ಬೆಂಗಳೂರು:- ಜೂ. 4 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿದ್ದರು. ದುರಂತದಲ್ಲಿ ರಾಜಕೀಯ ಜಟಾಪಟಿ ಎದ್ದು ನಿಂತಿದೆ. ಹಿಂದೆಂದೂ ನಡೆಯದಂತ ಘೋರ ಘಟನೆ ಸರ್ಕಾರಕ್ಕೆ ಮುಜುಗರವನ್ನೂ ತಂದಿಟ್ಟಿದೆ.
ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರೋ ಕಾಂಗ್ರೆಸ್ ಹೈಕಮಾಂಡ್ ಸರ್ಕಾರದ ವಿರುದ್ಧ ಗರಂ ಆಗಿದೆ. ಅಷ್ಟೇ ಅಲ್ಲ ಸಿಎಂ, ಡಿಸಿಎಂ ಇಬ್ಬರಿಗೂ ಬುಲಾವ್ ನೀಡಿದೆ.
ಅತ್ತ ವಿರೋಧ, ಇತ್ತ ಮುಜುಗರ.. ಸರ್ಕಾರಕ್ಕಿರೋದು ಡ್ಯಾಮೇಜ್ ಕಂಟ್ರೋಲ್ ಒಂದೇ ಆಪ್ಶನ್. ಈ ನಡುವೆ, ಹೈಕಮಾಂಡ್ ದೆಹಲಿಗೆ ಬನ್ನಿ ಅಂತಾ ಕರೆದಿದ್ದಾರೆ. ಅದರಂತೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ದೆಹಲಿಗೆ ತೆರಳ್ತಿದ್ದಾರೆ. ಈ ವೇಳೆ ಕಾಲ್ತುಳಿತ ದುರಂತದ ಬಗ್ಗೆ ಹೈಕಮಾಂಡ್ಗೆ ಮಾಹಿತಿ ನೀಡಲಿದ್ದಾರೆ.
ದುರಂತದಲ್ಲಿ ಸರ್ಕಾರದ ವೈಫಲ್ಯ ಬಗ್ಗೆ ಹೈಕಮಾಂಡ್ ಗರಂ ಆಗಿದ್ದು, ಸಂಪೂರ್ಣ ವರದಿ ಕೇಳಿದೆ. ಹೀಗಾಗಿ RCB ಸಂಭ್ರಮ ಸಮಾರಂಭ ಸಾವಿನ ಮನೆಯಾಗಿದ್ದು ಹೇಗೆ? ಎಂಬುದರ ಕುರಿತಂತೆ ಸಿಎಂ ಹಾಗೂ ಡಿಸಿಎಂ ಮಾಹಿತಿ ನೀಡಲಿದ್ದಾರೆ. ಈಗಾಗಲೇ ವರದಿ ಕೂಡ ಹೈಕಮಾಂಡ್ ಕೈ ಸೇರಿದ್ದು, ಈ ರಿಪೋರ್ಟ್ ಆಧಾರದಲ್ಲೇ ಸಿಎಂ ಹಾಗೂ ಡಿಸಿಎಂರನ್ನ ರಾಹುಲ್ ಗಾಂಧಿ ದೆಹಲಿಗೆ ಕರೆಸಿಕೊಳ್ತಿದ್ದಾರಂತೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಅಂದು ನಡೆದ ಪ್ರತಿಯೊಂದು ವಿಷಯದ ಬಗ್ಗೆ ವರದಿ ಸಲ್ಲಿಸಿದ್ದಾರೆ. ಇನ್ನು, ಪೊಲೀಸ್ ಕಮಿಷನರ್ ಸಸ್ಪೆಂಡ್ ಸರ್ಕಾರಕ್ಕೆ ಬಾರೀ ಡ್ಯಾಮೇಜ್ ತಂದಿದೆ. ಈ ಬಗ್ಗೆಯೂ ಹೈಕಮಾಂಡ್ ಮಾಹಿತಿ ಪಡೆಯಲಿದೆ.