ಬೆಂಗಳೂರು: RCB ವಿಜಯೋತ್ಸವ ಹಿನ್ನೆಲೆಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆದಂತಹ ದುರ್ಘಟನೆಗೆ ಸಂಬಂಧಿಸಿದಂತೆ ವಿಧಾನ ಪರಿಷತ್ ಶಾಸಕರಾದ ಟಿ ಎ ಶರವಣ ಅವರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಧಾನಸೌಧ ಭದ್ರತಾ ಡಿಸಿಎಂ ಅವರು ವಿಧಾನಸೌಧದ ಮುಂದಿನ ಕಾರ್ಯಕ್ರಮದ ಬಗ್ಗೆ ಅಸಹಾಯಕತೆ ವ್ಯಕ್ತ ಪಡಿಸಿ ಬರೆದ ಪತ್ರವೇ ನನಗೆ ಗೊತ್ತಿಲ್ಲ ಎಂದು ಸಿಎಂ ಹೇಳಿದ್ದಾರೆ.
ಖುದ್ದು ಮುಖ್ಯಮಂತ್ರಿಗಳೇ ತಮ್ಮ ನಾಯಕತ್ವದ ರಾಜ್ಯದಲ್ಲಿ ಮುಖ್ಯ ಸಂಗತಿಗಳೇ ತಮ್ಮ ಗಮನಕ್ಕೆ ಬಂದಿಲ್ಲ ಎಂದು ಹೇಳಿರುವುದು ಆಡಳಿತ ವ್ಯವಸ್ಥೆಯ ಮೇಲೆ ಅವರ ಹಿಡಿತ ಇಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಅದಲ್ಲದೆ ಎರಡನೇ ಬಾರಿಗೆ ಸಿಎಂ ಆಗಿರುವ ಸಿದ್ದರಾಮಯ್ಯ ಆಡಳಿತದ ಮೇಲಿನ ನಿಯಂತ್ರಣ ಕಳೆದು ಕೊಂಡಿದ್ದಾರೆ. ಎಂದು ಕಿಡಿಕಾರಿದ್ದಾರೆ.
ಇಡೀ ಕಾರ್ಯಕ್ರಮಗಳ ಬಗ್ಗೆ ಗೃಹ ಮಂತ್ರಿಗೆ ಗೊತ್ತೇ ಇಲ್ಲ ಎನ್ನುವುದು ಇನ್ನಷ್ಟು ನಾಚಿಕೆಗೇಡಿನ ಸಂಗತಿ. ಒಬ್ಬ ಗೃಹ ಸಚಿವರಾಗಲು ಅರ್ಹತೆ ಕೆಳೆದುಕೊಂಡಿರುವ ಡಾ.ಪರಮೇಶ್ವರ್ ಯಾವ ಅರ್ಹತೆಯ ಮೇಲೆ ಅಧಿಕಾರದಲ್ಲಿಮುಂದುವರೆಯುತ್ತಾರೆಯೋ ಅವರೇ ಹೇಳಬೇಕು.
ಇನ್ನೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ವರ್ತನೆ ಹಾಸ್ಯಾಸ್ಪದ. ಆರ್.ಸಿ. ಬಿ. ತಂಡವನ್ನು ಸ್ವಾಗತಿಸಲು ಅವರೇ ವಿಮಾನ ನಿಲ್ದಾಣಕ್ಕೆ ಹೋಗಿ, ಅವರ ದ್ವಜ ಕೈಯಲ್ಲಿ ಹಿಡಿದು ಕೊಂಡು ಬಂದ ರೀತಿ ನೋಡಿದ್ರೆ..ತಾವು ಹೊಂದಿರುವ ಸ್ಥಾನದ ಘನತೆಯನ್ನು ಅವರು ಮರೆತಿರುವಂತಿದೆ. ಅವರ ವರ್ತನೆ ಕನ್ನಡಿಗರು ನಾಚಿ ತಲೆತಗ್ಗಿಸುವ ರೀತಿಯಲ್ಲಿ ಇದೆ.
ಇನ್ನೂ ಚಿನ್ನಸ್ವಾಮಿ ಕ್ರೀಡಾಂಗಣದ ಕಾರ್ಯಕ್ರಮಕ್ಕೆ ಅನುಮತಿ ಕೊಟ್ಟಿಲ್ಲ.
ಅದಕ್ಕೂ ಸರಕಾರಕ್ಕೂ ಸಂಬಂಧ ಇಲ್ಲ ಎಂದು ಸಿಎಂ ಹೇಳಿದ್ದಾರೆ. ಹಾಗಾದ್ರೆ ಡಿಸಿಎಂ ಈ ಕಾರ್ಯಕ್ರಮಕ್ಕೆ ಯಾಕೆ ಹೋದರು? ಡಿಸಿಎಂ ಅವರನ್ನು ಸಂಪುಟದಿಂದ ಸಿಎಂ ವಜಾ ಮಾಡುತ್ತಾರ? ಸ್ಟೇಡಿಯಂ ಕಾರ್ಯಕ್ರಮಕ್ಕೆ ಅನುಮತಿ ಇಲ್ಲ ಅಂದಮೇಲೆ ಖುದ್ದು ಡಿಸಿಎಂ ತಮ್ಮ ಅಭಿಮಾನಿಗಳಿಗೆ, ಸಾರ್ವಜನಿಕರಿಗೆ ದೊಡ್ಡ ಸಂಖ್ಯೆಯಲ್ಲಿ ಚಿನ್ನ ಸ್ವಾಮಿ ಸ್ಟೇಡಿಯಂ ಗೆ ಬರುವಂತೆ ಹೇಗೆ ಕರೆ ಕೊಟ್ಟರು? ಈ ಘಟನೆಗಳನ್ನು ನೋಡಿದರೆ ಡಿಸಿಎಂ ಜವಾಬ್ದಾರಿ ಇಲ್ಲದ ರೀತಿ ವರ್ತಿಸಿದ್ದು, ಅವರನ್ನು ಸಂಪುಟದಿಂದ ಬಿಡಬೇಕು ಎನ್ನುವುದಕ್ಕೆ ಪುರಾವೆ ಸಿಗುತ್ತದೆ ಎಂದು ಹೇಳಿದರು.
ಅದಲ್ಲದೆ ಕಾಲ್ತುಳಿತ ಘಟನೆಗಳು ನಡೆದು, ಸಾವುನೋವು ಸಂಭವಿಸಿದ ಬಳಿಕವೂ ಶಿವಕುಮಾರ್ ಅವರು ಚಿನ್ನಸ್ವಾಮಿ ಕ್ರೀಡಾಂಗಣ ವಿಜಯೋತ್ಸವದಲ್ಲಿ ಪಾಲ್ಗೊಂಡಿರುವುದು ನೋಡಿದರೆ ಅವರೊಬ್ಬ ಮಾನವೀಯತೆಯೇ ಇಲ್ಲದ ಮನುಷ್ಯರಾಗಿ ಕಾಣುತ್ತಾರೆ. ಈ ದುರಂತದ ನೈತಿಕ ಹೊಣೆಯನ್ನು ಅವರು ಹೊರಬೇಕಾಗಿದೆ.
ಕುಂಭಮೇಳ ಕಾಲ್ತುಳಿತ ಘಟನೆಯನ್ನು ಪ್ರಸ್ತಾಪಿಸಿ ಮುಖ್ಯಮಂತ್ರಿ ಯೋಗಿ ರಾಜೀನಾಮೆ ಕೊಟ್ಟರ ಎಂದು ಕಾಂಗ್ರೆಸ್ ಕೇಳುತ್ತದೆ. ಈ ಘಟನೆಗೂ ಕುಂಭಮೇಳ ಘಟನೆಗೂ ಸಂಬಂಧ ಇಲ್ಲ. ಇದು ಸರಕಾರಿ ಪ್ರಾಯೋಜಿತ ಹತ್ಯಾಕಾಂಡವಾಗಿದ್ದು, ಪೊಲೀಸರು ಭದ್ರತೆ ನೀಡಲು ಆಗುವುದಿಲ್ಲ ಎಂದು ಹೇಳಿದ ಬಳಿಕವೂ, ಸಾರ್ವಜನಿಕರನ್ನು ಸರಕವೇ ಆಹ್ವಾನಿಸಿ, ಅವರನ್ನು ಸಾಯಿಸಿದೆ. ಇದಕ್ಕೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಗೃಹಮಂತ್ರಿ ಹೊಣೆ ಒತ್ತು ಅಧಿಕಾರದಿಂದ ತೊಲಗಬೇಕು. ಒಂದು ಕ್ಷಣವೂ ಅಧಿಕಾರದಲ್ಲಿ ಇರಲು ಈ ಸರಕಾರಕ್ಕೆ ನೈತಿಕತೆ ಇಲ್ಲ ಎಂದು ವಿಧಾನ ಪರಿಷತ್ ಶಾಸಕರಾದ ಟಿ ಎ ಶರವಣ ಅವರು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.