ತೆಲುಗು ನಟ ವಿಜಯ್ ದೇವರಕೊಂಡ ಈಗ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಅದೊಂದು ಹೇಳಿಕೆಯಿಂದಾಗಿ ವಿಜಯ್ ವಿರುದ್ಧ ಕೇಸ್ ದಾಖಲಾಗಿದೆ. ಬುಡಕಟ್ಟು ಜನಾಂಗದ ಬಗ್ಗೆ ಹೇಳಿಕೆ ನೀಡಿದ್ದಕ್ಕಾಗಿ ನಟ ವಿಜಯ್ ದೇವರಕೊಂಡ ವಿರುದ್ಧ ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಬುಡಕಟ್ಟು ಸಮುದಾಯಗಳ ಜಂಟಿ ಕ್ರಿಯಾ ಸಮಿತಿಯ ರಾಜ್ಯ ಅಧ್ಯಕ್ಷ ಅಶೋಕ್ ಕುಮಾರ್ ನಾಯಕ್ ನಟನ ವಿರುದ್ಧ ನೀಡಿದ್ದು, ಇತ್ತೀಚೆಗೆ ರಿಲೀಸ್ ಆದ ತಮಿಳು ನಟ ಸೂರ್ಯ ನಟನೆಯ “ರೆಟ್ರೋ” ಸಿನಿಮಾದ ಕಾರ್ಯಕ್ರಮದಲ್ಲಿ ದೇವರಕೊಂಡ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ.
ಸೂರ್ಯ ನಟನೆಯ ‘ರೆಟ್ರೋ’ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿಜಯ್ ದೇವರಕೊಂಡ ಅವರು ಬುಡಕಟ್ಟು ಜನಾಂಗದವರ ಭಾವನೆಗಳಿಗೆ ನೋವುಂಟು ಮಾಡುವ ಮತ್ತು ಅವರನ್ನು ಅವಮಾನಿಸುವ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಘಟನೆ ಬೆನ್ನಲ್ಲೇ ಮೇ 3ರಂದು ನಟ ಎಕ್ಸ್ ಖಾತೆಯಲ್ಲಿ ‘ಯಾವುದೇ ಸಮುದಾಯವನ್ನು, ವಿಶೇಷವಾಗಿ ಪರಿಶಿಷ್ಟ ಪಂಗಡಗಳನ್ನು ನೋಯಿಸುವ ಅಥವಾ ಗುರಿಯಾಗಿಸುವ ಉದ್ದೇಶವಿಲ್ಲ. ನನ್ನ ಹೇಳಿಕೆಯು ತಪ್ಪಾಗಿ ಅರ್ಥೈಸಲ್ಪಟ್ಟಿದ್ದರೆ ಅಥವಾ ನೋವುಂಟುಮಾಡಿದ್ದರೆ, ನಾನು ಪ್ರಾಮಾಣಿಕವಾಗಿ ವಿಷಾದ ವ್ಯಕ್ತಪಡಿಸುತ್ತೇನೆ. ಶಾಂತಿ, ಪ್ರಗತಿ ಮತ್ತು ಒಗ್ಗಟ್ಟಿನ ಬಗ್ಗೆ ಮಾತನಾಡುವುದು ನನ್ನ ಏಕೈಕ ಉದ್ದೇಶವಾಗಿತ್ತು. ನಾನು ಒಗ್ಗಟ್ಟನ್ನು ಹೆಚ್ಚಿಸಲು ಬಯಸುತ್ತೇನೆ ಹೊರತು ಎಂದಿಗೂ ವಿಭಜಿಸಲು ಬಯಸುವುದಿಲ್ಲ’ ಎಂದು ಬರೆದಿದ್ದಾರೆ. ಸದ್ಯ ಈ ಬಗ್ಗೆ ದೂರು ದಾಖಲಿಸಿಕೊಂಡ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
To my dear brothers ❤️ pic.twitter.com/QBGQGOjJBL
— Vijay Deverakonda (@TheDeverakonda) May 3, 2025