ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಗಲಭೆಕೋರರ ಪ್ರಕರಣ ವಾಪಸಾತಿ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಹಿನ್ನಡೆ ಆಗಿದ್ದು, ಮುಸ್ಲಿಂ ತುಷ್ಟಿಕರಣಕ್ಕೆ ಸಿದ್ಧರಾಮಯ್ಯ ಸರ್ಕಾರಕ್ಕೆ ಮುಖಭಂಗವಾಗಿದೆ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಮುತಾಲಿಕ್, ರಾಜ್ಯದಲ್ಲಿ ಇರುವುದು ಮುಸ್ಲಿಂ ಸರ್ಕಾರ, ಮುಸ್ಲಿಂ ಲೀಗ್, ಪಿಎಫ್ ಐ, ಎಸ್ ಡಿಪಿಐ ಸರ್ಕಾರ. ಮಂಗಳೂರಿನಲ್ಲಿ ನಡೆಯುತ್ತಿರುವ ಘಟನೆಗಳಿಗೆ ಕಾಂಗ್ರೆಸ್ ಸರ್ಕಾರವೇ ಕಾರಣ. ಸ್ಪೀಕರ್ ಯು.ಟಿ ಖಾದರ್, ಸುಭಾಶ್ ಶೆಟ್ಟಿ ಪ್ರಕರಣ ತಿರುಚುವ ಪ್ರಯತ್ನ ಮಾಡಿದರು. ಈಗ ಮತ್ತೊಂದು ಮುಸ್ಲಿಂ ವ್ಯಕ್ತಿ ಕೊಲೆಯಾಗಿದೆ. ಇದು ಸಹಜ, ಅಲ್ಲಿ ಜನ ಏನು ಅನುಭವಿಸುತ್ತಿದ್ದಾರೆ ಅಂತ ಅವರಿಗೆ ಗೊತ್ತು ಎಂದರು.
ಹೈಕೋರ್ಟ್ ನ ತೀರ್ಪಿನಿಂದ ರಾಜ್ಯ ಸರ್ಕಾರಕ್ಕೆ ಕಪಾಳ ಮೋಕ್ಷ ಆಗಿದೆ. ಸರಕಾರದ ನಡೆ ವಿರುದ್ಧ ಹಿಂದೂ ಪರ ಸಂಘಟನೆಗಳು ಹೈಕೋರ್ಟ್ ನಲ್ಲಿ ಪಿಐಎಲ್ ಹಾಕಿದ್ದವು. ಸರ್ಕಾರದ ನಿರ್ಧಾರಕ್ಕೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ. ಹೈಕೋರ್ಟ್ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ ಎಂದರು.
2022ರ ಏ.16ರಂದು ಹಳೆ ಹುಬ್ಬಳ್ಳಿಯಲ್ಲಿ ಗಲಭೆಯಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ಗೆ ಸಂಬಂಧಿಸಿ ಪೊಲೀಸ್ ಠಾಣೆ ಮುಂದೆ ಒಂದು ಕೋಮಿನ ಜನ ಗುಂಪು ಸೇರಿತ್ತು. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು.ಸಾರ್ವಜನಿಕರ ಆಸ್ತಿ, ಪೊಲೀಸ್ ವಾಹನಗಳನ್ನ ಪ್ರತಿಭಟನಕಾರರು ಧ್ವಂಸ ಮಾಡಿದ್ದರು. ಗಲಭೆಯಲ್ಲಿ ಕಲ್ಲು ತೂರಾಟ ನಡೆದಿತ್ತು. ಕಲ್ಲು ತೂರಾಟದಲ್ಲಿ ನಾಲ್ವರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದರು. ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದರು. ಬಳಿಕವೇ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿತ್ತು ಈ ಕುರಿತು ಎನ್ಐಎ ತನಿಖೆ ನಡೆಸಿತ್ತು.
ಇಂತಹ ಸಂದರ್ಭದಲ್ಲಿಯೇ ಕಾಂಗ್ರೆಸ್ ಸರ್ಕಾರ ಪ್ರಕರಣ ಹಿಂಪಡೆದಿತ್ತು. ಇದು ರಾಜ್ಯ ಸರ್ಕಾರ ಮುಸ್ಲಿಂ ತುಷ್ಟಿಕರಣದ ಪರಾಕಾಷ್ಟೆ ಆಗಿದ್ದು ಇದೀಗ ಹೈಕೋರ್ಟ್ ತೀರ್ಪು ನೀಡಿದೆ
ರಾಜ್ಯ ಸರ್ಕಾರಕ್ಕೆ ದೊಡ್ಡ ಮುಖಭಂಗವಾಗಿದೆ. ಒಂದು ವೇಳೆ ಸುಪ್ರೀಂಕೋರ್ಟಿಗೆ ಹೋದಲ್ಲಿ ಅಲ್ಲಿಯೂ ಮುಖಭಂಗ ಖಚಿತ ಆಗಿದೆ. ಈಗ್ಲಾದ್ರೂ ರಾಜ್ಯ ಸರ್ಕಾರ ನ್ಯಾಯಯುತವಾಗಿ ನಡೆದುಕೊಳ್ಳಲಿ ಎಂದು ಮುತಾಲಿಕ್ ಸಲಹೆ ನೀಡಿದರು