಿಸುವ ಕರಗ ಉತ್ಸವ ಗೊಲ್ಲರಪೇಟೆ, ತಿಗಳರಪೇಟೆಯಲ್ಲಿ ತಿಗಳ ಕುಲಬಾಂಧವರ ಮನೆಗಳು, ಭಕ್ತರಿಂದ ಪೂಜೆಯನ್ನು ಸ್ವೀಕರಿಸಿ ಮುಂದುವರಿಯುವ ಕರಗ ಉತ್ಸವ, ನಂತರ ಹಾಲುಬೀದಿ, ಕಬ್ಬನ್ಪೇಟೆ ಮೂಲಕ ಸುಣ್ಣಕಲ್ ಪೇಟೆ ಮೂಲಕ ಕುಲ ಪುರೋಹಿತರ ಮನೆಗಳಲ್ಲಿ ಪೂಜೆಗಳನ್ನು ಸ್ವೀಕರಿಸಿ, ನರಸಿಂಹ ಜೋಯಿಸ್ಗಲ್ಲಿ ಮೂಲಕ ಸಾಗಿ, ಕೊನೆಗೆ ನಂತರ ಧರ್ಮರಾಯಸ್ವಾಮಿ ದೇವಸ್ಥಾನಕ್ಕೆ ಕರಗ ತಲುಪಲಿದೆ. ನಸುಕಿನ ಜಾವ 2.25ರಿಂದ ಬೆಳಗ್ಗೆ 8ರವರೆಗೆ ಕರಗ ಉತ್ಸವ ನಡೆಯುವ ಸಾಧ್ಯತೆ ಇದೆ.