ಕನ್ನಡ ಚಿತ್ರರಂಗದ ಹಿರಿಯ ನಟ ಬ್ಯಾಂಕ್ ಜನಾರ್ಧನ್ ಕೊನೆಯುಸಿರೆಳೆದ್ದಾರೆ. ವಯೋಸಹಜ ಕಾಯಿಲೆಯಿಂದ 75 ವರ್ಷದ ಜನಾರ್ಧನ್ ಬದುಕಿನ ಪಯಣ ಮುಗಿಸಿದ್ದಾರೆ. ಸುಮಾರು 800ಕ್ಕೂ ಹೆಚ್ಚು ಚಿತ್ರಗಳಲ್ಲಿ ಪೋಷಕ ನಟನಾಗಿ ಪಾತ್ರ ಪೋಷಣೆ ಮಾಡಿದ್ದ ಜನಾರ್ಧನ್ ಹೆಸರಿನ ಮುಂದೆ ಬ್ಯಾಂಕ್ ಸೇರ್ಪಡೆಯಾಗಿದ್ದರ ಹಿಂದೆ ಒಂದು ಕಥೆ ಇದೆ.
ಜನಾರ್ಧನ್ ಸಿನಿಮಾ ರಂಗಕ್ಕೂ ಬರುವ ಮೊದಲು ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದರು. ಎಸ್ ಎಸ್ ಎಲ್ ಸಿ ಪಾಸ್ ಆಗಿದ್ದ ಅವರು ಅಂದು ಬ್ಯಾಂಕ್ ಕೆಲಸಕ್ಕೆ ಸೇರಿಕೊಂಡರು. ಹಿರಿಯ ನಟ ಧೀರೇಂದ್ರ ಗೋಪಾಲ್ ಅವರ ಸಹಕಾರದಿಂದ ಚಿತ್ರರಂಗಕ್ಕೆ ಬಂದರು. ಊರಿಗೆ ಉಪಕಾರಿ ಜನಾರ್ಧನ್ ನಟಿಸಿದ ಮೊದಲ ಚಿತ್ರ. ಹೀಗೆ ಒಂದೊಂದೇ ಸಿನಿಮಾಗಳ ಅವಕಾಶ ಅವರನ್ನು ಹುಡುಕೊಂಡು ಬಂತು. ಚಿತ್ರರಂಗದಲ್ಲಿ ಅವಕಾಶ ಹೆಚ್ಚಾದಂತೆ ತಮ್ಮ ಬ್ಯಾಂಕ್ ಕೆಲಸ ಬಿಟ್ಟರು.
ಕನ್ನಡ ಚಿತ್ರರಂಗದಲ್ಲಿ ಜನಾರ್ಧನ್ ಹೆಸರಿನಲ್ಲಿ ಅಂದು ಸಾಕಷ್ಟು ಜನ ಕೆಲಸ ಮಾಡುತ್ತಿದ್ದರು. ಹಾಗಾಗಿ ವಿಭಿನ್ನವಾಗಿರಲಿ, ಗುರ್ತಿಸಲು ಸುಲಭವಾಗಲಿ ಎನ್ನುವ ಕಾರಣಕ್ಕೆ ಪಿಆರ್ಓ ಆಗಿದ್ದ ನಾಗೇಂದ್ರ ಅವರು ಇನ್ನು ಮುಂದೆ ನಿಮ್ಮ ಹೆಸರನ್ನು ಬ್ಯಾಂಕ್ ಜನಾರ್ಧನ್ ಎಂದು ಬದಲಿಸಿಕೊಳ್ಳಿ ಎಂದಿದ್ದರು. ಅವರ ಸಲಹೆಯಂತೆ ಬ್ಯಾಂಕ್ ಜನಾರ್ಧನ್ ಎಂಬ ಹೆಸರು ಖಾಯಂ ಆಗಿತ್ತು. ಅಂದು ಪೋಷಮ ಕಲಾವಿದರಿಗೆ ಲಕ್ಷ ಲಕ್ಷ ಸಂಭಾವನೆ ಸಿಗುತ್ತಿರಲಿಲ್ಲ. ನನ್ನ ಹೆಸರಿನಲ್ಲಿ ಬ್ಯಾಂಕ್ ಇದೆ. ಆದರೆ ನನ್ನ ಬ್ಯಾಂಕ್ ಅಕೌಂಟ್ನಲ್ಲಿ ಏನಿಲ್ಲ ಎಂದು ಸ್ವತ: ಜನಾರ್ಧನ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
1991ರ ಜನವರಿ 24 ರಂದು ತೆರೆಗೆ ಬಂದ ʼಅಜಗಜಾಂತರʼ ಸಿನಿಮಾ, ʼಗೌರಿ ಗಣೇಶ’, ‘ತರ್ಲೆ ನನ್ ಮಗ’, ‘ಗಣೇಶ ಸುಬ್ರಹ್ಮಣ್ಯ’, ‘ರುಪಾಯಿ ರಾಜಾ’, ‘ಚೆಲುವ’, ‘ಕೌರವ’, ‘H20’, ‘ರಕ್ತ ಕಣ್ಣೀರು’, ‘ರಂಗ ಎಸ್ಎಸ್ಎಲ್ಸಿ’, ‘ಕಾಶಿ ಫ್ರಮ್ ವಿಲೇಜ್’, ‘ಚೆಲ್ಲಾಟ’, ‘ಏಕದಂತ’ ಮುಂತಾದ ಸಿನಿಮಾಗಳಲ್ಲಿ ಹಾಸ್ಯ ನಟರಾಗಿ ಬ್ಯಾಂಕ್ ಜನಾರ್ಧನ್ ನಟಿಸಿದ್ದಾರೆ.