ಚಾಮರಾಜನಗರ:- ಜಿಲ್ಲೆಯ ಹನೂರು ತಾಲೂಕಿನ ಆನೆಗುಂದಿ ಗ್ರಾಮದಲ್ಲಿ ಇಬ್ಬರು ಯುವಕರು ಈಜಾಡಲು ತೆರಳಿ ಕೃಷಿ ಹೊಂಡದಲ್ಲಿ ಮುಳುಗಿ ದಾರುಣವಾಗಿ ಮೃತಪಟ್ಟಿರುವ ಘಟನೆ ಭಾನುವಾರ ಸಂಜೆ ನಡೆದಿದೆ. ಮೃತದೇಹಗಳನ್ನು ಹನೂರು ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದ ಶವಗಾರಕ್ಕೆ ಪೊಲೀಸರು ಸಂಜೆ ರವಾನಿಸಲಾಗಿದ್ದು, ಈ ಸಂದರ್ಭದಲ್ಲಿ ಮನೆಮಂದಿಯ ಆಕ್ರಂದನ ಮುಗಿಲು ಮುಟ್ಟುವಂತಿತ್ತು.
ಜಸ್ಟ್ 2 ಸೆಕೆಂಡ್: ಮಹಿಳೆ ಸರ ಕದ್ದೊಯ್ದ ಕಳ್ಳ.. ಸಿಸಿಟಿವಿ ದೃಶ್ಯ ಇಲ್ಲಿದೆ!
ಮೃತರಾದವರನ್ನು ಪಿಜಿ ಪಾಳ್ಯ ಗ್ರಾಮದ ಚಾಮರಾಜು (25) ಹಾಗೂ ಆಕಾಶ್ (22) ಎಂದು ಗುರುತಿಸಲಾಗಿದೆ. ಚಾಮರಾಜು ಬೆಂಗಳೂರಿನಲ್ಲಿ ಚಾಲಕ ವೃತ್ತಿ ಮಾಡುತ್ತಿದ್ದರೆ, ಆಕಾಶ್ ಕೂಡ ಬೆಂಗಳೂರಿನಲ್ಲಿ ಬೇಕರಿಯಲ್ಲಿ ಕೆಲಸಮಾಡುತ್ತಿದ್ದರು.
ಭಾನುವಾರ ಸಂಬಂಧಿಕರ ಗೃಹಪ್ರವೇಶದ ಹಿನ್ನೆಲೆಯಲ್ಲಿ ಊರಿಗೆ ಬಂದಿದ್ದ ಇಬ್ಬರೂ, ಕಾರ್ಯಕ್ರಮ ಮುಗಿದ ನಂತರ ಆನೆಗುಂದಿ ಗ್ರಾಮದ ದೊಡ್ಡಪ್ಪ ಕೆಂಪರಾಜುರವರ ಜಮೀನಿನಲ್ಲಿ ಇರುವ ಕೃಷಿ ಹೊಂಡದಲ್ಲಿ ಈಜಲು ತೆರಳಿದ್ದರು. ಈಜುವ ವೇಳೆ ನೀರಿನಲ್ಲಿ ಮುಳುಗತೊಡಗಿ, ಮೇಲಕ್ಕೆ ಬಾರಲಾಗದೆ ಅಸುನೀಗಿದ್ದಾರೆ ಎನ್ನಲಾಗಿದೆ .
ಘಟನೆಯ ಮಾಹಿತಿ ಪಡೆದ ಹನೂರು ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮೃತದೇಹಗಳನ್ನು ವಶಕ್ಕೆ ಪಡೆದು ಹನೂರು ಪಟ್ಟಣದ ಶವಗಾರಕ್ಕೆ ರವಾನಿಸಿದ್ದಾರೆ.