ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವರು, ಅಧಿಕಾರಿಗಳ ಧೋರಣೆ ವಿರುದ್ಧ ಸ್ವಪಕ್ಷೀಯ ಶಾಸಕರೇ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಅಹವಾಲು ಆಲಿಸಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ. ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಅವರು ಇಂದು ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, 45 ಮಂದಿ ಕಾಂಗ್ರೆಸ್ ಶಾಸಕರೊಂದಿಗೆ ಮುಖಾಮುಖಿ ಚರ್ಚೆ ನಡೆಸಿ, ಅಹವಾಲು ಆಲಿಸಲಿದ್ದಾರೆ.
ಬಿ.ಆರ್ ಪಾಟೀಲ್, ರಾಜು ಕಾಗೆ ಬಹಿರಂಗ ಹೇಳಿಕೆಯಿಂದ ಸರ್ಕಾರಕ್ಕೆ ಡ್ಯಾಮೇಜ್ ಉಂಟಾಗಿದ್ದು, ಇದಕ್ಕೆ ತೇಪೆ ಹಚ್ಚಲು ಹೈಕಮಾಂಡ್ ಮುಂದಾಗಿದೆ. ಇಂದು ಮಧ್ಯಾಹ್ನ ಶಾಸಕರು ತಮ್ಮ ಸಮಸ್ಯೆ ಹೇಳಿಕೊಳ್ಳಲು ಒನ್ ಟು ಒನ್ ಭೇಟಿಗೆ ಸಮಯ ಮೀಸಲಿಟ್ಟಿದ್ದಾರೆ.
ಒಟ್ಟು 40 ಶಾಸಕರ ಶಾರ್ಟ್ ಲಿಸ್ಟ್ ಮಾಡಿದ್ದು ಇಂದು 8 ಶಾಸಕರಿಗೆ ಬುಲಾವ್ ನೀಡಲಾಗಿದೆ. ಇಂದು ಮಧ್ಯಾಹ್ನ 1:30ಕ್ಕೆ ಬಿ.ಆರ್ ಪಾಟೀಲ್, 2 ಗಂಟೆಗೆ ರಾಜು ಕಾಗೆಗೂ ಭೇಟಿಗೆ ಟೈಂ ಫಿಕ್ಸ್ ಮಾಡಲಾಗಿದೆ. ಶಾಸಕರನ್ನು ಕರೆಸಿ ಸುರ್ಜೇವಾಲಾ ಎಚ್ಚರಿಕೆ ನೀಡುವ ಸಾಧ್ಯತೆ ಇದೆ.
ಮೂರು ದಿನ ಠಿಕಾಣಿ ಹೂಡಲಿರುವ ಸುರ್ಜೇವಾಲಾ ಪಕ್ಷದಲ್ಲಿನ ಅಸಮಾಧಾನ ಶಮನಗೊಳಿಸುವ ಯತ್ನ ಮಾಡಲಿದ್ದಾರೆ.