ಬೀದರ್: ಜನಿವಾರ ವಿವಾದದಿಂದ ಸಿಇಟಿ ಪರೀಕ್ಷೆಯಿಂದ ವಚಿಂತನಾಗಿದ್ದ ವಿದ್ಯಾರ್ಥಿ ಸುಚಿವ್ರತ್ ಕುಲಕರ್ಣಿರವರ ಕುಟುಂಬಕ್ಕೆ ಮುಖ್ಯಮಂತ್ರಿಗಳು ಕನಿಷ್ಠ ಹತ್ತು ಲಕ್ಷ ರೂ.ಗಳ ಆರ್ಥಿಕ ನೆರವು ನೀಡಬೇಕು ಎಂದು ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಆಗ್ರಹಿಸಿದ್ದಾರೆ. ಇತ್ತೀಚೆಗೆ ಜನಿವಾರ ವಿವಾದದಿಂದ ಸಿಇಟಿ ಪರೀಕ್ಷೆಯಿಂದ ವಚಿಂತನಾಗಿದ್ದ ಬೀದರ್ ನಗರದ ವಿದ್ಯಾರ್ಥಿ ಸುಚಿವ್ರತ್ ಕುಲಕರ್ಣಿರವರ ಮನೆಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು,
ನಾನು ಸುಚಿವ್ರತ್ ಕುಲಕರ್ಣಿರವರ ಮನೆಗೆ ಭೇಟಿ ನೀಡಿ, ವಿದ್ಯಾರ್ಥಿ ಹಾಗೂ ಆತನ ಪೋಷಕರನ್ನು ಮಾತನಾಡಿಸಿ, ಆತ್ಮಸ್ಥೈರ್ಯ ತುಂಬಿ, ನಿಮ್ಮೊಂದಿಗೆ ನಾವು ಇದ್ದೇವೆ, ನಿಮಗೆ ನ್ಯಾಯ ಕೊಡಿಸಲು ನಾವು ಪ್ರಯತ್ನಿಸುತ್ತೇವೆಂದು ಧೈರ್ಯ ನೀಡಿದ್ದೇನೆ ಎಂದರು.
Helmet Tips: ಹೆಲ್ಮೆಟ್ ಧರಿಸದಿದ್ದರೆ ದಂಡ: ಖರೀದಿಸುವಾಗ ಈ ಸಲಹೆಗಳು ಕಡ್ಡಾಯ!
ಸುಚಿವ್ರತ್ ಕುಟುಂಬ ಕಡುಬಡ ಕುಟುಂಬವಾಗಿದ್ದು, ಅವರು ಬಿಪಿಎಲ್ ಕಾರ್ಡುದಾರರಾಗಿದ್ದಾರೆ. ಆತನ ತಾಯಿ ಮಕ್ಕಳಿಗೆ ಪಾರ್ಟ್ ಟೈಮ್ ಟ್ಯೂಷನ್ ಹೇಳಿಕೊಟ್ಟು ಸಂಸಾರ ಸಾಗಿಸುತ್ತಿದ್ದಾರೆ. ಅದೇ ವೃತ್ತಿ ಬದುಕಿನಿಂದಲೇ ಮಗನನ್ನು ಓದಿಸುತ್ತಿದ್ದಾರೆ. ಈಗ ಮಗ ಸಿಇಟಿಯಿಂದ ವಂಚಿತನಾಗಿರುವುದು ಆ ಕುಟುಂಬಕ್ಕೆ ದೊಡ್ಡಮಟ್ಟದ ನಷ್ಟವಾಗಿದೆ. ಆ ವಿದ್ಯಾರ್ಥಿಯ ಒಂದು ವರ್ಷದ ಜೀವನ ಕೂಡ ಹಾಳಾದಂತಾಗಿದೆ.
ಆತ ಈಗ ಸರ್ಕಾರಿ ಸೀಟ್ ನಿಂದ ವಂಚಿತನಾಗಿದ್ದು, ಖಾಸಗಿಯಾಗಿಯೇ ಓದಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಬೇಕು ಅಂದ್ರೆ ಸಾಕಷ್ಟು ಖರ್ಚು ವೆಚ್ಚ ಬರುತ್ತದೆ. ಇದರಿಂದಾಗಿ ಮುಖ್ಯಮಂತ್ರಿಗಳು ಆ ವಿದ್ಯಾರ್ಥಿಯ ಶಿಕ್ಷಣಕ್ಕಾಗಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದಾಗಲಿ ಅಥವಾ ಇತರೆ ನಿಧಿಯಿಂದಾಗಲಿ ಕನಿಷ್ಠ ಹತ್ತು ಲಕ್ಷ ರೂ.ಗಳ ಆರ್ಥಿಕ ನೆರವನ್ನು ನೀಡಬೇಕು. ಆ ಮೂಲಕ ವಿದ್ಯಾರ್ಥಿಯ ಶಿಕ್ಷಣಕ್ಕೆ ಸಹಕರಿಸಬೇಕು ಎಂದು ನಾನು ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ.
ಮುಖ್ಯಮಂತ್ರಿಗಳು ಮರು ಪರೀಕ್ಷೆ ಮಾಡಿಸುವ ಬಗ್ಗೆ ಮಾತನಾಡಿದ್ದಾರೆ. ಈಗಾಗಲೇ ಆ ವಿದ್ಯಾರ್ಥಿ ಮಾನಸಿಕವಾಗಿ ನೊಂದಿದ್ದಾನೆ. ಅದು ಅವನಿಗೆ ಕಷ್ಟ ಆಗಬಹುದು. ಆತನ ಭವಿಷ್ಯ ಹಾಳು ಮಾಡಿದ ಪರೀಕ್ಷಾ ಸಿಬ್ಬಂದಿಗಳ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಬೇಕು. ಈ ಪ್ರಕರಣ ಇತರರಿಗೆ ಪಾಠ ಆಗಬೇಕು. ಮುಂದಿನ ದಿನಗಳಲ್ಲಿ ಈ ರೀತಿಯ ಪ್ರಕರಣ ಮರುಕಳಿಸದಂತೆ ನೋಡಿಕೊಳ್ಳಬೇಕು.
ಈ ಪ್ರಕರಣಕ್ಕೆ ಕಾರಣರಾದವರನ್ನು ಕೇವಲ ಸಸ್ಪೆಂಡ್ ಮಾಡಿದರೆ ಸಾಲದು ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡು ಕಠಿಣ ಶಿಕ್ಷೆ ವಿಧಿಸಬೇಕು. ಪ್ರಕರಣದ ಕುರಿತು ಉನ್ನತಮಟ್ಟದ ತನಿಖೆ ಆಗಬೇಕು ಎಂದು ಬಂಡೆಪ್ಪ ಖಾಶೆಂಪುರ್ ರವರು ಆಗ್ರಹಿಸಿದರು. ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರು ಹಾಗೂ ನಗರಸಭೆಯ ಮಾಜಿ ಸದಸ್ಯರಾದ ಮನೋಹರ್ ದಂಡೆ, ಪ್ರಮುಖರಾದ ಗಿರೀಶ್ ಮೈಲೂರಕರ್, ಸಂಜಯ್ ಹಿಪ್ಪರಗಿ, ಶಶಿಕಾಂತ್ ದೀಕ್ಷಿತ್, ನಗರಸಭೆ ಸದಸ್ಯ ಸೈಯದ್ ಸೌದ್, ವಿದ್ಯಾರ್ಥಿಯ ತಾಯಿ ಗೀತಾ, ತಂದೆ ಕಲ್ಯಾಣರಾವ್ ಕುಲಕರ್ಣಿರವರು ಸೇರಿದಂತೆ ಅನೇಕರಿದ್ದರು.