ಬೆಳಗಾವಿ : ಬೆಳಗಾವಿ ವಿಚಾರವಾಗಿ ನಿರಂತರವಾಗಿ ಖ್ಯಾತೆ ತೆಗೆಯುವ ಮಹಾರಾಷ್ಟ್ರ ಇದೀಗ ಮತ್ತೆ ಸುದ್ದಿಯಾಗಿದೆ. ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಇರುವ ಶಿವಾಜಿ ವಿಶ್ವವಿದ್ಯಾಲಯವು ಗಡಿ ಭಾಗದ ಮರಾಠಿ ಭಾಷಿಕ ವಿದ್ಯಾರ್ಥಿಗಳಿಗೆ ಬಂಫರ್ ಆಫರ್ ಕೊಡುವ ಮೂಲಕ ತನ್ನತ್ತ ಸೆಳೆಯುವ ಯತ್ನ ನಡೆಸಿದೆ.
ಹೌದು, ಗಡಿ ಸಮಸ್ಯೆ ಇರೋ ಬೆಳಗಾವಿ ಸೇರಿ 165 ಗ್ರಾಮಗಳ ವಿದ್ಯಾರ್ಥಿಗಳಿಗೆ ಆಫರ್ ನೀಡಿದ್ದು, ಶೇ 75ರಷ್ಟು ಶುಲ್ಕು ವಿನಾಯಿತಿ, ಉಚಿತ ಹಾಸ್ಟೆಲ್ ಸೌಲಭ್ಯ ನೀಡಲು ಮುಂದಾಗಿದೆ. ಮರಾಠಿ ಭಾಷಿಕ ವಿದ್ಯಾರ್ಥಿಗಳಿಗಾಗಿ ಬೆಳಗಾವಿಯ ಮೂರು ಕಡೆಗಳಲ್ಲಿ ಕಾರ್ಯಾಗಾರ ಆಯೋಜಿಸಿದೆ. ಏಪ್ರಿಲ್ 22ರಂದು ನಡೆಯಲಿರೋ ಏಕಕಾಲದಲ್ಲಿ ಕಾರ್ಯಾಗಾರ ನಡೆಯಲಿದ್ದು, ನಿಪ್ಪಾಣಿ, ಬೆಳಗಾವಿ ಹಾಗೂ ಖಾನಾಪುರದಲ್ಲಿ ಕಾರ್ಯಾಗಾರ ಮಾಡಿ ಕೋರ್ಸ್, ಸೌಲಭ್ಯ ಬಗ್ಗೆ ಮಾಹಿತಿ ನೀಡಲು ಮುಂದಾಗಿದೆ.
ಶಿವಾಜಿ ವಿಶ್ವವಿದ್ಯಾನಿಲಯದಲ್ಲಿ ಮುಂದಿನ ತಿಂಗಳು ವಿವಿಧ ಕೋರ್ಸ್ ಗಳ ಪ್ರವೇಶಾತಿ ಆರಂಭವಾಗಿದ್ದು, ಗಡಿ ಭಾಗದ ವಿದ್ಯಾರ್ಥಿಗಳನ್ನು ಸೆಳೆಯಲು ಮುಂದಾಗಿದೆ. ಹೀಗಾಗಿ ನಾನು ಮರಾಠಿ ಭಾಷಿಕ ಎಂದು ಪ್ರಮಾಣ ಪತ್ರ ಕೊಡುವ ಅಭ್ಯರ್ಥಿಗಳಿಗೆ ರಿಯಾಯಿತಿ ನೀಡುತ್ತಿದೆ.
ಮಹಿಳಾ ವಿವಿ ಸೇರಿ ಉತ್ತರ ಕರ್ನಾಟಕದಲ್ಲೇ ಐದಕ್ಕೂ ಅಧಿಕ ವಿಶ್ವವಿದ್ಯಾಲಯಗಳಿವೆ. ಹೀಗಿದ್ದರೂ ಶಿವಾಜಿ ವಿಶ್ವವಿದ್ಯಾನಿಲಯವು ಬೆಳಗಾವಿ ಗಡಿ ಭಾಗದ ಮರಾಠಿ ಭಾಷಿಕ ವಿದ್ಯಾರ್ಥಿಗಳಿಗೆ ಆಫರ್ ನೀಡುತ್ತಿದೆ. ಒಕ್ಕೂಟ ವ್ಯವಸ್ಥೆಗೆ ಮಹಾ ಸರ್ಕಾರ ಧಕ್ಕೆ ತರುತ್ತಿದ್ದರೂ ರಾಜ್ಯ ಸರ್ಕಾರ ಮೌನವಹಿಸಿರೋದು ಮಾತ್ರ ವಿಪರ್ಯಾಸದ ಸಂಗತಿಯಾಗಿದೆ.