ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಸಂಭವಿಸಿದ್ದ ಕಾಲ್ತುಳಿತದಲ್ಲಿ 11 ಆರ್ಸಿಬಿ ಅಭಿಮಾನಿಗಳು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮಾಡಿದ ಹೈಕೋರ್ಟ್, ಸರ್ಕಾರದ ಪ್ರತಿಕ್ರಿಯೆ ಬಂದ ಬಳಿಕ ಮಧ್ಯಂತರ ಅರ್ಜಿ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಯಾವುದೇ ನಿರ್ದೇಶನ ನೀಡದೇ ಅರ್ಜಿಗಳ ವಿಚಾರಣೆಯನ್ನು ಜೂ.12 ಮಧ್ಯಾಹ್ನ 2.30ಕ್ಕೆ ಮುಂದೂಡಿದೆ.
ಹೈಕೋರ್ಟ್ ನ್ಯಾಯಾಧೀಶರ ಮುಂದೆ ತನಿಖಾ ವರದಿ ಸಲ್ಲಿಕೆಗೆ ಎಜಿ ಸಮಯಾವಕಾಶ ಕೋರಿ ವಾದ ಮಂಡಿಸಿದ್ರು. ಜ್ಯುಡಿಷಿಯಲ್ ತನಿಖೆ ನಡೀತಿದೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ತನಿಖೆ ಆಗ್ತಿದೆ ಎಂದಿದ್ದಾರೆ. ಈ ವೇಳೆ ಪೀಠ, ಈಗ ಕೇಳಿದ್ದ ವರದಿ ಸಲ್ಲಿಕೆ ಮಾಡೋದಿಲ್ವಾ? ವರದಿ ಸಲ್ಲಿಸಲು ಏನು ಕಷ್ಟ ಎಂದು ಹಂಗಾಮಿ ಮುಖ್ಯ ನ್ಯಾ. ಕಾಮೇಶ್ವರ ರಾವ್ ಪ್ರಶ್ನೆ ಮಾಡಿದ್ದಾರೆ.
ಕಾಲ್ತುಳಿತ ಪ್ರಕರಣವನ್ನು ಸಿಐಡಿ ತನಿಖೆಗೆ ವರ್ಗಾವಣೆ ಮಾಡಲಾಗಿದ್ದು, ಸಿಐಡಿ ತನಿಖೆ ಆರಂಭವಾಗಿದೆ ಎಂದ ಎಜಿ, ತನಿಖೆ ಮುಗಿಯಲು ಒಂದು ತಿಂಗಳು ಬೇಕು. ಕೆಲ ಆರೋಪಿಗಳನ್ನ ಬಂಧಿಸಿ ತನಿಖೆ ನಡೆಸಲಾಗುತ್ತಿದೆ ಎಂದ್ರು. ಅಲ್ಲದೇ ಕೋರ್ಟ್ ನೀಡುವ ಯಾವುದೇ ನಿರ್ದೇಶನ ಪಾಲಿಸಲು ಸರ್ಕಾರ ಸಿದ್ದವಾಗಿದೆ ಎಂದಿದ್ದಾರೆ.
ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸಲಾಗುವುದು ಆದ್ರೆ ಕಾಲಾವಕಾಶ ನೀಡಿ ಎಂದು ಕೋರ್ಟ್ ಬಳಿ ಎಜಿ ಮನವಿ ಮಾಡಿದ್ರು. ಆದ್ರೆ ಹೈಕೋರ್ಟ್, ವರದಿ ಸಲ್ಲಿಕೆಗೆ ಎರಡು ದಿನ ಮಾತ್ರ ಅವಕಾಶ ನೀಡಲಾಗುವುದು ಎಂದಿದೆ. ಅದಕ್ಕಿಂತ ಹೆಚ್ಚಿನ ಸಮಯ ನೀಡಲು ಸಾಧ್ಯವಿಲ್ಲ. ಜೂನ್ 12 ರೊಳಗೆ ಮುಚ್ಚಿದ ಲಕೋಟೆಯಲ್ಲಿ ವರದಿ ನೀಡಿ ಹೈಕೋರ್ಟ್ ಆದೇಶ ನೀಡಿದೆ. ಜೂನ್ 16 ರವರೆಗೆ ಕಾಲಾವಕಾಶ ನೀಡುವಂತೆ ಎಜಿ ಮನವಿ ಮಾಡಿದ್ರು. ಆದೇಶದ ಬಳಿಕ ನ್ಯಾಯಾಧೀಶರು ಜೂ.12 ಮಧ್ಯಾಹ್ನ 2.30ಕ್ಕೆ ವಿಚಾರಣೆ ಮುಂದೂಡಿಕೆ ಮಾಡಿದ್ದಾರೆ.