ಬೆಳಗಾವಿ:- ಬೈಲಹೊಂಗಲ ತಾಲೂಕಿನ ಇಂಚಲ ಗ್ರಾಮದಲ್ಲಿ ಕೀಟನಾಶಕ ಮಾತ್ರೆಗಳನ್ನು ನುಂಗಿ ಆಸ್ಪತ್ರೆಗೆ ದಾಖಲಾಗಿದ್ದ ನವವಿವಾಹಿತೆ ಒಬ್ಬರು ಜೀವ ಕಳೆದುಕೊಂಡಿರುವ ಘಟನೆ ಜರುಗಿದೆ.
22 ವರ್ಷದ ಲಕ್ಷ್ಮಿ ಮಂಜುನಾಥ ಹೂಗಾರ ಮೃತ ಮಹಿಳೆ. ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಲಕ್ಷ್ಮಿ ಕೀಟನಾಶಕ ಮಾತ್ರೆಗಳನ್ನು ನುಂಗಿದ್ದಾಳೆ. ಇದರಿಂದ ಅಸ್ವಸ್ಥರಾಗಿದ್ದ ಅವರನ್ನು ಕುಟುಂಬಸ್ಥರು ಮೊದಲು ಬೈಲಹೊಂಗಲದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಆದರೆ ಹೆಚ್ಚಿನ ಚಿಕಿತ್ಸೆ ಬೇಕಿದ್ದರಿಂದ ಲಕ್ಷ್ಮಿಯನ್ನು ಅಲ್ಲಿಂದ ಬೆಳಗಾವಿಯ ಬಿಮ್ಸ್ ಆಸ್ಪತ್ರೆ ದಾಖಲು ಮಾಡಲಾಗಿತ್ತು.
ಕಳೆದ ಡಿಸೆಂಬರ್ 7 ರಂದು ಲಕ್ಷ್ಮಿ, ಮಂಜುನಾಥ ಹೂಗಾರ ಎನ್ನುವರನ್ನು ಮದುವೆಯಾಗಿ ಹೊಸ ಬಾಳಿಗೆ ಕಾಲಿಟ್ಟಿದ್ದರು. ಮದುವೆಯಾಗಿ ಕೇವಲ ಐದು ತಿಂಗಳುಗಳು ಆಗಿದ್ದವು. ಇದರ ನಡುವೆ ಕ್ರಿಮಿನಾಶಕದ ಮಾತ್ರೆ ಸೇವನೆ ಮಾಡಿ ಲಕ್ಷ್ಮಿ ಜೀವ ಕಳೆದುಕೊಂಡಿದ್ದಾರೆ.