ಬೆಂಗಳೂರು:- ಮೂಗಿಗೆ ತುಪ್ಪ ಸವರುವುದಕ್ಕೆ ನಾವು ಗಂಜಲ ರಾಜ್ಯದವರಲ್ಲ ಎಂದು ಬಿಕೆ ಹರಿಪ್ರಸಾದ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಏನು ಮಾಡೋದು ಕಾಂಗ್ರೆಸ್ ಪಕ್ಷದಲ್ಲಿ ಕೆಲವರು ಪಂಚಾಂಗ ನೋಡ್ತಾರೆ. ಕೆಲವರು ಗಿಳಿಶಾಸ್ತ್ರ ಕೇಳ್ತಾರೆ. ನಾವು ಸಂವಿಧಾನ ನೋಡುತ್ತೇವೆ. ಸಂವಿಧಾನದಲ್ಲಿ ಎಲ್ಲದಕ್ಕೂ ಅವಕಾಶ ಇದೆ ಎಂದರು.
ಮೂಗಿಗೆ ತುಪ್ಪ ಸವರುವುದಕ್ಕೆ ನಾವು ಗಂಜಲ ರಾಜ್ಯದವರು ಅಲ್ಲ. ನಾವು ನಂದಿನ ಹಾಲಿನ ರಾಜ್ಯದವರು. ಏಪ್ರಿಲ್ 17ಕ್ಕೆ ಜಾತಿಗಣತಿ ಬಗ್ಗೆ ತೀರ್ಮಾನ ಆಗುತ್ತದೆ ಎಂದು ಸ್ಪಷ್ಟನೆ ನೀಡಿದರು.
ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣ ಏರಿಕೆ ಆಗಬೇಕು. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲೇ ಇದೆ. ದತ್ತಾಂಶ ಇಲ್ಲ ಎಂದು ಹೇಳಿ ಆಗ ಸುಪ್ರೀಂ ಕೋರ್ಟ್ ಸೂಚನೆ ಕೊಟ್ಟಿತ್ತು. ಜಡ್ಜ್ಮೆಂಟ್ ಕೊಟ್ಟಿಲ್ಲ. 50% ಮೀಸಲಾತಿ ದಾಟುವಂತಿಲ್ಲ ಅನ್ನೋದು ಡೈರೆಕ್ಷನ್ ಅಷ್ಟೇ ಎಂದು ಹೇಳಿದರು.
ಈಗ ನಮ್ಮ ಬಳಿ ಜಾತಿಗಣತಿ ಡೇಟಾ ಇದೆ. ಅದರ ಪ್ರಕಾರ ಮೀಸಲಾತಿ ಹೆಚ್ಚಿಸಬಹುದು. ರಾಹುಲ್ ಗಾಂಧಿ ಅವರು 75% ಮೀಸಲಾತಿ ಕೊಡುತ್ತೇವೆ ಎಂದು ಹೇಳಿದ್ದಾರೆ. ತೆಲಂಗಾಣದಲ್ಲಿ ಆಗಿದೆ. ಎರಡನೇ ಹೆಜ್ಜೆ ಕರ್ನಾಟಕದ್ದು, ನಂತರ ಜಾರ್ಖಂಡ್, ಬಳಿಕ ದೇಶದೆಲ್ಲೆಡೆ ಜಾರಿಗೆ ತರುತ್ತೇವೆ ಎಂದರು.