ಅಜೇಯವಾಗಿ ಫೈನಲ್ ಪ್ರವೇಶಿಸಿ, ಆಸ್ಟ್ರೇಲಿಯಾ ವಿರುದ್ಧ ನಡೆದ ಅಂತಿಮ ಹಣಾಹಣಿಯಲ್ಲಿ ಹೀನಾಯವಾಗಿ ಸೋಲುಂಡುವ ಮೂಲಕ ಟೀಮ್ ಇಂಡಿಯಾ ಅಸಂಖ್ಯಾತ ಕ್ರೀಡಾಭಿಮಾನಿಗಳಿಗೆ ನಿರಾಸೆ ಉಂಟುಮಾಡಿತು.
ಇಂದಿಗೂ ಈ ಪಂದ್ಯವನ್ನು ನೆನೆದರೆ ಭಾರತೀಯರಲ್ಲಿ ಬೇಸರ ತುಂಬಿಕೊಳ್ಳುತ್ತದೆ. ಫೈನಲ್ ಸೋಲಿನಿಂದ ತೀವ್ರವಾಗಿ ಕುಗ್ಗಿ ಹೋಗಿದ್ದ ನಾಯಕ ರೋಹಿತ್ ಶರ್ಮ ಅಂದಿನಿಂದ ಇಂದಿನವರೆಗೂ ಈ ಬಗ್ಗೆ ಮುಕ್ತವಾಗಿ ಮಾತನಾಡಿರಲಿಲ್ಲ. ಕೊನೆಗೂ ಮೌನ ಮುರಿದಿರುವ ರೋಹಿತ್, ಮುಕ್ತ ಮನಸ್ಸಿನಿಂದ ಎಲ್ಲವನ್ನು ಅಭಿಮಾನಿಗಳ ಮುಂದೆ ಹೇಳಿಕೊಂಡಿದ್ದಾರೆ.
ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಅಭಿಮಾನಿಗಳೊಂದಿಗೆ ನಡೆಸಿದ ಚಾಟಿಂಗ್ನಲ್ಲಿ ಎಲ್ಲವನ್ನು ತಿಳಿಸಿದ್ದಾರೆ. ರೋಹಿತ್ ಖಿನ್ನತೆಗೆ ಜಾರಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಇದೀಗ ಇನ್ಸ್ಟಾಗ್ರಾಂ ವಿಡಿಯೋ ನೋಡಿದರೆ ಅದು ನಿಜ ಎನಿಸುತ್ತಿದೆ. ಫೈನಲ್ ಪಂದ್ಯ ಸೋಲಿನಿಂದ ರೋಹಿತ್ ತುಂಬಾ ಕುಗ್ಗಿರುವಂತೆ ಮತ್ತು ಇನ್ನೂ ಪೂರ್ತಿಯಾಗಿ ಅದರಿಂದ ಹೊರ ಬರದಿರುವುದು ಗೋಚರವಾಗುತ್ತದೆ.
ಮೊದಲ ಕೆಲವು ದಿನಗಳಲ್ಲಿ ಸೋಲನ್ನು ಮರೆತು ಹೇಗೆ ಹಿಂತಿರುಗಬೇಕು ಎಂದು ನನಗೆ ತಿಳಿದಿರಲಿಲ್ಲ. ಏನು ಮಾಡಬೇಕೆಂಬುದು ಸಹ ನನಗೆ ತಿಳಿದಿರಲಿಲ್ಲ. ನಿಮಗೆ ಗೊತ್ತಾ, ನನ್ನ ಕುಟುಂಬ, ನನ್ನ ಸ್ನೇಹಿತರು ನನ್ನನ್ನು ಸಹಜ ಸ್ಥಿತಿಗೆ ತರಲು ಸಾಕಷ್ಟು ಪ್ರಯತ್ನಿಸಿದರು. ನನ್ನ ಸುತ್ತಲೂ ಇದ್ದ ವಿಷಯಗಳನ್ನು ಸಾಕಷ್ಟು ಹಗುರವಾಗಿರಿಸಿದರು. ಇದು ನನಗೆ ತುಂಬಾ ಸಹಾಯವಾಯಿತು. ಸೋಲನ್ನು ಜೀರ್ಣಿಸಿಕೊಳ್ಳುವುದು ಸುಲಭವಾಗಲಿಲ್ಲ. ಆದರೆ, ಜೀವನ ಮುಂದೆ ಸಾಗಲೇಬೇಕಲ್ಲ. ಜೀವನದಲ್ಲಿ ನೀವು ಖಂಡಿತ ಮುಂದೆ ಸಾಗಬೇಕು. ಆದರೆ, ಪ್ರಾಮಾಣಿಕವಾಗಿ, ಇದು ಕಠಿಣವಾಗಿತ್ತು. ಸುಮ್ಮನೇ ಮುಂದೆ ಸಾಗಲು ಇದು ಅಷ್ಟೊಂದು ಸುಲಭವಾಗಿರಲಿಲ್ಲ. ನಾನು ಯಾವಾಗಲೂ 50 ಓವರ್ ವಿಶ್ವಕಪ್ ಟೂರ್ನಿ ನೋಡುತ್ತಾ ಬೆಳೆದಿದ್ದೇನೆ ಮತ್ತು ನನಗೆ ಅದು ಅಂತಿಮ ಬಹುಮಾನವಾಗಿತ್ತು. ಹೀಗಾಗಿ ಇದರಿಂದ ಹೊರಬರುವುದು ತುಂಬಾನೇ ಕಷ್ಟವಾಯಿತು ಎಂದು ರೋಹಿತ್ ಹೇಳಿದ್ದಾರೆ.