ಬೆಂಗಳೂರು: ಜಾತಿ-ಜಾತಿಗಳ ನಡುವೆ ವಿಷ ಬೀಜ ಬಿತ್ತಲು ಈ ವರದಿ ರೂಪಿಸಲಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ. ಜಾತಿ ಗಣತಿ ವರದಿ ಕುರಿತು ನಗರದಲ್ಲಿ ಮಾತನಾಡಿದ ಅವರು, ಜಾತಿ ಗಣತಿಯಲ್ಲಿ ಸಮೀಕ್ಷೆ ಮಾಡಿದ್ದವರು ಎಲ್ಲರ ಮನೆಗೆ ಹೋಗಿಲ್ಲ. ಈ ವರದಿಯು ವೈಜ್ಞಾನಿಕವಾಗಿ ಆಗಿಲ್ಲ.
ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿ ಮಾಡಿಸಿರುವ ವರದಿ. ಇದರಲ್ಲಿ ರಾಜಕೀಯ ಇರುವುದರಿಂದ ಇದನ್ನು ಯಾರೂ ಒಪ್ಪಲ್ಲ. ನಾನು ಕೂಡ ಜಾತಿ ಗಣತಿ ಆಗಬೇಕು ಎನ್ನುತ್ತೇನೆ. ಆದರೆ ಯಾರಿಗೋ ಅನುಕೂಲ ಮಾಡಿಕೊಡಲು, ಜಾತಿ-ಜಾತಿಗಳ ನಡುವೆ ವಿಷ ಬೀಜ ಬಿತ್ತಲು ಈ ವರದಿ ರೂಪಿಸಲಾಗಿದೆ. ಕಾಂಗ್ರೆಸ್ಗೆ ಇದೇ ಬೇಕಾಗಿದೆ ಎಂದು ಆಕ್ರೋಶ ಹೊರಹಾಕಿದರು.
ಗುತ್ತಿಗೆದಾರರು ಕಮಿಷನ್ ಆರೋಪ ಮಾಡಿದ್ದು, ಈ ಬಗ್ಗೆ ಕಾಂಗ್ರೆಸ್ ನಾಯಕರು ಸಭೆ ಮಾಡಿ ಚರ್ಚಿಸಲಿ. ಯಾವ ಖಾತೆಗಳಲ್ಲಿ ಎಷ್ಟು ಲೂಟಿ ನಡೆಯುತ್ತಿದೆ ಎಂದು ಹೇಳಿದ್ದಾರೆ. ಕಮಿಷನ್ ಕೊಡುವವರಿಗೆ ಬಿಲ್ ಪಾವತಿಯಾಗುತ್ತದೆ. ಅಬಕಾರಿ ಇಲಾಖೆಯಲ್ಲಿ ಸಚಿವರ ಮಗ ಲೂಟಿ ಮಾಡುತ್ತಿದ್ದಾರೆ. ಸಚಿವರ ಮೇಲೆ ಇಷ್ಟೆಲ್ಲಾ ಆರೋಪ ಬಂದರೂ ಸಿಎಂ ಸಮರ್ಥನೆ ಮಾಡಿಕೊಳ್ಳುತ್ತಾರೆ ಎಂದು ಕಿಡಿಕಾರಿದರು.