ಬೆಂಗಳೂರು:- ಬುಧವಾರ ಆರ್ಸಿಬಿ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ.
ಕಾಲ್ತುಳಿತ ಕೇಸ್: ಪೊಲೀಸರ ಸಲಹೆ ಪಾಲಿಸದೇ ದಿಢೀರ್ ಕಾರ್ಯಕ್ರಮ ಆಯೋಜನೆ ಮಾಡಿದ್ದೇ ದುರಂತಕ್ಕೆ ಕಾರಣ!
ಐಪಿಎಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿದ್ದ ಆರ್ ಸಿಬಿ ತಂಡ 18 ವರ್ಷಗಳ ಬಳಿಕ ತನ್ನ ಚೊಚ್ಚಲ ಐಪಿಎಲ್ ಪ್ರಶಸ್ತಿ ಎತ್ತಿ ಹಿಡಿದಿದ್ದು, ಇದೇ ಖುಷಿಯನ್ನು ಬೆಂಗಳೂರಿನಲ್ಲಿ ತನ್ನ ಅಭಿಮಾನಿಗಳೊಂದಿಗೆ ಹಂಚಿಕೊಳ್ಳಲು ಮುಂದಾಗಿತ್ತು.
ಆಟಗಾರರ ಬಿಸಿ ಶೆಡ್ಯೂಲ್ ನಡುವೆಯೂ ಆರ್ ಸಿಬಿ ತಂಡ ಆಟಗಾರರನ್ನು ಬೆಂಗಳೂರಿಗೆ ಕರೆತಂದು ಅಭಿಮಾನಿಗಳ ಜೊತೆ ಸಂಭ್ರಮಾಚರಣೆ ಮಾಡಲು ನಿರ್ಧರಿಸಿತ್ತು. ಇದಕ್ಕಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಕೂಡ ಆಯೋಜನೆ ಮಾಡಲಾಗಿತ್ತು. ಆದರೆ ಇದೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಸಂಭವಿಸಿದೆ. ಈ ದುರಂದಲ್ಲಿ 11 ಜನರು ಮೃತಪಟ್ಟಿದ್ದಾರೆ. ಕಾಲ್ತುಳಿತಕ್ಕೆ ಸಿಲುಕಿ ಸಾವನ್ನಪ್ಪಿದ್ದವರ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.
ಬೌರಿಂಗ್ನಲ್ಲಿ 6 ಹಾಗೂ ವಿಕ್ಟೋರಿಯಾದಲ್ಲಿ 5 ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ವೈದ್ಯರ ಮರಣೋತ್ತರ ಪರೀಕ್ಷೆಯಲ್ಲಿ ಮೃತಪಟ್ಟವರ ಸಾವಿಗೆ ಕಾರಣ ಬಯಲಾಗಿದೆ. ಎಲ್ಲರೂ ಉಸಿರಾಟ ಸಮಸ್ಯೆಯಿಂದ ಮೃತಪಟ್ಟಿರುವುದು ವರದಿಯಲ್ಲಿ ದೃಢಪಟ್ಟಿದೆ.
ಕೆಲವರು ಉಸಿರುಗಟ್ಟುವಿಕೆಯಿಂದ ಸಾವನ್ನಪ್ಪಿದರೇ ಇನ್ನೂ ಕೆಲವರು ಕೆಲ ಮೃತರ ಎದೆಯ ಭಾಗದಲ್ಲಿ ಹೆಚ್ಚು ಒತ್ತಡ ಬಿದ್ದು ಮೃತಪಟ್ಟಿದ್ದಾರೆ. ಮತ್ತೆ ಕೆಲವರು ಉಸಿರುಗಟ್ಟುವಿಕೆ ಆರಂಭ ಆಗಿ 15ರಿಂದ 18 ನಿಮಿಷದಲ್ಲಿ ಸಾವನ್ನಪ್ಪಿದ್ದಾರೆ. 13 ವರ್ಷದ ಬಾಲಕಿ ಕೂಡ ಉಸಿರುಗಟ್ಟುವಿಕೆಯಿಂದ ಕೊನೆಯುಸಿರೆಳೆದಿದ್ದಾಳೆ. ಸಾವಿಗೆ ಉಸಿರುಗಟ್ಟುವಿಕೆ ಬಿಟ್ಟರೆ ಬೇರೆ ಯಾವುದೇ ರೀತಿಯ ಅಂಶ ಕಂಡು ಬಂದಿಲ್ಲ.
ಇನ್ನು ವಿಕ್ಟೋರಿಯಾ ಆಸ್ಪತ್ರೆಯ ಮರಣೋತ್ತರ ಪರೀಕ್ಷೆಯಲ್ಲಿ ಕೂಡ ಇದೇ ವರದಿ ಬಂದಿದೆ. ಇಬ್ಬರು ಉಸಿರುಗಟ್ಟುವಿಕೆಯಿಂದ ಹೃದಯ ಸ್ತಂಭನ ಉಂಟಾಗಿ ಉಸಿರನ್ನು ಚೆಲ್ಲಿದ್ದಾರೆ. ಮತ್ತೊಬ್ಬರಿಗೆ ಉಸಿರುಗಟ್ಟುವಿಕೆ ಜೊತೆಗೆ ಮೂಳೆ ಮುರಿತ ಉಂಟಾಗಿ ಮೃತಪಟ್ಟಿದ್ದು, ಉಳಿದವರು ಉಸಿರುಗಟ್ಟುವಿಕೆಯಿಂದ ಸಾವನ್ನಪ್ಪಿದ್ದಾರೆ.