ದೊಡ್ಡಬಳ್ಳಾಪುರ : ಭಕ್ತರಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ 600ಕ್ಕೂ ಹೆಚ್ಚು ಎಕರೆ ಸರ್ಕಾರಿ ಗೋಮಾಳವಿದೆ, ಪೋಡಿಯಾಗದೆ ಇದ್ರು ಸರ್ಕಾರಿ ಗೋಮಾಳದಲ್ಲಿ ಕಾಂಪೌಂಡ್ ನಿರ್ಮಾಣ ಮಾಡಲಾಗುತ್ತಿದೆ . ಬಲಾಢ್ಯರ ಅತಿಕ್ರಮಕ್ಕೆ ಬ್ರೇಕ್ ಹಾಕಿದ ತಹಶೀಲ್ದಾರ್ ವಿಭಾ ವಿದ್ಯಾ ರಾಥೋಡ್, ಕಾಂಪೌಂಡ್ ನಿರ್ಮಾಣವನ್ನ ತಡೆ ಹಿಡಿದಿದ್ದಾರೆ, ಪೋಡಿ ನಂತರ ಅನಧಿಕೃತ ಸಾಗುವಳಿದಾರನ್ನು ತೆರವು ಮಾಡಿ ಸರ್ಕಾರಿ ಜಾಗವನ್ನ ವಶಕ್ಕೆ ಪಡೆಯುವುದ್ದಾಗಿ ಹೇಳಿದರು.
ದೊಡ್ಡಬಳ್ಳಾಪುರ ತಾಲೂಕು ಭಕ್ತರಹಳ್ಳಿ ಗ್ರಾಮ ಪಂಚಾಯಿತಿಯ ಮಲ್ಲೇಗೌಡನಪಾಳ್ಯ, ಲಕ್ಕೇನಹಳ್ಳಿ, ಸಿಂಗೇಹಳ್ಳಿ ಸರ್ವೆ ನಂಬರ್ ಗಳಲ್ಲಿ ಸುಮಾರು 600ಕ್ಕೂ ಹೆಚ್ಚು ಎಕರೆ ಸರ್ಕಾರಿ ಗೋಮಾಳವಿದೆ, ಸುತ್ತಮುತ್ತಲಿನ ರೈತರು ನೂರಾರು ಸರ್ಕಾರಿ ಗೋಮಾಳದಲ್ಲಿ ಅನುಭೋಗದಲ್ಲಿದ್ದು ಸಾಗುವಳಿ ಮಾಡುತ್ತಿದ್ದಾರೆ, ಭೂ ಮಂಜೂರಾತಿಗಾಗಿ ಫಾರಂ 53,57 ಅರ್ಜಿಯನ್ನು ಸಲ್ಲಿಸಿದ್ದಾರೆ, ಕೆಲವು ರೈತರಿಗೆ ಭೂ ಮಂಜೂರಾತಿಯಾಗಿದೆ. ಬಲಾಢ್ಯನೊಬ್ಬ ಸರ್ಕಾರಿ ಗೋಮಾಳದಲ್ಲಿ ಕಾಂಪೌಂಡ್ ನಿರ್ಮಾಣ ಮಾಡುತ್ತಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.
ಸರ್ಕಾರಿ ಗೋಮಾಳ ಹತ್ತಾರು ಗ್ರಾಮಗಳಲ್ಲಿನ ಜಾನುವಾರುಗಳ ಮೇವಿನ ತಾಣ, ಪಶುಸಂಗೋಪನೆ ನಂಬಿಕೊಂಡು ನೂರಾರು ಕುಟುಂಬಗಳು ಜೀವನ ಮಾಡುತ್ತಿವೆ, ಇದೇ ಗೋಮಾಳದ ಸುತ್ತ ಕಾಂಪೌಂಡ್ ನಿರ್ಮಾಣ ಮಾಡಲಾಗುತ್ತಿದ್ದು, ಜಾನುವಾರುಗಳ ಪ್ರವೇಶಿಸದಂತೆ ತಡೆಯುಲಾಗುತ್ತಿದೆ ಎಂಬುದು ರೈತರ ಆರೋಪವಾಗಿದೆ, ಕಾಂಪೌಂಡ್ ನಿರ್ಮಾಣಕ್ಕೆ ತಡೆ ಹಾಕುವಂತೆ ತಹಶೀಲ್ದಾರ್ ರವರಿಗೆ ಮನವಿ ಮಾಡಿದ್ದರು.
ಮಾಜಿ ಶಾಸಕರಾದ ಟಿ.ವೆಂಕಟರಣಯ್ಯ, ತಹಶೀಲ್ದಾರ್ ವಿಭಾ ವಿದ್ಯಾ ರಾಥೋಡ್, ಸರ್ವೆ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು, ರೈತರೊಂದಿಗೆ ಮಾತನಾಡಿದ ಅಧಿಕಾರಿಗಳ ತಂಡ ಕಾಂಪೌಂಡ್ ನಿರ್ಮಾಣಕ್ಕೆ ತಡೆ ನೀಡಲಾಗಿದೆ, ಪೋಡಿಯಾಗುವ ವರೆಗೂ ಕಾಂಪೌಂಡ್ ನಿರ್ಮಾಣ ಕೆಲಸಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದೆ.
ಮಾಧ್ಯಮದೊಂದಿಗೆ ಮಾತನಾಡಿದ ಮಾಜಿ ಶಾಸಕರಾದ ಟಿ.ವೆಂಕಟರಣಯ್ಯ, ಹಲವು ವರ್ಷಗಳಿಂದ ಸಾಗುವಳಿ ರೈತರು ಮತ್ತು ರೈತರಿಂದ ಭೂಮಿ ಖರೀದಿ ಮಾಡಿರುವ ಮಂಗಳ ಫೌರ್ಮ್ ನವರಿದ್ದಾರೆ, ಇವರಿಬ್ಬರ ನಡುವಿನ ಗೊಂದಲದಿಂದ ಸಮಸ್ಯೆಯುಂಟಾಗಿದೆ, ಕ್ರಯ ಮಾಡಿಕೊಂಡಿರುವ ಜಾಗದಲ್ಲಿ ಕಾಂಪೌಂಡ್ ನಿರ್ಮಾಣ ಮಾಡುವುದಕ್ಕೆ ನಮ್ಮ ವಿರೋಧವಿಲ್ಲ. ಅದಕ್ಕೂ ಮುನ್ನ, ಅಧಿಕಾರಿಗಳ ತಂಡ ಸರ್ವೆ ನಡೆಸಿ ಪೋಡಿಯಾದ ನಂತರವೇ ಕಾಂಪೌಂಡ್ ನಿರ್ಮಾಣ ಮಾಡಲಿ ಎಂದರು.
ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ತಹಶೀಲ್ದಾರ್ ವಿಭಾ ವಿದ್ಯಾ ರಾಥೋಡ್, ಪೋಡಿ ಅಂದೋಲನದಲ್ಲಿ ಸಾಸಲು ಹೋಬಳಿಗೆ ಪ್ರಥಮ ಆದ್ಯತೆ ನೀಡಲಾಗುವುದು, ಸಂಪೂರ್ಣ ಹೋಬಳಿಯನ್ನ ಪೋಡಿ ಮುಕ್ತ ಮಾಡಲಾಗುವುದು. ಕಾಂಪೌಂಡ್ ನಿರ್ಮಾಣ ಮಾಡದಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಉಪ ತಹಶೀಲ್ದಾರ್ ನೇತೃತ್ವದಲ್ಲಿ 6 ಸರ್ವೆಯರ್ಸ್, ಗ್ರಾಮ ಆಡಳಿತಾಧಿಕಾರಿ, ರೆವಿನ್ಯೂ ಇನ್ಸ್ ಪೇಕ್ಟರ್, ಮತ್ತು ಪೊಲೀಸು ಒಳಗೊಂಡ ತಂಡ ರಚನೆ ಮಾಡಲಾಗಿದೆ.
ಅಧಿಕಾರಿಗಳ ತಂಡ ಮೂರು ಗ್ರಾಮಗಳ ಸಂಪೂರ್ಣ ಸರ್ವೆ ಮಾಡುವರು, ಸರ್ಕಾರಿ ಗೋಮಾಳದಲ್ಲಿ ಅನುಭೋಗದಲ್ಲಿರುವ, ಖಾತೆ ಮಾಡಿಸಿಕೊಂಡಿರುವ, ಮಾರಾಟ ಮಾಡಿರುವ ಮತ್ತು ಅನಧಿಕೃತವಾಗಿರುವ ರೈತರ ಬಗ್ಗೆ ಮಾಹಿತಿ ಕಲೆ ಹಾಕಿ 15 ದಿನದೊಳಗೆ ವರದಿ ಸಲ್ಲಿಸುವರು. ವರದಿ ಆಧಾರದ ಮೇಲೆ ಅನಧಿಕೃತವಾಗಿರುವರನ್ನ ತೆರವು ಮಾಡಲಾಗುವುದು, ಸರ್ಕಾರಿ ಗೋಮಾಳವನ್ನ ಸರ್ಕಾರದ ವಶಕ್ಕೆ ಪಡೆಯುವುದ್ದಾಗಿ ಹೇಳಿದರು.
ಸಾಗುವಳಿದಾರರಾದ ರಾಮಕ್ಕ ಮಾತನಾಡಿ, ನಮ್ಮ ಅತ್ತೆ ಮಾವನ ಕಾಲದಿಂದ ನಾವು ಈ ಜಾಗದಲ್ಲಿ ವ್ಯವ್ಯಸಾಯ ಮಾಡುತ್ತಿದ್ದೇವೆ, ಉಪ ವಿಭಾಗಾಧಿಕಾರಿಗಳಿಂದ ಆದೇಶವಾಗಿದೆ, ಜಮೀನಿನ ಸ್ಕೇಚ್ ಆಗಿದೆ, ನಮ್ಮ ಬಳಿ ಜಮೀನಿನ ದಾಖಲೆಗಳಿದ್ದರು ದೌರ್ಜನ್ಯದಿಂದ ನಮ್ಮನ್ನು ಇಲ್ಲಿಂದ ಓಡಿಸಲು ಯತ್ನಿಸುತ್ತಿದ್ದಾರೆ, ತಹಶೀಲ್ದಾರ್ ಮಾತಿನ ಮೇಲೆ ನಂಬಿಕೆ ಇದೆ, ನ್ಯಾಯ ಸಿಗುವ ಭರವಸೆ ಇದೆ ಎಂದರು.