ಬೆಂಗಳೂರು: ಸಿದ್ದರಾಮಯ್ಯ ಅವರು ಅಧಿಕಾರದ ಸಿಂಹಾಸನವನ್ನು ಆರಿಸಿಕೊಂಡರೇ ಹೊರತು ಜನಸಾಮಾನ್ಯರನ್ನಲ್ಲ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಈ ಕುರಿತು ಎಕ್ಸ್ನಲ್ಲಿ ಕಿಡಿಕಾರಿರುವ ಅವರು,
ಸಿಎಂ ಹೇಳಿಕೆ ಖಂಡಿಸಿದ್ದಾರೆ. ಆರ್ಸಿಬಿಯ ಗೆಲುವಿಗಾಗಿ ಎರಡು ಕಾರ್ಯಕ್ರಮಗಳು ಆಯೋಜನೆ ಮಾಡಲಾಗಿತ್ತು. ಒಂದು ವಿಐಪಿಗಳಿಗಾಗಿ ವಿಧಾನಸೌಧದಲ್ಲಿ, ಇನ್ನೊಂದು ಜನಸಾಮಾನ್ಯರಿಗಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರದ ಸಿಂಹಾಸನವನ್ನು ಆರಿಸಿಕೊಂಡರೇ ಹೊರತು ಜನಸಾಮಾನ್ಯರನ್ನಲ್ಲ.
11 ಅಭಿಮಾನಿಗಳು ಕಾಲ್ತುಳಿತದಲ್ಲಿ ಸಾವನ್ನಪ್ಪಿದಾಗ, ಸಚಿವರ ಕುಟುಂಬಗಳು ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ನಿರತರಾಗಿದ್ದರು. ಆದರೂ ಕೂಡ ಮುಖ್ಯಮಂತ್ರಿಗಳ ಪ್ರತಿಕ್ರಿಯೆ? ಅದು ನಮ್ಮ ಕಾರ್ಯಕ್ರಮವಾಗಿರಲಿಲ್ಲ. ಕ್ರೀಡಾಂಗಣವು ವಿಧಾನಸೌಧದಿಂದ ಕೂಗಳತೆಯ ದೂರದಲ್ಲಿದೆ. ಅದು ಪಾಕಿಸ್ತಾನವಲ್ಲ.
ಇದು ನಿಮ್ಮ ರಾಜ್ಯ, ನಿಮ್ಮ ನಗರ, ನಿಮ್ಮ ಜನರು. ನೀವು ರಾಜ್ಯವನ್ನು ಮುನ್ನಡೆಸಲು ಆಯ್ಕೆಯಾದವರು, ಕಾರ್ಯಕ್ರಮದಲ್ಲಿ ಅತಿಥಿಯಂತೆ ವರ್ತಿಸುವುದನ್ನು ಮೊದಲು ನಿಲ್ಲಿಸಿ. ಫೋಟೋ-ಶೋಗಳಿಗಾಗಿ ನಿಮ್ಮನ್ನು ನೇಮಿಸಲಾಗಿಲ್ಲ. ಜನರ ಜೀವಗಳನ್ನು ರಕ್ಷಿಸಲು ನಿಮ್ಮನ್ನು ನೇಮಿಸಲಾಗಿದೆ. ಆದರೆ ನೀವು ಮಾತ್ರ ಜನರ ಜೀವಗಳನ್ನು ರಕ್ಷಿಸಲು ವಿಫಲರಾಗಿದ್ದಿರಿ ಎಂದು ಕಿಡಿಕಾರಿದ್ದಾರೆ.